ಹೈದರಾಬಾದನ್ನು ನಿಜಾಮ್ ಸಂಸ್ಕೃತಿ ಮುಕ್ತಗೊಳಿಸಿ: ಅಮಿತ್ ಶಾ
ಹೈದರಾಬಾದ್, ನ. 29: ''ಹೈದರಾಬಾದನ್ನು ನಿಜಾಮ್ ಸಂಸ್ಕೃತಿ ಮುಕ್ತಗೊಳಿಸಿ ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಬಿಜೆಪಿಗೆ ಮತ ಹಾಕಿ. ಹೈದರಾಬಾದನ್ನು ಮಿನಿ ಭಾರತವನ್ನಾಗಿಸುತ್ತೇವೆ. ನಿಜವಾದ ಪ್ರಜಾಪ್ರಭುತ್ವ ನಿಮ್ಮದಾಗಲಿದೆ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತದಾರರಿಗೆ ಆಶ್ವಾಸನೆ ನೀಡಿದರು.
ಡಿಸೆಂಬರ್ 1ರಂದು ನಡೆಯಲಿರುವ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಪ್ರಚಾರಕ್ಕಾಗಿ ಅಮಿತ್ ಶಾ ಆಗಮಿಸಿದ್ದಾರೆ. ಸಿಕಂದರಬಾದಿನಲ್ಲಿ ರೋಡ್ ಶೋ ನಡೆಸಿದ ಅಮಿತ್ ಅವರು ನಂತರ ಮಾತನಾಡಿ, ಪ್ರಧಾನಿ ಮೋದಿ ಅವರಿಗೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೆಂಬಲ ನೀಡಿದ್ದೀರಿ. ಈಗ ಹೈದರಾಬಾದ್ ನಗರವನ್ನು ಬದಲಾಯಿಸಲು ಸಕಾಲ. ದುರಾಡಳಿತ, ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಮತ ಹಾಕಿ ಎಂದು ಹೇಳಿದರು.
ಹೈದ್ರಾಬಾದ್ ಹೆಸರು ಬದಲಾವಣೆ, ಯೋಗಿಗೆ ಓವೈಸಿ ಎಚ್ಚರಿಕೆ
ಕಳೆದ ಹಲವು ವರ್ಷಗಳಿಂದ ಹೈದರಾಬಾದ್ ನಗರ ಮೂಲ ಸೌಕರ್ಯ ವಂಚಿತವಾಗಿದೆ, ಇತ್ತೀಚೆಗೆ ಪ್ರವಾಹದಿಂದಲೂ ನಗರ ತತ್ತರಿಸಿದೆ. ಭೂ ಕಬಳಿಕೆ ದಂಧೆಯಾಗಿ ಮಾರ್ಪಟ್ಟಿದೆ. ಟಿಆರ್ ಎಸ್ ಹಾಗೂ ಓವೈಸಿ ಮೈತ್ರಿಯನ್ನು ಸೋಲಿಸಲು ನಿಮಗೆ ಸದವಾಕಾಶ ಲಭಿಸಿದೆ, ಈ ಬಾರಿ ಬಿಜೆಪಿಯ ಮೇಯರ್ ಆಯ್ಕೆ ಮಾಡಿ ಎಂದು ಅಮಿತ್ ಶಾ ಕರೆ ನೀಡಿದರು.
ಪ್ರವಾಹ ಸಂದರ್ಭದಲ್ಲಿ ಬಿಜೆಪಿಯಿಂದಲೇ ನೆರವು
ಇತ್ತೀಚೆಗೆ ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದ ಸುಮಾರು 7 ಲಕ್ಷ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿತ್ತು. ಪ್ರವಾಹ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು, ಸಂಸದರು ಅವಿರತವಾಗಿ ಶ್ರಮದಾನ ಮಾಡಿದ್ದಾರೆ. ಕೇಂದ್ರ ಅಗತ್ಯ ನೆರವನ್ನು ನೀಡಿದೆ ಎಂದು ಹೇಳಿದರು.
ಹೈದರಾಬಾದ್ ಐಟಿ ಹಬ್ ಆಗುವಂಥ ನಗರ, ಆದರೆ ಇಲ್ಲಿ ಭೂ ಕಬಳಿಕೆಯಿಂದ ಜನತೆಗೆ ಅತ್ಯಾಧುನಿಕ ಸೌಲಭ್ಯ ಸಿಗದಂತೆ ಮಾಡಲಾಗಿದೆ ಎಂದು ಒವೈಸಿ ಸೋದರರನ್ನು ದೂರಿದರು.
ವ್ಯಂಗ್ಯವಾಡಿದ್ದ ಓವೈಸಿ
ತೆಲಂಗಾಣ ಬಿಜೆಪಿಯವರು ಕೇಂದ್ರ ನಾಯಕರನ್ನು ಕರೆಸುತ್ತಿದ್ದಾರೆ. ಈ ಬಗ್ಗೆ ಕುತೂಹಲಭರಿತನಾಗಿ ಇಲ್ಲಿನ ಬಾಲಕನೊಬ್ಬ ನನ್ನನ್ನು ಕೇಳಿದ ಅವರು(ಬಿಜೆಪಿ) ಡೊನಾಲ್ಡ್ ಟ್ರಂಪ್ ರನ್ನು ಕರೆಸಬಹುದಾಗಿತ್ತು ಎಂದು, ಆತನ ಮಾತು ನಿಜ, ಬಾಕಿ ಉಳಿದಿರುವುದು ಟ್ರಂಪ್ ಮಾತ್ರ, ಆದರೆ ಆತ ಕೂಡಾ ಇಲ್ಲಿ ಏನು ಬದಲಾಯಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
2019ರಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ತೆರಳಿ ಡೊನಾಲ್ಡ್ ಟ್ರಂಪ್ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಇದರಿಂದ ಏನಾಯಿತು, ಫಲಿತಾಂಶ ನಿಮ್ಮ ಕಣ್ಮುಂದಿದೆ ಎಂದು ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದರು.
ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸುವ ಗುರಿ
ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಪ್ರಭಾರಿಯನ್ನಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರನ್ನು ನೇಮಿಸಲಾಗಿದೆ. ಕರ್ನಾಟಕದ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರಿಗೆ ನಾಲ್ಕು ಅಸೆಂಬ್ಲಿಯ ಉಸ್ತುವಾರಿ ನೀಡಲಾಗಿದೆ. ತೆಲಂಗಾಣ ವಿಧಾನಸಭೆಯ ಉಪ ಚುನಾವಣೆಯಲ್ಲಿ ಅಚ್ಚರಿಯ ಗೆಲುವು ಸಾಧಿಸಿರುವ ಬಿಜೆಪಿ, ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ತನ್ನ ಶಕ್ತಿ ಪ್ರದರ್ಶನ ಮಾಡುವ ಮೂಲಕ ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸುವ ಗುರಿ ಹೊಂದಿದೆ.
2016ರಲ್ಲಿತೆಲಂಗಾಣ ರಾಷ್ಟ್ರ ಸಮಿತಿಗೆ ಗೆಲುವು
2016ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಪಕ್ಷ 150ರಲ್ಲಿ 99 ಸ್ಥಾನಗಳಿಸಿ ಆಡಳಿತ ವಹಿಸಿಕೊಂಡಿತ್ತು. ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ (GHMC) ವ್ಯಾಪ್ತಿಯಲ್ಲಿ 20 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಆಡಳಿತಾರೂಢ ಟಿಆರ್ ಎಸ್ ಅಲ್ಲದೆ, ಕಾಂಗ್ರೆಸ್, ಬಿಜೆಪಿ, ಎಐಎಂಐಎಂ ಕೂಡಾ ಪಾಲಿಕೆಯಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಲು ಸೆಣಸಾಡಲಿವೆ.
ಡಿಸೆಂಬರ್ 01ರಂದು ಚುನಾವಣೆ
150 ಸದಸ್ಯರ ಆಯ್ಕೆಗಾಗಿ ಡಿಸೆಂಬರ್ 01ರಂದು ಬೆಳಗ್ಗೆ 7 ರಿಂದ ಸಂಜೆ 6 ತನಕ ಮತದಾನದ ನಡೆಯಲಿದೆ. ಡಿಸೆಂಬರ್ 4ರಂದು ಮತ ಎಣಿಕೆ ನಡೆಯಲಿದೆ.
ಹಾಲಿ ಪಾಲಿಕೆ ಅವಧಿ ಫೆಬ್ರವರಿ 10, 2021ರಂದು ಕೊನೆಗೊಳ್ಳಲಿದೆ. ಸಾಮಾನ್ಯ ವರ್ಗದ ಮಹಿಳೆಗೆ ಈ ಬಾರಿ ಮೇಯರ್ ಸ್ಥಾನ ಮೀಸಲಾಗಿದೆ. 2016ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಪಕ್ಷ 150ರಲ್ಲಿ 99 ಸ್ಥಾನಗಳಿಸಿ ಆಡಳಿತ ವಹಿಸಿಕೊಂಡಿತ್ತು. ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ (GHMC) ವ್ಯಾಪ್ತಿಯಲ್ಲಿ 20 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, 74 ಲಕ್ಷ ಮತದಾರರಿದ್ದಾರೆ.