ಎನ್ಕೌಂಟರ್ ಮಾಡಿದ್ದೇಕೆ, ನೈಜ ಕಾರಣ ಬಿಚ್ಚಿಟ್ಟ ಪೊಲೀಸ್ ಆಯುಕ್ತ ವಿಶ್ವನಾಥ್
ಹೈದರಾಬಾದ್, ಡಿಸೆಂಬರ್ 06: ''ಕಾನೂನಿನ ಪ್ರಕಾರ ನಾವು ನಡೆದುಕೊಂಡಿದ್ದೇವೆ. ಘಟನಾ ಸ್ಥಳ ಮಹಜರು ನಡೆಸಲು ಬಂದಾಗ ನಾಲ್ವರು ಆರೋಪಿಗಳು ನಮ್ಮ ಮೇಲೆ ಹಲ್ಲೆ ಮಾಡಿದರು. ನಮ್ಮಿಂದ ಎರಡು ಗನ್ ಕಸಿದುಕೊಳ್ಳಲು ಯತ್ನಿಸಿದರು, ನಾವು ಶರಣಾಗುವಂತೆ ಎಚ್ಚರಿಕೆ ಕೊಟ್ಟರೂ ನಮ್ಮ ಮಾತಿಗೆ ಬೆಲೆ ಕೊಡಲಿಲ್ಲ'' ಎಂದು ಎನ್ಕೌಂಟರ್ ನಡೆದ ಸ್ಥಳದಲ್ಲೇ ಸುದ್ದಿಗೋಷ್ಠಿ ನಡೆಸಿದ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ಅವರು ಎನ್ಕೌಂಟರ್ ನೈಜ ಕಾರಣ ಬಹಿರಂಗ ಪಡಿಸಿದರು.
''ಸಂತ್ರಸ್ತೆಯ ಹೆಸರು ಪ್ರಕಟಿಸಬೇಡಿ ಹಾಗೂ ಕುಟುಂಬಸ್ಥರಿಗೆ ತೊಂದರೆ ನೀಡಬೇಡಿ, ಸಂತ್ರಸ್ತೆಯ ಹೆಸರು, ಫೋಟೋ ಪ್ರಕಟಿಸುವುದು ಅಪರಾಧ, ಘಟನೆ ಬಗ್ಗೆ ಅವರ ಆಪ್ತರ ಪ್ರತಿಕ್ರಿಯೆ ಪಡೆಯುವ ಆತುರದಲ್ಲಿ ತೊಂದರೆ ನೀಡಬೇಡಿ'' ಎಂದು ಮಾಧ್ಯಮದವರಿಗೆ ಮನವಿ ಮಾಡಿದರು.
ಹೈದರಾಬಾದ್ ಎನ್ಕೌಂಟರ್, ಪೊಲೀಸ್ ಕ್ರಮ ಖಂಡಿಸಿದ ಕಾರ್ಯಕರ್ತೆ
ಸಾಮಾಜಿಕ ಜಾಲ ತಾಣಗಳಲ್ಲಿ ಅನೇಕ ಸುದ್ದಿಗಳು ಹಬ್ಬುತ್ತಿರುವ ಬಗ್ಗೆ ಕೂಡಾ ಪೊಲೀಸ್ ಇಲಾಖೆ ಗಮನ ಹರಿಸುತ್ತಿದೆ. ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದು, ಮಾನವ ಹಕ್ಕು ಆಯೋಗಕ್ಕೆ, ನ್ಯಾಯಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸಲಾಗುತ್ತದೆ. ಪ್ರಕರಣ ತನಿಖೆ, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗ ಕಾನೂನಿಗೆ ಬೆಲೆ ಕೊಟ್ಟು ವರ್ತಿಸಬೇಕಾಗಿ ವಿಶ್ವನಾಥ್ ಕೋರಿದರು.
ಮಹಜರು ಕಾರ್ಯ ನಡೆಯುವಾಗಲೇ ಕೃತ್ಯ
ಪಶುವೈದ್ಯೆ ಅತ್ಯಾಚಾರ, ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಹೈದರಾಬಾದಿನ ಚೆರ್ಲಪಲ್ಲಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು, ನಾಲ್ವರನ್ನು ಶುಕ್ರವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಕ್ರೈಂ ನಡೆದ ಸ್ಥಳ, ನಡೆದ ರೀತಿ, ಸಂತ್ರಸ್ತೆಗೆ ಬೆಂಕಿ ಹಚ್ಚಿದ ಸ್ಥಳ ಎಲ್ಲವನ್ನು ಮತ್ತೊಮ್ಮೆ ಅದೇ ಕ್ರಮದಲ್ಲಿ ಆರೋಪಿಗಳು ತೋರಿಸಲು ಆರೋಪಿಗಳಿಗೆ ಸೂಚಿಸಲಾಗಿತ್ತು. ಸ್ಥಳದ ಮಹಜರು ಕಾರ್ಯ ನಡೆದಿತ್ತು.
ಇಬ್ಬರು ಗನ್ ಕಸಿದುಕೊಂಡರು
ಮೊಹಮ್ಮದ್ ಆರಿಫ್, ಜೊಲ್ಲು ನವೀನ್, ಜೊಲ್ಲು ಶಿವು, ಚೆನ್ನಕೇಶವುಲು ಅವರ ಪೈಕಿ ಇಬ್ಬರು ಕಲ್ಲು ತೂರಾಟ ನಡೆಸಿದರು. ಎ1 ಮೊಹಮ್ಮದ್, ಎ4 ಚನ್ನಕೇಶವಲು ಪೊಲೀಸರಿಂದ ಗನ್ ಕಸಿದುಕೊಂಡಿದ್ದಾರೆ. ನಂತರ ಕಲ್ಲು ಎಸೆದಿದ್ದಾರೆ. ಫೈರ ಮಾಡಲು ಯತ್ನಿಸಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಎಸ್ಐಗೆ ಗಾಯಗಳಾಗಿವೆ. ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಬೇಕಾಯಿತು. ಎಲ್ಲಾ ಆಯಾಯಗಳಿಂದ ಪ್ರಕರಣ ತನಿಖೆ ನಡೆಸಲಾಗುತ್ತಿದೆ.
ಎನ್ ಕೌಂಟರ್ ಬಗ್ಗೆ ಸಾಕಷ್ಟು ಚರ್ಚೆ
ಹೈದರಾಬಾದಿನ ಪಶುವೈದ್ಯೆ ಅತ್ಯಾಚಾರ, ಹತ್ಯೆ ಆರೋಪಿಗಳನ್ನು ಶುಕ್ರವಾರ ಬೆಳಗ್ಗೆ ಪೊಲೀಸರು ಎನ್ಕೌಂಟರ್ ಮಾಡಿ ಹತ್ಯೆ ಮಾಡಿರುವುದನ್ನು ಮಹಿಳಾ ಕಾರ್ಯಕರ್ತೆ ಕವಿತಾ ಖಂಡಿಸಿದ್ದಾರೆ. ಮಾನವ ಹಕ್ಕುಗಳ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ, ತೆಲಂಗಾಣ ಸರ್ಕಾರದ ಆಡಳಿತ ವೈಫಲ್ಯವಾಗಿದೆ ಎಂದು ಅನೇಕ ಮಂದಿ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚಿಸಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಬಗ್ಗೆ ಅನುಮಾನ ಬರುವ ಸುದ್ದಿ ಹಬ್ಬಿಸಲಾಗುತ್ತಿದೆ. ಕಾನೂನಿನ ಪ್ರಕಾರವೇ ನಾವು ನಡೆದುಕೊಂಡಿದ್ದೇವೆ. ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಸಜ್ಜನರ್ ಹೇಳಿದರು.
ಪೊಲೀಸರ ಸುದ್ದಿಗೋಷ್ಠಿಯಲ್ಲಿ ಉತ್ತರ
ಆರೋಪಿಗಳನ್ನು ತಪ್ಪಿತಸ್ಥರು ಎಂದು ನ್ಯಾಯಾಲಯ ಇನ್ನು ಆದೇಶಿಸಿಲ್ಲ. ಆರೋಪ ಸಾಬೀತಾಗುವ ಮುನ್ನವೇ ಪೊಲೀಸ್ ಎನ್ಕೌಂಟರ್ನಲ್ಲಿ ಕೊಲ್ಲಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಉತ್ತರ ಹೇಳದೆ ತೆಲಂಗಾಣ ಸರ್ಕಾರವು, ನ್ಯಾಯ ಸಿಕ್ಕಿದೆ ಎಂಬಂತೆ ವರ್ತಿಸುತ್ತಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ಆರೋಪಿಸಿದ ಬೆನ್ನಲ್ಲೇ ಪೊಲೀಸರು ಸುದ್ದಿಗೋಷ್ಠಿ ನಡೆಸಿ, ಉತ್ತರನೀಡಿದ್ದಾರೆ. ಪ್ರತಿ ಪ್ರಕರಣಕ್ಕೆ ತನ್ನದೇ ಆದ ರೀತಿಯ ನ್ಯಾಯವಿರುತ್ತದೆ. ಈ ಪ್ರಕರಣದಲ್ಲಿ ಅಧಿಕಾರ ದುರುಪಯೋಗವಾಗಿಲ್ಲ ಎಂದು ಸಜ್ಜನರ್ ಸ್ಪಷ್ಟಪಡಿಸಿದರು.