Just In: ಭಾರಿ ಮಳೆಯಿಂದ ಹೈದರಾಬಾದ್ನಲ್ಲಿ ಜನ ಜೀವನ ಅಸ್ತವ್ಯಸ್ತ
ಹೈದರಾಬಾದ್, ಜುಲೈ 27: ತೆಲಂಗಾಣದಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹೈದರಾಬಾದ್ನ ಕೆಲವು ಭಾಗಗಳಲ್ಲಿ ಬುಧವಾರ ಸಹ ಜನ ಜೀವನ ಅಸ್ತವ್ಯಸ್ತವಾಗಿದೆ.
ಹೈದರಾಬಾದ್ನ ಹಲವಾರು ಪ್ರದೇಶಗಳಲ್ಲಿ ಸಾಧಾರಣದಿಂದ ಲಘು ಮಳೆಯಾಗಿದೆ ಎಂದು ತೆಲಂಗಾಣ ರಾಜ್ಯ ಅಭಿವೃದ್ಧಿ ಯೋಜನಾ ಸೊಸೈಟಿ ಬುಧವಾರ ತಿಳಿಸಿದೆ. ನಗರದ ಹಿಮಾಯತ್ ಸಾಗರ ಮತ್ತು ಉಸ್ಮಾನ್ ಸಾಗರ್ ಜಲಾಶಯಗಳು ಬುಧವಾರ ಬೆಳಗ್ಗೆ 11 ಗಂಟೆಗೆ ಎಫ್ಟಿಎಲ್ (ಫುಲ್ ಟ್ಯಾಂಕ್ ಲೆವೆಲ್) ಸಮೀಪದಲ್ಲಿವೆ ಎಂದು ಹೇಳಿತ್ತು.
ಕಳೆದೆರಡು ದಿನಗಳಿಂದ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಹೈದರಾಬಾದ್ನಲ್ಲಿ ಹರಿಯುವ ಮೂಸಿ ನದಿಯು ತುಂಬಿ ಹರಿಯುತ್ತಿದೆ. ನದಿಯ ಒಳಹರಿವಿನ ಹಿನ್ನೆಲೆಯಲ್ಲಿ ಮೂಸರಂಬಾಗ್ ಮತ್ತು ಚಾದರ್ಘಾಟ್ನಲ್ಲಿನ ಸೇತುವೆಗಳನ್ನು ಮುಚ್ಚಲಾಗಿದೆ.
ಜನವಸತಿ ಪ್ರದೇಶಗಳಾದ ಎಲ್ಬಿ ನಗರ ಮತ್ತು ಮಲಕ್ಪೇಟೆ ಜಲಾವೃತವಾಗಿದ್ದು, ಜನರಿಗೆ ಭಾರಿ ತೊಂದರೆಯಾಗಿದೆ.
IMD ಯ ಹವಾಮಾನ ಮುನ್ಸೂಚನೆ ಮತ್ತು ಎಚ್ಚರಿಕೆಗಳಲ್ಲಿ, ಸೆಂಟರ್ ಬುಧವಾರದಿಂದ ಗುರುವಾರದವರೆಗೆ (ಜುಲೈ 28) ಭದ್ರಾದ್ರಿ-ಕೊತಗುಡೆಂ ಖಮ್ಮಂ, ನಲ್ಗೊಂಡ ಮತ್ತು ಇತರ ಜಿಲ್ಲೆಗಳ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ತೆಲಂಗಾಣದ ಅನೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.
ಹೈದರಾಬಾದ್ನ ಚಾದರ್ಘಾಟ್ ಪ್ರದೇಶದಲ್ಲಿ ನೀರು ತುಂಬಿರುವ ಬೀದಿಗಳಲ್ಲೇ ಸ್ಥಳೀಯ ನಿವಾಸಿಗಳು ಓಡಾಡುತ್ತಿದ್ದಾರೆ. ಮನೆಗಳು ಜಲಾವೃತವಾಗಿದ್ದು, ಭೀತಿಯಲ್ಲೇ ಜನ ಜೀವನ ನಡೆಸುವಂತಾಗಿದೆ.
Recommended Video
ರಾಜ್ಯದ ಕೆಲವೆಡೆ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ತೆಲಂಗಾಣ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಮಂಗಳವಾರ ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು.