ತಾಕತ್ತಿದ್ದರೆ ಮೊದಲು ಚೀನಾ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ: ಬಿಜೆಪಿಗೆ ಓವೈಸಿ ಸವಾಲು
ಹೈದರಾಬಾದ್, ನವೆಂಬರ್ 25: ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಷನ್ (ಜಿಎಚ್ಎಂಸಿ) ಚುನಾವಣೆಯಲ್ಲಿ ಅಧಿಕಾರ ಪಡೆದುಕೊಳ್ಳಲು ಟಿಆರ್ಎಸ್ ಮತ್ತು ಎಐಎಂಐಎಂ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುವುದಾಗಿ ಹೇಳಿರುವ ಬಿಜೆಪಿ ವಿರುದ್ಧ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.
'ಅಸಾದುದ್ದೀನ್ ಓವೈಸಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಾರೆ ಎಂದು ನೀವು ಹೇಳುತ್ತೀರಿ. ನಿಮಗೆ ಮತ್ತೊಮ್ಮೆ ಹೇಳುತ್ತೇನೆ, ನಿಮಗೆ ನಿಜಕ್ಕೂ ಧೈರ್ಯವಿದ್ದರೆ, ಹಲವು ತಿಂಗಳಿನಿಂದ ಚೀನಾದ ಸೈನಿಕರು ಭಾರತೀಯ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಲಡಾಖ್ನ ಎಲ್ಎಸಿಯ ಉದ್ದಕ್ಕೂ ಸರ್ಜಿಕಲ್ ಸ್ಟ್ರೈಕ್ ನಡೆಸಿ' ಎಂದು ಓವೈಸಿ ಸವಾಲು ಹಾಕಿದ್ದಾರೆ.
2022ರೊಳಗೆ ಕಸ ಮುಕ್ತ ಹೈದರಾಬಾದ್, ಕಾಂಗ್ರೆಸ್ ಭರವಸೆ
'ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಹೆಸರು ಹೇಳಲು ಭಯಪಡುತ್ತಾರೆ. ಅಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿ, ನಾನು ಖಂಡಿತಾ ನಿಮ್ಮನ್ನು ಶ್ಲಾಘಿಸುತ್ತೇನೆ. ನಮ್ಮ ಕೆಚ್ಚೆದೆಯ ಸೈನಿಕರು ಅಲ್ಲಿ ಪ್ರಾಣ ತೆತ್ತಿದ್ದಾರೆ. ಇಂದು ಆ ಭಾಗವನ್ನು ಚೀನಾದ ಪಡೆಗಳು ಆಕ್ರಮಿಸಿಕೊಂಡಿವೆ. ಅಲ್ಲಿ ಹೋಗಿ ಸರ್ಜಿಕಲ್ ಸ್ಟ್ರೈಕ್ ಮಾಡಿ. ನೀವು ಹೇಳುತ್ತೀರಿ ಹಳೆಯ ನಗರದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುತ್ತೇವೆ ಎಂದು. ನಮಗಾಗಿ ನೀವೇನು ಮಾಡಿದ್ದೀರಿ?' ಎಂದು ವಾಗ್ದಾಳಿ ನಡೆಸಿದ್ದಾರೆ.
ಇಡೀ ದಕ್ಷಿಣ ಭಾರತ ಕೇಸರೀಕರಣವಾಗಲಿದೆ: ತೇಜಸ್ವಿ ಸೂರ್ಯ
ಜಿಎಚ್ಎಂಸಿ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಿದ್ದ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್, 'ಗೆಲುವಿನ ಬಗ್ಗೆ ಖಾತರಿಯಿಲ್ಲದ ಚಂದ್ರಶೇಖರ ರಾವ್ ತಮ್ಮ ಜತೆ ಮತ್ತೊಬ್ಬ ವ್ಯಕ್ತಿಯನ್ನು ಸೇರಿಸಿಕೊಂಡಿದ್ದಾರೆ. ಯಾರದು? ಅದು ಓವೈಸಿ. ಓವೈಸಿ ನಿನ್ನೆ ಹೇಳುತ್ತಿದ್ದರು, ಹೈದರಾಬಾದ್ನಲ್ಲಿ ರೊಹಿಂಗ್ಯಾಗಳಿದ್ದರೆ ಅಮಿತ್ ಶಾ ಏನು ಮಾಡುತ್ತಿದ್ದಾರೆ ಎಂದು. ಬಿಜೆಪಿ ಗೆದ್ದ ಬಳಿಕ ನಿಮ್ಮ 'ಹಳೆಯ ನಗರ'ದಲ್ಲಿ (ಹೈದರಾಬಾದ್) ವಾಸಿಸುತ್ತಿರುವ ಪಾಕಿಸ್ತಾನಿ, ಅಫ್ಘನ್ ಮತ್ತು ರೊಹಿಂಗ್ಯಾ ಮತದಾರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಅವರನ್ನು ಹೊರಹಾಕುವ ಜವಾಬ್ದಾರಿಯನ್ನು ಬಿಜೆಪಿ ತೆಗೆದುಕೊಳ್ಳುತ್ತದೆ' ಎಂದು ಹೇಳಿದ್ದರು.