''ಮುತ್ತಿನ ನಗರಿಯಿಂದ ಕೆಸಿಆರ್, ಟಿಆರ್ಎಸ್ ಹೊರ ಹಾಕಲು ಇದು ಸಕಾಲ''
ಹೈದರಾಬಾದ, ನ, 27: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಾಗಿ ಪ್ರಚಾರ ನಡೆಸಲು ಮುತ್ತಿನ ನಗರಿ ಹೈದರಾಬಾದಿಗೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಶುಕ್ರವಾರ ಆಗಮಿಸಿದ್ದರು.
ಗ್ರೇಟರ್ ಹೈದರಾಬಾದ್ ಭಾಗದಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಜೆಪಿ ನಡ್ಡಾ, ಕೆಸಿಆರ್ (ಕೆ ಚಂದ್ರಶೇಖರ್ ರಾವ್) ಹಾಗೂ ಟಿಆರ್ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಆಡಳಿತವನ್ನು ಹೊರ ಹಾಕಲು ಇದು ಸಕಾಲ ಎಂದರು.
ಇಡೀ ದಕ್ಷಿಣ ಭಾರತ ಕೇಸರೀಕರಣವಾಗಲಿದೆ: ತೇಜಸ್ವಿ ಸೂರ್ಯ
"ಮಳೆ ಸುರಿಯುತ್ತಿದ್ದರೂ ಅಪಾರ ಸಂಖ್ಯೆಯಲ್ಲಿ ಇಲ್ಲಿ ನೆರೆದಿದ್ದೀರಿ, ಇದು ಬಹುದೊಡ್ಡ ಸಂದೇಶವನ್ನು ಆಡಳಿತ ಪಕ್ಷಕ್ಕೆ ನೀಡಲಿದೆ. ಬಿಜೆಪಿಯ ಆಡಳಿತಕ್ಕೆ ಸ್ವಾಗತ ಕೋರಲಿದೆ'' ಎಂದು ಕೊತ್ತಾಪೇಟ್ ನಲ್ಲಿ ನಡೆದ ಸಭೆಯಲ್ಲಿ ಹೇಳಿದರು.
ಪಾಲಿಕೆ ಚುನಾವಣೆಗೆ ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ಪ್ರಚಾರಕ್ಕೆ ಆಗಮಿಸುತ್ತಿರುವುದರ ಬಗ್ಗೆ ಟೀಕೆ, ಆಕ್ಷೇಪಗಳು ಕೇಳಿ ಬಂದಿದ್ದರ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದ ಪರ ಪ್ರಚಾರಕ್ಕಾಗಿ ಎಲ್ಲಿಗೆ ಬೇಕಾದರೂ ಹೋಗುವೆ, ಭ್ರಷ್ಟಾಚಾರ ಕೊನೆಗಾಣಿಸಿ, ಅಭಿವೃದ್ಧಿಪರ ಸರ್ಕಾರ ಸ್ಥಾಪನೆಗಾಗಿ ಶ್ರಮಿಸುವ ಅಗತ್ಯವಿದೆ ಎಂದರು.
ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಶನಿವಾರದಂದು ಪ್ರಚಾರ ಕೈಗೊಳ್ಳಲಿದ್ದಾರೆ. ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಹೈದರಾಬಾದ್ ಚುನಾವಣೆಗಾಗಿ ಪ್ರಚಾರ ನಡೆಸುವ ನಿರೀಕ್ಷೆಯಿದೆ.
GHMC: ಬಿಜೆಪಿ ಪ್ರಣಾಳಿಕೆಯಲ್ಲಿ ಕೊರೊನಾ ಲಸಿಕೆ, ಚಿಕಿತ್ಸೆ
150 ಸದಸ್ಯರ ಆಯ್ಕೆಗಾಗಿ ಡಿಸೆಂಬರ್ 01ರಂದು ಬೆಳಗ್ಗೆ 7 ರಿಂದ ಸಂಜೆ 6 ತನಕ ಮತದಾನದ ನಡೆಯಲಿದೆ. ಡಿಸೆಂಬರ್ 4ರಂದು ಮತ ಎಣಿಕೆ ನಡೆಯಲಿದೆ.
ಹಾಲಿ ಪಾಲಿಕೆ ಅವಧಿ ಫೆಬ್ರವರಿ 10, 2021ರಂದು ಕೊನೆಗೊಳ್ಳಲಿದೆ. ಸಾಮಾನ್ಯ ವರ್ಗದ ಮಹಿಳೆಗೆ ಈ ಬಾರಿ ಮೇಯರ್ ಸ್ಥಾನ ಮೀಸಲಾಗಿದೆ. 2016ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಪಕ್ಷ 150ರಲ್ಲಿ 99 ಸ್ಥಾನಗಳಿಸಿ ಆಡಳಿತ ವಹಿಸಿಕೊಂಡಿತ್ತು. ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ (GHMC) ವ್ಯಾಪ್ತಿಯಲ್ಲಿ 20 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, 74 ಲಕ್ಷ ಮತದಾರರಿದ್ದಾರೆ.