ಮನೆ ಬಾಗಿಲಿಗೆ ಮಾವಿನ ಹಣ್ಣು; ಸರ್ಕಾರದಿಂದ ಹೊಸ ಸೇವೆ
ಹೈದರಾಬಾದ್, ಮೇ 01 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿರುವುದು ಮಾವಿನ ಹಣ್ಣಿನ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಸರ್ಕಾರ ಮನೆ ಬಾಗಿಲಿಗೆ ಹಣ್ಣು ಪೂರೈಕೆ ಮಾಡಲು ಆರಂಭ ಮಾಡಿದೆ.
ತೆಲಂಗಾಣ ಸರ್ಕಾರ ಹೈದರಾಬಾದ್ ನಗರದಲ್ಲಿ ಮನೆ-ಮನೆಗೆ ಮಾವಿನ ಹಣ್ಣು ಪೂರೈಕೆ ಮಾಡುವ ಯೋಜನೆಗೆ ಶುಕ್ರವಾರ ಚಾಲನೆ ನೀಡಿದೆ. ಆನ್ಲೈನ್ ಅಥವ ಫೋನ್ ಮೂಲಕ ಬೇಡಿಕೆ ಸಲ್ಲಿಸಿದರೆ ಮನೆಗೆ ಮಾವು ಬರಲಿದೆ.
ಕೊರೊನಾ ಲಾಕ್ ಡೌನ್; ಸಂಕಷ್ಟಕ್ಕೆ ಸಿಲುಕಿದ ಮಾವು ಬೆಳೆದ ರೈತ
5 ಕೆಜಿ ಬಾಕ್ಸ್ಗಳನ್ನು ಮನೆಗೆ ತಲುಪಿಸಲಾಗುತ್ತದೆ. ಇದಕ್ಕೆ 350 ರೂ. ದರವನ್ನು ನಿಗದಿ ಮಾಡಲಾಗಿದೆ. ಜನರು ಎಷ್ಟು ಬಾಕ್ಸ್ಗಳನ್ನು ಬೇಕಾದರೂ ಪಡೆಯಬಹುದಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಯತ್ನ ನಡೆಸಲಾಗುತ್ತಿದೆ.
ಅಕಾಲಿಕ ಮಳೆ; ಮಾವು ಬೆಳೆಗಾರರಿಗೆ ಉಪಯುಕ್ತ ಸಲಹೆಗಳು
ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯ ತನಕ ಮಾವಿನ ಹಣ್ಣಿಗಾಗಿ ಬೇಡಿಕೆ ಸಲ್ಲಿಸಬಹುದು. ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಾವತಿ ಮಾಡಬಹುದು. ಭಾರತೀಯ ಅಂಚೆ ಇಲಾಖೆಯ ಪಾರ್ಸೆಲ್ ವ್ಯವಸ್ಥೆ ಮೂಲಕ ಮಾವಿನ ಹಣ್ಣು ಪೂರೈಸಲಾಗುತ್ತದೆ.
ಬೆಂಗಳೂರಲ್ಲಿ ಅಂಚೆ ಕಚೇರಿಯಲ್ಲಿ ಸಿಗಲಿದೆ ಮಾವಿನ ಹಣ್ಣು!
ಜನರು ಮಾವಿನ ಹಣ್ಣಿಗಾಗಿ ಬೇಡಿಕೆ ಸಲ್ಲಿಸುವಾಗ ಪಿನ್ ಕೋಡ್ ಸಹ ನೀಡಬೇಕು. ಮೂರರಿಂದ ನಾಲ್ಕು ದಿನದಲ್ಲಿ ಮಾವಿನ ಹಣ್ಣು ಜನರಿಗೆ ತಲುಪಲಿದೆ. ಉತ್ತಮ ದರ್ಜೆಯ ಹಣ್ಣುಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆ ಹೇಳಿದೆ.
ತೋಟಗಾರಿಕಾ ಇಲಾಖೆ ನಿರ್ದೇಶಕ ಎಲ್. ವೆಂಕಟರಾಮ ರೆಡ್ಡಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಇದೇ ಮೊದಲ ಬಾರಿಗೆ ಇಲಾಖೆ ಇಂತಹ ಯೋಜನೆ ಕೈಗೊಂಡಿದೆ. 80 ಸಾವಿರ ರೈತರು ಇಲಾಖೆಯಲ್ಲಿ ನೋಂದಣಿ ಮಾಡಿಸಿದ್ದು, ಅವರಿಂದ ಮಾವು ಖರೀದಿ ಮಾಡಿ, ಜನರಿಗೆ ಹಂಚಲಾಗುತ್ತದೆ" ಎಂದು ಹೇಳಿದ್ದಾರೆ.
ಲಾಕ್ ಡೌನ್ನಿಂದಾಗಿ ಹೈದರಾಬಾದ್ನಲ್ಲಿ ಮಾವಿನ ಹಣ್ಣಿಗೆ ಬೇಡಿಕೆ ಕುಸಿದಿದ್ದು ರೈತರು ಆತಂಕಗೊಂಡಿದ್ದಾರೆ. ಏಪ್ರಿಲ್ 27ರಂದು ಸುಮಾರು 576 ಟನ್ ಮಾವು ಮಾರುಕಟ್ಟೆಗೆ ಬಂದಿತ್ತು. ಕ್ವಿಂಟಾಲ್ಗೆ 20 ರಿಂದ 50 ಸಾವಿರ ರೂ.ಗೆ ಮಾರಾಟವಾಗಿದೆ.