GHMC polls: ಬಿಜೆಪಿ ಪರ ಜೈ ಎನ್ನಲಿರುವ ಸ್ಟಾರ್ ವಿಜಯಶಾಂತಿ
ಹೈದರಾಬಾದ್, ನ.23: ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕಿಯಾಗಿದ್ದ ವಿಜಯಶಾಂತಿ ಅವರು ದಿಢೀರ್ ಬೆಳವಣಿಗೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ದೆಹಲಿಯಲ್ಲಿ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಕೇಸರಿ ಪಡೆ ಸೇರುತ್ತಿದ್ದಾರೆ. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಾಗಿ ಸೆಲೆಬ್ರಿಟಿಗಳನ್ನು ಬಿಜೆಪಿ ಸೆಳೆಯುತ್ತಿದೆ.
ಸ್ಟಾರ್ ನಟಿ ಕಮ್ ರಾಜಕಾರಣಿ ವಿಜಯಶಾಂತಿ ಸೇರ್ಪಡೆಯಿಂದ ಹೈದರಾಬಾದ್ ಪಾಲಿಕೆ ಚುನಾವಣೆ ಅಷ್ಟೇ ಅಲ್ಲದೆ ಮುಂಬರುವ ತಮಿಳುನಾಡು ಚುನಾವಣೆಯಲ್ಲೂ ಪಕ್ಷಕ್ಕೆ ಲಾಭವಾಗಲಿದೆ ಎಂದು ಬಿಜೆಪಿ ಎಣಿಕೆ ಮಾಡಿದೆ.
GHMC
polls:
ಬಿಜೆಪಿಗೆ
ಬೇಷರತ್
ಬೆಂಬಲ
ಘೋಷಿಸಿದ
ಪವರ್
ಸ್ಟಾರ್
ತೆಲಂಗಾಣ ಬಿಜೆಪಿ ಮುಖಂಡರಾದ ಡಿಕೆ ಅರುಣಾ ಅವರು ವಿಜಯಶಾಂತಿ ಸೇರ್ಪಡೆಯನ್ನು ಸ್ವಾಗತಿಸಿದ್ದಾರೆ. ಹೈದರಾಬಾದ್ ಮುನ್ಸಿಪಾಲ್ ಚುನಾವಣೆ ಭಾರಿ ಕುತೂಹಲ ಕೆರಳಿಸಿದ್ದು, ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಗಿಂತಲೂ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನೆಡೆ ಈಗಾಗಲೇ ಉಂಟಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ನಡೆದ ದುಬ್ಬಾಕ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಬಿಜೆಪಿ ಅಚ್ಚರಿಯ ಗೆಲುವು ದಾಖಲಿಸಿತ್ತು.
ಮೋದಿ ದೇಶದ ದೊಡ್ಡ ಕ್ರಿಮಿನಲ್ ಎಂದಿದ್ದ ಶಾಂತಿ
ಸೇಡಂ ತಾಲ್ಲೂಕಿನ ಮುಧೋಳದಲ್ಲಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರ ಪರ ವಿಜಯಶಾಂತಿ ಪ್ರಚಾರ ನಡೆಸಿದ್ದರು. ಆತ ನಮ್ಮ ದೇಶದ ನಂಬರ್ ಒನ್ ಕ್ರಿಮಿನಲ್. ಆತನಂತಹ ಕ್ರಿಮಿನಲ್ನನ್ನು ನಾನು ನೋಡಿಯೇ ಇಲ್ಲ ಎಂದು ಏಕವಚನದಿಂದ ವಾಗ್ದಾಳಿ ನಡೆಸಿದ್ದರು.
ಅದಾನಿ, ಅಂಬಾನಿ ಅವರಂತಹ ಬಂಡವಾಳಶಾಹಿಗಳ ಬೆನ್ನಿಗೆ ಮೋದಿ ನಿಂತಿದ್ದಾರೆ. ಅಚ್ಛೇದಿನ್ ಹೆಸರಿನಲ್ಲಿ ರೈತರು, ಕಾರ್ಮಿಕರನ್ನು ಮತ್ತು ಬಡವರನ್ನು ವಂಚಿಸುತ್ತಿದ್ದಾರೆ. ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರಂತಹವರು ಲೂಟಿ ಮಾಡುತ್ತಿದ್ದರೂ ಸುಮ್ಮನಿದ್ದಾರೆ.
ಮೋದಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಒಂದೇ ನಾಣ್ಯದ ಎರಡು ಮುಖಗಳು. ಮೋದಿ ದೊಡ್ಡ ಕಳ್ಳ, ಕೆಸಿಆರ್ ಚಿಕ್ಕ ಕಳ್ಳ. ಆತ ಮಾಯದ ಮಾತುಗಳನ್ನಾಡುವ ಜನರನ್ನು ಮೋಸಗೊಳಿಸುತ್ತಾನೆ ಎಂದಿದ್ದರು.
ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿದ್ದ ವಿಜಯಶಾಂತಿ
2014ರಲ್ಲಿ ಫೆಬ್ರವರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ವಿಜಯಶಾಂತಿ ಅವರು ಇದಕ್ಕೂ ಮುನ್ನ ಟಿಆರ್ ಎಸ್ ನ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರ ಬೆಂಬಲವಾಗಿ ನಿಂತಿದ್ದರು. ಮೇದಕ್ ನಿಂದ ವಿಧಾನಸಭೆಗೆ ಸ್ಪರ್ಧಿಸಿ, ಸೋಲು ಕಂಡಿದ್ದರು. 2018ರಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಿಜಯ್ ಶಾಂತಿ ಅವರನ್ನು ಸ್ಟಾರ್ ಪ್ರಚಾರಕಿಯಾಗಿ ನೇಮಕ ಮಾಡಿದರು ಹಾಗೂ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಚುನಾವಣಾ ಪ್ರಚಾರದ ಸಲಹಾಗಾರ್ತಿಯಾಗಿದ್ದರು. ಈ ಬಾರಿ ಹೈದರಾಬಾದ್ ಮುನ್ಸಿಪಲ್ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗುತ್ತಾರೆ ಎಂದು ವರದಿ ಬಂದಿತ್ತು.
ಪವರ್ ಸ್ಟಾರ್ ಪವನ್ ಕಲ್ಯಾಣ್ ಬೆಂಬಲ
ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ (GHMC) ಚುನಾವಣೆಯಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್)ಗೆ ಸೋಲುಣಿಸಲು ಭಾರತೀಯ ಜನತಾ ಪಕ್ಷ(ಬಿಜೆಪಿ) ಎಲ್ಲಾ ರೀತಿಯಿಂದಲೂ ಯತ್ನಿಸುತ್ತಿದೆ. ಈ ನಡುವೆ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಪಕ್ಷ ಕೂಡಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿದ ಬಳಿಕ ಕದನ ಕುತೂಹಲಕಾರಿಯಾಗಿತ್ತು. ಆದರೆ, ಇಂದು ಮಹತ್ವ ಬೆಳವಣಿಗೆಯೊಂದರಲ್ಲಿ ಪವನ್ ಕಲ್ಯಾಣ್ ಅವರು ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬೇಷರತ್ ಬೆಂಬಲ ಘೋಷಿಸಿದ್ದಾರೆ.
150 ಸದಸ್ಯರ ಆಯ್ಕೆಗಾಗಿ ಡಿಸೆಂಬರ್ 01 ರಂದು ಚುನಾವಣೆ
150 ಸದಸ್ಯರ ಆಯ್ಕೆಗಾಗಿ ಡಿಸೆಂಬರ್ 01ರಂದು ಬೆಳಗ್ಗೆ 7 ರಿಂದ ಸಂಜೆ 6 ತನಕ ಮತದಾನದ ನಡೆಯಲಿದೆ. ಡಿಸೆಂಬರ್ 4ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ನವೆಂಬರ್ 20 ಕೊನೆ ದಿನಾಂಕವಾಗಿತ್ತು. ಹಾಲಿ ಪಾಲಿಕೆ ಅವಧಿ ಫೆಬ್ರವರಿ 10, 2021ರಂದು ಕೊನೆಗೊಳ್ಳಲಿದೆ. ಸಾಮಾನ್ಯ ವರ್ಗದ ಮಹಿಳೆಗೆ ಈ ಬಾರಿ ಮೇಯರ್ ಸ್ಥಾನ ಮೀಸಲಾಗಿದೆ.
2016ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಪಕ್ಷ 150ರಲ್ಲಿ 99 ಸ್ಥಾನಗಳಿಸಿ ಆಡಳಿತ ವಹಿಸಿಕೊಂಡಿತ್ತು. ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ (GHMC) ವ್ಯಾಪ್ತಿಯಲ್ಲಿ 20 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, 74 ಲಕ್ಷ ಮತದಾರರಿದ್ದಾರೆ. ಹೀಗಾಗಿ, ಆಡಳಿತಾರೂಢ ಟಿಆರ್ ಎಸ್ ಅಲ್ಲದೆ, ಕಾಂಗ್ರೆಸ್, ಬಿಜೆಪಿ, ಎಐಎಂಐಎಂ ಕೂಡಾ ಪಾಲಿಕೆಯಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಲು ಸೆಣಸಾಡಲಿವೆ.