ವಂಚನೆ ಪ್ರಕರಣದಲ್ಲಿ ಎಂಇಪಿ ಅಧ್ಯಕ್ಷೆ ನೌಹೀರಾ ಶೇಖ್ ಬಂಧನ
ಹೈದರಾಬಾದ್, ಅಕ್ಟೋಬರ್ 18: ಆರ್ಥಿಕ ಅವ್ಯವಹಾರದ ಆರೋಪದ ಮೇಲೆ ಎಂಇಪಿ ಅಧ್ಯಕ್ಷೆ ಹಾಗೂ ಹೀರಾ ಗೋಲ್ಡ್ ಕಂಪನಿ ನಿರ್ದೇಶಕಿ ನೌಹೀರ್ ಶೇಖ್ ಅವರನ್ನು ತೆಲಂಗಾಣ ಪೊಲೀಸರು, ದೆಹಲಿಯಲ್ಲಿ ಬಂಧಿಸಿದ್ದಾರೆ.
ದೆಹಲಿಯಿಂದ ನೌಹೀರಾ ಅವರನ್ನು ನೇರವಾಗಿ ನಾಂಪಲ್ಲಿಯ ಕೋರ್ಟಿಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಎಂಇಪಿ ಅಧ್ಯಕ್ಷೆ ನೌಹೀರಾ ವಿರುದ್ಧ ವಂಚನೆ ಆರೋಪ: ದೂರು
ಹೈದರಾಬಾದ್ ಮೂಲದ ಹೀರಾ ಸಮೂಹ ಸಂಸ್ಥೆ ಸೇರಿ 15ಕ್ಕೂ ಅಧಿಕ ಕಂಪನಿಗಳನ್ನು ಹೊಂದಿದ್ದು, ಯುಎಇ ಹಾಗೂ ದುಬೈನಲ್ಲೂ ಕಚೇರಿಗಳನ್ನು ಹೊಂದಿದೆ. ಹೂಡಿಕೆ ಡಬ್ಬಲ್ ಮಾಡುವ ನೆಪದಲ್ಲಿ ಸಾರ್ವಜನಿಕರಿಂದ ಹಣ ಪಡೆಯಲಾಗಿದೆ. ಠೇವಣಿ ಹಾಗೂ ಹೂಡಿಕೆ ರೂಪದಲ್ಲಿ ಹಣ ಸಂಗ್ರಹಿಸಲಾಗಿದೆ. ಇದಕ್ಕೆ ಪ್ರತಿಯಾಗಿ ವಾರ್ಷಿಕವಾಗಿ ಶೇ.36 ಮೊತ್ತವನ್ನು ಹಿಂತಿರುಗಿಸುವುದಾಗಿ ಶೇಖ್ ಭರವಸೆ ನೀಡಿದ್ದರು.
ಆದರೆ, ಹೂಡಿಕೆದಾರರಿಗೆ ಯಾವುದೆ ಹಣ ನೀಡದ ಹಿನ್ನೆಲೆಯಲ್ಲಿ ಸಾಕಷ್ಟು ದೂರುಗಳು ದಾಖಲಾಗಿತ್ತು. ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕದಲ್ಲಿ ಸಂತ್ರಸ್ತರಿದ್ದಾರೆ. ಆಕೆ ಹೆಸರಿನಲ್ಲಿ 160 ಬ್ಯಾಂಕ್ ಖಾತೆಗಳಿವೆ. ಯಾರೆಲ್ಲ ಹೂಡಿಕೆ ಮಾಡಿದ್ದಾರೆ, ಎಷ್ಟು ಪ್ರಮಾಣದಲ್ಲಿ ವಂಚನೆಯಾಗಿದೆ ಎಂಬುದು ಇನ್ನು ತಿಳಿಯಬೇಕಿದೆ ಎಂದು ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಹೇಳಿದರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನೌಹೀರಾ ಅವರ ಎಂಇಪಿ ಪಕ್ಷವು ಭಾರಿ ಮುಖಭಂಗ ಅನುಭವಿಸಿ, ಠೇವಣಿ ಕಳೆದುಕೊಂಡಿತ್ತು. ಈಗ ತೆಲಂಗಾಣದಲ್ಲಿ ಎಲ್ಲಾ 119 ಸ್ಥಾನಗಳಿಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿತ್ತು.
ಬೆಂಗಳೂರಿನ ಜೀವನ್ಭೀಮಾ ನಗರ ಠಾಣೆಯಲ್ಲಿ ದೂರು
ಪಕ್ಷದ ಅಭ್ಯರ್ಥಿಗಳಿಂದಲೇ ಹಣ ಪಡೆದಿದ್ದಲ್ಲದೆ, ಪಾರ್ಟಿ ಫಂಡ್ ನೆಪದಲ್ಲಿ ಅಭ್ಯರ್ಥಿಗಳಿಂದ ಖಾಲಿ ಚೆಕ್ ಪಡೆದು ವಂಚಿಸಿರುವ ಆರೋಪದ ಮೇಲೆ ಬೆಂಗಳೂರಿನ ಜೀವನ್ಭೀಮಾ ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಸಾಗರ ಕ್ಷೇತ್ರದ ಅಭ್ಯರ್ಥಿ ಕಲಾವತಿ ಅವರು ನೌಹೀರಾ ಶೇಖ್ ಅವರು ಚುನಾವಣಾ ಖರ್ಚನ್ನು ಪಕ್ಷದಿಂದಲೇ ನಿರ್ವಹಿಸುವುದಾಗಿ ನನ್ನಿಂದ 5 ಲಕ್ಷ ಪಡೆದಿದ್ದರು. ಚುನಾವಣೆಯಲ್ಲಿ ನಾನು 23 ಲಕ್ಷ ಸಾಲ ಮಾಡಿಕೊಂಡು ಪ್ರಚಾರ ನಡೆಸಿದ್ದೇನೆ. ಆದರೆ, ನನಗೆ ಯಾವುದೇ ಹಣವನ್ನು ವಾಪಸ್ ನೀಡಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.
ಜಾತ್ಯಾತೀತ ಪಕ್ಷ ಎಂದು ಕಣಕ್ಕೆ
ಪಕ್ಷವು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಜಾತ್ಯಾತೀತ ಪಕ್ಷವಾಗಿದ್ದು, ಬರುವ ಚುನಾವಣೆಯಲ್ಲಿ ರಾಜ್ಯದ ಅರ್ಧದಷ್ಟು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ನಮ್ಮ ಪಕ್ಷದ ಚಿನ್ಹೆ ವಜ್ರ ಆಗಿದೆ. ಮಾನವೀಯತೆಗಾಗಿ ನ್ಯಾಯ ಎಂಬ ಧ್ಯೇಯ ಹೊಂದಲಾಗಿದೆ ಎಂದು ಚುನಾವಣೆ ಕಣದಲ್ಲಿ ಎಂಇಪಿ ಸ್ಪರ್ಧಿಸಿತ್ತು.
ಮಾನವ ಹಕ್ಕುಗಳ ಹೋರಾಟಗಾರ್ತಿ, ಉದ್ಯಮಿ ಹಾಗೂ ಹೀರಾ ಸಮೂಹದ ಸಂಸ್ಥಾಪಕಿ ಮತ್ತು ಸಿಇಒ ಡಾ.ನೌಹೆರಾ ಶೇಖ್ ಮಹಿಳೆಯರನ್ನು ಜಾತಿ, ವರ್ಗ, ಧಾರ್ಮಿಕತೆ ಮತ್ತು ಪ್ರದೇಶದ ಭಿನ್ನತೆ ಮೀರಿ ಸಬಲೀಕರಣಗೊಳಿಸುವ ಅಖಿಲ ಭಾರತೀಯ ಮಹಿಳಾ ಸಬಲೀಕರಣ ಪಕ್ಷ (ಎಐಎಂಇಪಿ) ಎಂಬ ರಾಷ್ಟ್ರೀಯ ಪಕ್ಷ ಪ್ರಾರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂದಿದ್ದ ನೌಹೀರಾ
ಭ್ರಷ್ಟಾಚಾರ ತಡೆಯಲು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕಡ್ಡಾಯ, ಬಿಪಿಎಲ್ ಕಾರ್ಡ್ ದಾರರಿಗೆ 35 ಕೆಜಿ ಅಕ್ಕಿ ಪೂರೈಕೆ, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಆಹಾರ ಪೂರೈಕೆ ಕ್ಯಾಂಟೀನ್ ಸ್ಥಾಪನೆ, ಉಚಿತ ಆರೋಗ್ಯ ವಿಮಾ ಸೌಲಭ್ಯ, ಎಲ್ಲಾ ಮಹಿಳೆಯರಿಗೂ ಉಚಿತ ಸ್ಯಾನಿಟರಿ ನ್ಯಾಪ್ ಕಿನ್ ಪೂರೈಕೆ.. ಮುಂತಾದ ಯೋಜನೆಗಳಿವೆ.
ರೈತರ ಸಂಪೂರ್ಣ ಸಾಲ ಮನ್ನ, ಮಹಿಳೆಯರಿಗೆ ಬಡ್ಡಿ ರಹಿತ ಸಾಲ, ರೈತರಿಗೆ ಬೆಳೆ ಬೆಳೆಯುವ ಮುನ್ನ ಮುಂಗಡ ಹಣ ನೀಡುವುದು ಮುಂತಾದ ಯೋಜನೆಗಳನ್ನು ಪ್ರಕಟಿಸಿದ್ದರು.
ಸಾವಿರಾರು ಕೋಟಿ ರು ವ್ಯವಹಾರ
ಹೀರಾ ಗ್ರೂಪ್ ತಿರುಪತಿ, ಹೈದರಾಬಾದಿನಲ್ಲಿ 500 ಕೋಟಿ ರೂ ಮೌಲ್ಯದ ಬಹು ಅಂತಸ್ತಿನ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ದುಬೈನಲ್ಲಿ ಮೌಲ್ಯದ 400 ಕೋಟಿ ರೂ. ಹೋಟೆಲ್ ಗಳು ಮತ್ತು ಕ್ಲಬ್ ಹೌಸ್ ಗಳನ್ನು ಹೊಂದಿರುವ ಮಮಹಿತಿಯಿದೆ.ಸುಮಾರು 43 ದೇಶಗಳು ಆಸ್ತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ ಎಂದು ಆಯುಕ್ತ ಅಂಜನಿ ಕುಮಾರ್ ಹೇಳಿದ್ದಾರೆ.