GHMC Polls: ಹೈದರಾಬಾದ್ ಚುನಾವಣೆಗೆ ಯಾಕಿಷ್ಟು ಮಹತ್ವ?
ಹೈದರಾಬಾದ್, ಡಿಸೆಂಬರ್ 4: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್ಎಂಸಿ) ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ತೆಲುಗು ರಾಜ್ಯದಲ್ಲಿ ತನ್ನ ಬೇರು ಮೂಡಿಸಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಈ ಸ್ಥಳೀಯ ಸಂಸ್ಥೆ ಚುನಾವಣೆ ಮಹತ್ವದ್ದೆನಿಸಿದರೆ, ಸ್ಥಳೀಯ ಮತ್ತು ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿಗೆ (ಟಿಆರ್ಎಸ್) ತನ್ನ ಪ್ರಾಬಲ್ಯ ಉಳಿಸಿಕೊಳ್ಳುವ ಪ್ರತಿಷ್ಠೆಯಾಗಿದೆ.
ಬಿಜೆಪಿ ಇಲ್ಲಿ ತನ್ನ ಮಾಮೂಲಿ ಶೈಲಿಯ ಪ್ರಚಾರದಿಂದ ಜನರನ್ನು ಕೆರಳಿಸುವ ಮೂಲಕ ಗಮನ ಸೆಳೆಯಲು ಪ್ರಯತ್ನಿಸಿದೆ. ಹೈದರಾಬಾದ್ ಹೆಸರನ್ನು ಭಾಗ್ಯನಗರ್ ಎಂದು ಬದಲಿಸುವಂತಹ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ಹಿಂದು-ಹಿಂದುತ್ವದ ಮೂಲಕ ಸೆಳೆಯುವ ಪ್ರಚಾರ ನಡೆಸಿತ್ತು. ತಿಂಗಳ ಹಿಂದೆ ನಡೆದ ಉಪ ಚುನಾವಣೆಯಲ್ಲಿ ವಿಧಾನಷಭೆ ಕ್ಷೇತ್ರದಲ್ಲಿ ಅಚ್ಚರಿಯ ಗೆಲುವು ಕಂಡಿದ್ದು, ತೆಲಂಗಾಣದಲ್ಲಿಯೂ ತನ್ನ ನೆಲೆ ಕಂಡುಕೊಳ್ಳಬಹುದು ಎಂಬ ಬಿಜೆಪಿಯ ನಿರೀಕ್ಷೆಗಳಿಗೆ ಮತ್ತಷ್ಟು ರಂಗು ತುಂಬಿತ್ತು.
GHMC Election results: ಅಂಚೆಮತದಲ್ಲಿ ಬಿಜೆಪಿಗೆ ಜಯ
150 ಸದಸ್ಯರ ಹೈದರಾಬಾದ್ ಪಾಲಿಕೆಯಲ್ಲಿ ಬಿಜೆಪಿ, ಟಿಆರ್ಎಸ್ ಮತ್ತು ಎಐಎಂಐಎಂ ಪ್ರಮುಖವಾಗಿ ಪೈಪೋಟಿ ನಡೆಸುತ್ತಿವೆ. ಮತ್ತೊಂದು ಪ್ರಮುಖ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಇಲ್ಲಿ ತನ್ನ ಹೋರಾಟದ ಬಗ್ಗೆ ಅಷ್ಟೇನೂ ಮಹತ್ವಾಕಾಂಕ್ಷೆ ಹೊಂದಿರುವಂತೆ ಕಂಡುಬಂದಿಲ್ಲ. ಆದರೆ ಬಿಜೆಪಿ ತನ್ನ ನೆಲೆ ಕಂಡುಕೊಳ್ಳಲು ಸ್ಥಳೀಯ ಸಂಸ್ಥೆ ಚುನಾವಣೆ ತಳಹದಿಯಾಗಲಿದೆ ಎಂದು ಇದನ್ನು ಗಂಭೀರವಾಗಿ ಪರಿಗಣಿಸಿದೆ. ಅಮಿತ್ ಶಾ, ಯೋಗಿ ಆದಿತ್ಯನಾಥ್, ಜೆಪಿ ನಡ್ಡಾ ಅವರಂತಹ ಪ್ರಮುಖ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಾರೆ ಎಂದರೆ ಬಿಜೆಪಿ ಇದನ್ನು ಎಷ್ಟು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ ಎನ್ನುವುದಕ್ಕೆ ಸಾಕ್ಷಿ. ಮುಂದೆ ಓದಿ.
ಟಿಆರ್ಎಸ್ ಲೆಕ್ಕಾಚಾರಕ್ಕೆ ಪೆಟ್ಟು?
2016ರಲ್ಲಿ ನಡೆದ ಚುನಾವಣೆಯಲ್ಲಿ ಟಿಆರ್ಎಸ್ 99 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಬಿಜೆಪಿ ಆಗ ಕೇವಲ ನಾಲ್ಕು ಸೀಟುಗಳನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಮೂರು ಪ್ರಮುಖ ಪಕ್ಷಗಳ ನಡುವೆ ತೀವ್ರ ಪೈಪೋಟಿ ಇರಲಿದೆ. ಟಿಆರ್ಎಸ್ನ ಸಾಂಪ್ರದಾಯಿಕ ಮತದಾರರ ನೆಲೆಯಾದ ಕೊಳೆಗೇರಿ ನಿವಾಸಿಗಳು ಮತ್ತು ಕೆಳ ಮಧ್ಯಮ ವರ್ಗದ ಜನರು ಈ ಬಾರಿ ಮತ ಚಲಾಯಿಸಲು ಬಂದಿದ್ದು ತೀರಾ ಕಡಿಮೆ ಪ್ರಮಾಣದಲ್ಲಿ. ಇನ್ನು ಸುಶಿಕ್ಷಿತ ಮಧ್ಯಮ ವರ್ಗದ ಜನತೆ ಹೆಚ್ಚಿನ ಪ್ರಮಾಣದಲ್ಲಿ ಮತಗಟ್ಟೆಗೆ ತೆರಳಿದ್ದರು. ಹೀಗಾಗಿ ಟಿಆರ್ಎಸ್ನ ಲೆಕ್ಕಾಚಾರಕ್ಕೆ ಇದು ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ.
ಶೇಕಡಾವಾರು ಮತದತ್ತ ಬಿಜೆಪಿ ಗಮನ
ಹಾಗೆಂದು ಬಿಜೆಪಿ ಇಲ್ಲಿ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ವಿಶ್ವಾಸ ಹೊಂದಿಲ್ಲ. ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರು ಕೆಲವು ದಿನಗಳ ಹಿಂದೆ ಈ ಚುನಾವಣೆಯಲ್ಲಿ ಬಿಜೆಪಿ 35 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿದೆ ಎಂದಿದ್ದರು. ಇವುಗಳಲ್ಲಿ ಹೆಚ್ಚಿನ ಸೀಟುಗಳು ಹೈದರಾಬಾದ್ ಹೊರವಲಯದಲ್ಲಿವೆ. ಆಡಳಿತವಿರೋಧಿ ಮನಸ್ಥಿತಿಯು ತನಗೆ ಹೆಚ್ಚಿನ ಶೇಕಡಾವಾರು ಮತಗಳನ್ನು ನೀಡಲಿದೆ ಎಂಬ ನಿರೀಕ್ಷೆ ಬಿಜೆಪಿಯದ್ದು.
ಜಿಎಚ್ಎಂಸಿ ಚುನಾವಣೆಯಲ್ಲಿ 100 ಸ್ಥಾನದಲ್ಲಿ ಗೆಲುವು; ಕೆ. ಕವಿತಾ
ಇದು ಟ್ರೇಲರ್ ಅಷ್ಟೇ
ಒಂದು ವೇಳೆ ಈ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳಿಂತ ಹೆಚ್ಚು ಸೀಟುಗಳಲ್ಲಿ ಗೆದ್ದರೆ ಬಿಜೆಪಿಗೆ ಅದು ಬೋನಸ್. ಅಧಿಕಾರಕ್ಕೆ ಬರುವ ಅವಕಾಶ ಸಿಕ್ಕರೆ ಇಡೀ ಚಿತ್ರಣವೇ ಬದಲಾಗಲಿದೆ. ಆದರೆ ಜಿಎಚ್ಎಂಸಿ ಚುನಾವಣೆಯ ಫಲಿತಾಂಶಕ್ಕಿಂತಲೂ ಅದಕ್ಕೆ ತೆಲಂಗಾಣ ಹೆಚ್ಚು ಮುಖ್ಯ. ಇದು 2023ರ ತೆಲಂಗಾಣ ವಿಧಾನಸಭೆ ಚುನಾವಣೆಯ ಟ್ರೇಲರ್ ಅಷ್ಟೇ. ಇಲ್ಲಿ ತನ್ನ ಅದೃಷ್ಟವನ್ನು ಬಿಜೆಪಿ ಸ್ಥಳೀಯ ಸಂಸ್ಥೆ ಚುನಾವಣೆ ಮೂಲಕ ಪರೀಕ್ಷಿಸುತ್ತಿದೆ.
ಕಾಂಗ್ರೆಸ್ ನಿರುತ್ಸಾಹ
ಕಾಂಗ್ರೆಸ್ ಇಲ್ಲಿ ತನಗೆ ಯಾವ ಆಸಕ್ತಿಯೂ ಇಲ್ಲ ಎಂಬಂತೆ ನಿರುತ್ಸಾಹದಿಂದಲೇ ಸ್ಪರ್ಧೆಗೆ ಇಳಿದಿದೆ. ಇದರಿಂದ ತೆಲಂಗಾಣದ ರಾಜಕೀಯ ಧ್ರುವೀಕರಣಗೊಳ್ಳುತ್ತಿದೆ. ಆರ್ಥಿಕವಾಗಿ ಪ್ರಬಲರಾಗಿದ್ದ ರೆಡ್ಡಿ ಸಮುದಾಯವು ಒಂದು ಕಾಳದಲ್ಲಿ ಕಾಂಗ್ರೆಸ್ನ ಬೆನ್ನೆಲುಬಿನಂತೆ ನಿಂತಿದ್ದರು. ಆದರೆ ಅದು ಕ್ರಮೇಣ ಬಿಜೆಪಿಯತ್ತ ಪರಿವರ್ತನೆಯಾಗುವುದರೊಂದಿಗೆ ಕಾಂಗ್ರೆಸ್ ಪ್ರಾಮುಖ್ಯ ಕಳೆದುಕೊಳ್ಳುತ್ತಿದೆ. ಕಿಶನ್ ರೆಡ್ಡಿ ಅವರನ್ನು ಬಿಜೆಪಿ ಕೇಂದ್ರ ಸಚಿವರನ್ನಾಗಿ ಮಾಡಿರುವುದು ಇದಕ್ಕೆ ಕಾರಣ ಎನ್ನುವಂತಿಲ್ಲ. ಆದರೆ ರೆಡ್ಡಿ ಸಮುದಾಯವನ್ನು ಬಿಜೆಪಿ ತನ್ನಡೆಗೆ ಸೆಳೆದುಕೊಳ್ಳುವಷ್ಟು ಓಲೈಸಿದೆ.
ಜಿಎಚ್ಎಂಸಿ ಚುನಾವಣೆ; ಹೈದರಾಬಾದ್ನಲ್ಲಿ ಸಂಭ್ರಮಾಚರಣೆ ಇಲ್ಲ!
ಕಾಂಗ್ರೆಸ್ ಬೆಂಬಲಿಗರು ಟಿಆರ್ಎಸ್ಗೆ
ಇನ್ನೊಂದೆಡೆ ಕಾಂಗ್ರೆಸ್ನ ಸಾಂಪ್ರದಾಯಿಕ ಬೆಂಬಲಿಗರಾದ ಪರಿಶಿಷ್ಟ ಜಾತಿಗಳು ಮತ್ತು ಕ್ರೈಸ್ತರು ಟಿಆರ್ಎಸ್ ಕಡೆಗೆ ಹೊರಳುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್ ತನ್ನ ಮತದಾರರನ್ನು ದೊಡ್ಡ ಮಟ್ಟದಲ್ಲಿ ಕಳೆದುಕೊಳ್ಳುತ್ತಿದೆ. ಈ ಚುನಾವಣೆಯಲ್ಲಿ ಪ್ರಮುಖವಾಗಿ ಪರಿಗಣಿಸಬೇಕಿರುವುದು ಎಐಎಂಐಎಂ ಪಕ್ಷವನ್ನು. ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಎಐಎಂಐಎಂ ಅನ್ನು ಮಣಿಸುವುದು ಸಾಧ್ಯವೇ ಇಲ್ಲ. ಹೀಗಾಗಿ ಈ ಬಾರಿ ಅದು 35-40 ಕ್ಷೇತ್ರಗಳನ್ನು ಮರಳಿ ಪಡೆದುಕೊಳ್ಳಲಿದೆ.
ಎಐಎಂಐಎಂಗೆ ಬಿಜೆಪಿ ಸವಾಲು
ಆದರೆ, ಈ ಚುನಾವಣೆಯಾಚೆ ಎಐಎಂಐಎಂ ಚಿಂತೆಗೊಳಗಾಗುವಂತೆ ಮಾಡಿರುವುದು ಬಿಜೆಪಿ. ಮುಸ್ಲಿಂ ಮತಗಳನ್ನು ಎಐಎಂಐಎಂ ಒಂದೆಡೆ ಸೇರಿಸುವಂತೆ ಮಾಡಿದ್ದರೆ, ಬಿಜೆಪಿ ಇನ್ನೊಂದೆಡೆ ಹಿಂದೂ ಮತಗಳನ್ನು ಕಲೆಹಾಕುವತ್ತ ಸಾಗಿದೆ. ಹೈದರಾಬಾದ್ ನಗರ ಓವೈಸಿಗಳ ಪಾಲಿನ ಪ್ರಬಲ ಶಕ್ತಿ. ಆದರೆ ಅಲ್ಲಿಯೇ ಅವಕಾಶ ಸಿಕ್ಕಾಗಲೆಲ್ಲಾ ಓವೈಸಿಗಳನ್ನು ಕುಟುಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರನ್ನು ಟೀಕಿಸಲು ಬಿಜೆಪಿ ಓವೈಸಿಗಳ ವಿರುದ್ಧದ ದಾಳಿಯನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ.
ಬರಲಿದೆ ಉಪ ಚುನಾವಣೆ
ಇದುವರೆಗೂ ಈ ಪ್ರಾಂತ್ಯದಲ್ಲಿ ಟಿಆರ್ಎಸ್ ಮತ್ತು ಕಾಂಗ್ರೆಸ್ ರಾಜಕಾರಣವೇ ಪ್ರಮುಖವಾಗಿತ್ತು. ನವೆಂಬರ್ನಲ್ಲಿ ದುಬ್ಬಕಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೆಲುವು ಕಂಡಿರುವುದು ಮತ್ತು ಜಿಎಚ್ಎಂಸಿ ಚುನಾವಣೆ ಇಲ್ಲಿನ ಬಿಜೆಪಿಯ ಅಸ್ತಿತ್ವದ ಗತಿಯನ್ನೇ ಬದಲಿಸುವ ಸೂಚನೆ ನೀಡಿದೆ.
ಈ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 25 ಸೀಟುಗಳಲ್ಲಿ ಗೆದ್ದು, ಕಾಂಗ್ರೆಸ್ ಎರಡಂಕಿಯ ಮೊತ್ತವನ್ನು ಮುಟ್ಟುವಲ್ಲಿ ವಿಫಲವಾದರೂ ಟಿಆರ್ಎಸ್ಗೆ ಎಚ್ಚರಿಕೆಯ ಸೂಚನೆಯಾಗಲಿದೆ. ಬಿಜೆಪಿಯನ್ನು ತಾನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ ಎಂಬುದನ್ನು ಟಿಆರ್ಎಸ್ ಗಮನಿಸಬೇಕು. ನಾಗಾರ್ಜುನಸಾಗರ ವಿಧಾನಸಭೆ ಕ್ಷೇತ್ರದ ಟಿಆರ್ಎಸ್ ಶಾಸಕ ನೋಮುಲಾ ನರಸಿಂಹಯ್ಯ ನಿಧನದಿಂದ ಅಲ್ಲಿ ಉಪ ಚುನಾವಣೆ ನಡೆಯಬೇಕಿದೆ. ಇದು ಟಿಆರ್ಎಸ್ ಮತ್ತು ಬಿಜೆಪಿಯ ಬಲಾಬಲ ಪರೀಕ್ಷೆಯ ಕೇಂದ್ರವಾಗುವುದು ಖಚಿತ.