ಮಹಾಘಟಬಂಧನಕ್ಕೆ ಜಗನ್ ರೆಡ್ಡಿ, ಕೆಸಿಆರ್: ಮಾತುಕತೆಗೆ ಕಮಲ್ ನಾಥ್
ಹೈದರಾಬಾದ್, ಮೇ 17: ಫಲಿತಾಂಶಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಕಾಂಗ್ರೆಸ್ ಮಹಾಘಟಬಂಧನದ ಸಿದ್ಧತೆಯಲ್ಲಿ ಭರ್ಜರಿಯಾಗಿ ತೊಡಗಿಕೊಂಡಿದೆ.
ಯುಪಿಎ ಬೆಂಬಲಿಸುವ ಪಕ್ಷಗಳಲೊಂದಿಗೆ ಎನ್ ಡಿಎ ಜೊತೆ ಗುರುತಿಸಿಕೊಳ್ಳದೆ ತಟಸ್ಥವಾಗಿರುವ ಪಕ್ಷಗಳನ್ನೂ ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಯತ್ನದಲ್ಲಿರುವ ಕಾಂಗ್ರೆಸ್, ಆಂಧ್ರಪ್ರದೇಶದಲ್ಲಿ ವೈ ಎಸ್ ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಮತ್ತು ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ ಎಸ್ ಅನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಅದರ ಫಲವಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ಮಾತುಕತೆಗೆ ಕಳಿಸಲು ಕಾಂಗ್ರೆಸ್ ತೀರ್ಮಾನಿಸಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಜಗನ್, ಕೆಸಿಆರ್ ಜೊತೆಗೆ ಒಡಿಶಾ ಮುಖ್ಯಮಂತ್ರಿ, ಬಿಜು ಜನತಾ ದಳದ ನವೀನ್ ಪಟ್ನಾಯಕ್ ಅವರೊಂದಿಗೂ ಚರ್ಚೆ ನಡೆಸಲು ಕಾಂಗ್ರೆಸ್ ಚಿಂತಿಸಿದೆ. ಪ್ರಾದೇಶಿಕ ಪಕ್ಷಗಳ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ಅವನ್ನು ತಮ್ಮತ್ತ ಸೆಳೆದುಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದು, ಬಿಜೆಪಿಗೆ ಇದೊಂದು ಆಘಾತವೆನ್ನಿಸಿದೆ.
ಮೇ 23 ರಂದು ಮಹತ್ವದ ಸಭೆ
ಮೇ 23, ಅಂದರೆ ಲೋಕಸಭೆ ಚುನಾವಣೆಯ ಫಲಿತಾಂಶದ ದಿನದಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎನ್ ಡಿಎಯೇತರ ಪಕ್ಷಗಳ ಸಭೆ ಕರೆದಿದ್ದು, ಈ ಸಭೆಯಲ್ಲಿ ಡಿಎಂಕೆ, ಟಿಡಿಪಿ, ಎಸ್ಪಿ, ಬಿಎಸ್ಪಿ, ಜೆಡಿಎಸ್, ಎನ್ ಸಿಪಿ ಮುಂತಾದ ಪಕ್ಷಗಳ ಘಟಾನುಘಟಿ ಮುಖಂಡರು ಭಾಗವಹಿಸಲಿದ್ದಾರೆ.
ಕೆಸಿಆರ್ ಪ್ರಧಾನಿ ಪಟ್ಟದ ಕನಸಿಗೆ ಅದೊಂದು ಮಾತಿಂದ ಕೊಳ್ಳಿ ಇಟ್ಟ ಸ್ಟಾಲಿನ್!
ಕೆಸಿಆರ್, ಜಗನ್ ರೆಡ್ಡಿಗೆ ಸೋನಿಯಾ ಆಮಂತ್ರಣ
ಈಗಾಗಲೇ ಈ ಸಭೆಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ವೈಎಸ್ ಆರ್ ಕಾಂಗ್ರೆಸ್ ನ ಜಗನ್ ಮೋಹನ್ ರೆಡ್ಡಿ ಅವರಿಗೂ ಸೋನಿಯಾ ಗಾಂಧಿ ಅವರು ಆಮಂತ್ರಣ ನೀಡಿದ್ದಾರೆ ಎನ್ನಲಾಗಿದೆ. ಆದರೆ ಸಭೆಯಲ್ಲಿ ಭಾಗವಹಿಸಲು ಮತ್ತು, ಮಹಾಮೈತ್ರಿಕೂಟಕ್ಕೆ ಬೆಂಬಲ ನೀಡಲು ಜಗನ್ ರೆಡ್ಡಿ ಅವರದು ಒಂದೇ ಒಂದು ಕಂಡಿಶನ್ ಇದೆ. ಕೆಸಿಆರ್ ತೃತೀಯ ರಂಗದ ಕನಸನ್ನು ಬಿಟ್ಟಿಲ್ಲ. ಆದ್ದರಿಂದ ಈ ಇಬ್ಬರ ಮನವೊಲಿಕೆ ಕಾಂಗ್ರೆಸ್ಸಿಗೆ ಅತ್ಯಂತ ಮಹತ್ವದ್ದೆನ್ನಿಸಿದೆ.
ಜಗನ್ ಕಂಡಿಶನ್ ಏನು?
"ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಯಾವುದೇ ಪಕ್ಷಕ್ಕಾದರೂ ನಾನು ಬೆಂಬಲ ನೀಡುತ್ತೇನೆ. ಅದು ಎನ್ ಡಿಎ ಇರಲಿ, ಮಹಾಮೈತ್ರಿಕೂಟವಿರಲಿ" ಎಂದು ಈಗಾಗಲೇ ಜಗನ್ಮೋಹನ್ ರೆಡ್ಡಿ ತಮ್ಮ ಶರತ್ತನ್ನು ಹೇಳಿದ್ದಾರೆ. ಆದರೆ ಆಂಧ್ರಪ್ರದೇಶದಲ್ಲಿ ಈ ಬಾರು ಜಗನ್ಮೋಹನ್ ರೆಡ್ಡಿ ಅವರ ವೈ ಎಸ್ ಆರ್ ಕಾಂಗ್ರೆಸ್ ಪಕ್ಷವೇ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನ ಗಳಿಸುವ ಸಾಧ್ಯತೆ ಇರುವುದರಿಂದ ಈ ಪಕ್ಷವನ್ನು ಕಡೆಗಣಿಸಲು ಕಾಂಗ್ರೆಸ್ ಸಿದ್ಧವಿಲ್ಲ.
ದ್ವಂದ್ವದಲ್ಲಿ ಪ್ರಾದೇಶಿಕ ಪಕ್ಷಗಳು
ಮಹಾ ಮೈತ್ರಕೂಟಕ್ಕೆ ಬೆಂಬಲ ನೀಡಲು ಎಲ್ಲಾ ಪ್ರಾದೇಶಿಕ ಪಕ್ಷಗಳೂ ಮುಂದೆಬರುವುದು ಅಸಾಧ್ಯ. ಕಾರಣ ರಾಜ್ಯದಲ್ಲಿ ಪರಸ್ಪರ ವಿರೋಧ ಪಕ್ಷಗಳಾಗಿ, ಕೇಂದ್ರದಲ್ಲಿ ಒಂದೇ ಮೈತ್ರಿಕೂಟದಲ್ಲಿ ಕಾಣಿಸಿಕೊಳ್ಳುವುದು ಮುಖಂಡರಿಗೆ ಸಹ್ಯವಾಗುವುದು ಕಷ್ಟ. ಉದಾಹರಣೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ. ಆಂಧ್ರದಲ್ಲಿ ವೈಎಸ್ ಆರ್ ಕಾಂಗ್ರೆಸ್ ಮತ್ತು ತೆಲಂಗಾಣದಲ್ಲಿ ಟಿಆರ್ ಎಸ್ ಗೆ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಬದ್ಧ ವೈರಿ. ಆದರೆ ಮಹಾಮೈತ್ರಿಕೂಟದಲ್ಲಿ ಅವರೊಂದಿಗೇ ಕೈಜೋಡಿಸುವುದು ಹೇಗೆ? ವಿಧಾನಸಭೆಯಲ್ಲಿ ವಿಪಕ್ಷಗಳಾಗಿ ಸೆಣೆಸುವುದು, ಲೋಕಸಭೆಯಲ್ಲಿ ಕೈಹಿಡಿದುಕೊಂದು ಓಡಾಡುವುದು ಸರಿಯೆ ಎಂಬುದು ಅವರ ಪ್ರಶ್ನೆ.