ಭಾರೀ ಮಳೆಗೆ ಹೈದರಾಬಾದ್ ನಗರ ತತ್ತರ: ರಸ್ತೆ, ರೆಸ್ಟೋರೆಂಟ್ಗಳು ಜಲಾವೃತ
ಹೈದರಾಬಾದ್, ಅಕ್ಟೋಬರ್ 9: ಹೈದರಾಬಾದ್ ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ನಗರದಲ್ಲಿ ರಾತ್ರಿ 8:30 ರಿಂದ 11 ಗಂಟೆ ನಡುವೆ ಸುಮಾರು 10- 12 ಸೆಂ.ಮೀ. ಮಳೆಯಾಗಿದೆ.
ಭಾರೀ ಮಳೆಯಿಂದಾಗಿ ಹಲವಾರು ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದೆ. ನಗರದ ತಗ್ಗು ಪ್ರದೇಶಗಳಲ್ಲಿನ ಪ್ರಬಲ ಪ್ರವಾಹಕ್ಕೆ ಸಿಲುಕಿದ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಹೈದರಾಬಾದ್ನ ಓಲ್ಡ್ ಸಿಟಿಯಲ್ಲಿ ಭೀಕರ ಪ್ರವಾಹಕ್ಕೆ ಒಳಗಾಗಿರುವ ರೆಸ್ಟೋರೆಂಟ್ನ ವೀಡಿಯೊವನ್ನು ಸುದ್ದಿ ಸಂಸ್ಥೆ ಎಎನ್ಐ ಹಂಚಿಕೊಂಡಿದ್ದು, ಗ್ರಾಹಕರು ಕುಳಿತುಕೊಳ್ಳುವ ಜಾಗದಲ್ಲಿ ತಮ್ಮ ಕಾಲುಗಳನ್ನು ಪ್ರವಾಹದ ನೀರಿನಿಂದ ಮೇಲೆ ಎತ್ತಿ ಆಹಾರ ಸೇವಿಸುತ್ತಿರುವುದು ಕಂಡುಬಂದಿದೆ.
ಹೈದರಾಬಾದ್ ನಿವಾಸಿಗಳು ಹಂಚಿಕೊಂಡ ಇತರ ವಿಡಿಯೋಗಳಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳು ಪ್ರವಾಹಕ್ಕೆ ಸಿಲುಕಿ ತೇಲಿ ಹೋಗುತ್ತಿರುವುದನ್ನು ಮತ್ತು ಪ್ರವಾಹಕ್ಕೆ ಸಿಲುಕಿ ಪ್ರಬಲವಾಗಿರುವ ಪ್ರದೇಶಗಳಲ್ಲಿ ವಸ್ತುಗಳು ಕೊಚ್ಚಿಕೊಂಡು ಹೋಗುವುದನ್ನು ನೋಡಬಹುದಾಗಿದೆ.
ಭಾರೀ ಮಳೆಯ ಸಂದರ್ಭದಲ್ಲಿ ಎಂಟು ವಿಮಾನಗಳನ್ನು ಹತ್ತಿರದ ನಗರಗಳಿಗೆ, ಆರು ವಿಮಾನಗಳನ್ನು ಬೆಂಗಳೂರಿಗೆ ಮತ್ತು ತಲಾ ಒಂದನ್ನು ವಿಜಯವಾಡ ಮತ್ತು ಚೆನ್ನೈಗೆ ತಿರುಗಿಸಲಾಯಿತು.
ಹೈದರಾಬಾದ್ ನಿವಾಸಿಗಳು ಸಾಮಾಜಿಕ ಮಾಧ್ಯಮದಲ್ಲಿ ಕಳೆದ ವರ್ಷ ಸೆಪ್ಟೆಂಬರ್- ಅಕ್ಟೋಬರ್ನಲ್ಲಿ ಆಗಿದ್ದ ಪ್ರವಾಹದ ಭೀಕರತೆಯನ್ನು ನೆನಪಿಸಿಕೊಂಡರು. ಏಕೆಂದರೆ ಆಗಿನಿಂದಲೂ ಹೈದರಾಬಾದ್ ಮಹಾನಗರ ಪಾಲಿಕೆಯು ಮೂಲಸೌಕರ್ಯಗಳನ್ನು ಸುಧಾರಿಸುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಚಿಂತಲಕುಂಟಾದಲ್ಲಿ ಓರ್ವ ವ್ಯಕ್ತಿ ಪ್ರವಾಹಕ್ಕೆ ಸಿಲುಕಿದ್ದನು, ನಂತರ ಆತ ಸುರಕ್ಷಿತವಾಗಿದ್ದಾನೆ ಎಂದು ವರದಿಯಾಗಿದೆ. ಆದರೂ ಇನ್ನಿಬ್ಬರು ವನಸ್ಥಾಲಿಪುರದಲ್ಲಿ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಭಾರೀ ಮಳೆಯಿಂದಾಗಿ ಕಾಲುವೆಗಳು ಉಕ್ಕಿ ಹರಿದಿದ್ದರಿಂದಾಗಿ, ಇಬ್ಬರು ವ್ಯಕ್ತಿಗಳು ಕೊಚ್ಚಿ ಹೋಗಿದ್ದಾರೆ. ರಕ್ಷಣಾ ತಂಡವು ಅವರಿಗಾಗಿ ಶೋಧ ನಡೆಸುತ್ತಿದೆ,'' ಎಂದು ಹಿರಿಯ ಪೊಲೀಸ್ ಅಧಿಕಾರಿ ಕೆ.ಪುರುಷೋತ್ತಮ್ ಸುದ್ದಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸರೂರ್ನಗರದ ಲಿಂಗೋಜಿಗುಡದಲ್ಲಿ ಗರಿಷ್ಠ 13 ಸೆಂ.ಮೀ ಮಳೆಯಾಗಿದೆ.