ಅಜ್ಞಾತಸ್ಥಳದಿಂದ ವಿಡಿಯೋ, ಜಾಮೀನಿಗೆ ಕಾದಿರುವ ಟಿವಿ9 ಮಾಜಿ ಸಿಇಒ
ಹೈದರಾಬಾದ್, ಮೇ 22: ಟಿವಿ9ನ ಮಾಜಿ ಸಿಇಒ ರವಿ ಪ್ರಕಾಶ್ ಅವರು ಫೋರ್ಜರಿ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಅಲಂದಾ ಮೀಡಿಯಾ ಸಂಸ್ಥೆ ನೀಡಿದ ದೂರಿನನ್ವಯ ರವಿ ಪ್ರಕಾಶ್ ವಿರುದ್ಧ ಫೋರ್ಜರಿ ಕೇಸ್ ದಾಖಲಾಗಿದೆ.
ಬಂಜಾರಾ ಹಿಲ್ಸ್ ನಲ್ಲಿರುವ ಕಚೇರಿ ಮೇಲೆ ಸೈಬರಾಬಾದ್ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿದಾಗಿನಿಂದ ರವಿಪ್ರಕಾಶ್ ನಾಪತ್ತೆಯಾಗಿದ್ದು, ಅಜ್ಞಾತ ಸ್ಥಳದಿಂದ ವಿಡಿಯೋ ಸಂದೇಶ ಕಳಿಸಿದ್ದಾರೆ. ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಬುಧವಾರ(ಮೇ 22) ಅರ್ಜಿ ವಿಚಾರಣೆ ನಡೆಸಲಾಗುತ್ತಿದೆ. ಬಂಜಾರ ಹಿಲ್ಸ್ ಪೊಲೀಸ್ ಠಾಣೆ ಹಾಗೂ ಸೈಬರಾಬಾದ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
ಟಿವಿ9 ಸಿಇಒ ರವಿ ಪ್ರಕಾಶ್ ವಿರುದ್ಧ ಫೋರ್ಜರಿ ಕೇಸ್ ದಾಖಲು
ಶ್ರೀನಿರಾಜು ಅವರು ಲಾಭದೊಂದಿಗೆ ಹೊಸ ಡೀಲ್ ಗೆ ಉತ್ಸಾಹಿಸಿದರು. ಎಬಿಸಿಎಲ್ ಸಂಸ್ಥೆಯಲ್ಲಿ ಹೊಸ ಹೂಡಿಕೆದಾರರಾಗಿ ಕೃಷ್ಣಾರೆಡ್ಡಿ ಬಂದರು. ನಾನು ಎಡಿಟೋರಿಯಲ್ ಮಾತ್ರ ನೋಡಿಕೊಳ್ಳುತ್ತಿದ್ದೆ. ಟಿವಿ9 ಹಲವು ರಾಜ್ಯಗಳಲ್ಲಿ ನಂ.1 ಮಾಧ್ಯಮವಾಗಿ ಬೆಳೆದು ಬಂದಿದೆ. ನಾನು ಅಲ್ಪ ಸಂಖ್ಯೆಯಲ್ಲಿ ಷೇರುದಾರನಾಗಿದ್ದೇನೆ. ನನ್ನ ಅಧೀನದಲ್ಲಿ ನೀನು ಇಲ್ಲದಿದ್ದರೆ ನಿನ್ನನ್ನು ಯಾವ ಹಂತಕ್ಕೆ ಕುಸಿಯುವಂತೆ ಮಾಡುತ್ತೇನೆ ನೋಡು ಎಂದು ಹೂಡಿಕೆದಾರರಲ್ಲಿ ಒಬ್ಬರಾದ ರಾಮೇಶ್ವರ್ ರಾವ್ ಅವರು ಬೆದರಿಕೆ ಹಾಕಿದರು. ನಾನು ಬೆದರಿಕೆಗೆ ಜಗ್ಗದ ಕಾರಣ ನನ್ನ ಮೇಲೆ ಮೂರು ಕೇಸುಗಳನ್ನು ದಾಖಲಿಸಿದ್ದಾರೆ. ಮೂರು ಕೇಸುಗಳು ಸುಳ್ಳು ಕೇಸುಗಳಾಗಿವೆ ಎಂದು ವಿಡಿಯೋದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಹೂಡಿಕೆ ಒಪ್ಪಂದ ಬಹಿರಂಗ
ಮೊದಲನೇ ದೂರು: ಹೂಡಿಕೆ ಒಪ್ಪಂದ ಮುರಿದಿರುವುದರ ಬಗ್ಗೆ ಆರೋಪಿಸಲಾಗಿದೆ. ಹೊಸ ನೇಮಕಾತಿಗೂ ಕಡಿವಾಣ ಬಿದ್ದಿದೆ. ಆದರೆ, ಈ ಒಪ್ಪಂದದ ವಿವಾದದ ಬಗ್ಗೆ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ ಆದರೆ, ಒಪ್ಪಂದದ ಗೌಪ್ಯ ಪತ್ರಗಳನ್ನು ಪೊಲೀಸರ ಮುಂದಿಟ್ಟ ಶಿವಾಜಿ ಹಾಗೂ ರಾಮೇಶ್ವರ್ ರಾವ್ ಅವರು ನನ್ನ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಾಡುತ್ತಾರೆ.
ನಕಲಿ ಸಹಿ ಆರೋಪದ ಬಗ್ಗೆ
2ನೇ ದೂರು: ಉದ್ಯೋಗಿಯ ಸಹಿ ನಕಲು: ದೇವೇಂದ್ರ ಅಗರವಾಲ್ ಎಂಬ ಉದ್ಯೋಗಿಯ ಸಹಿಯನ್ನು ನಕಲು ಮಾಡಿ ಆತನನ್ನು ಕೆಲಸದಿಂದ ವಜಾ ಮಾಡಿರುವುದಾಗಿ ದೂರಲಾಗಿದೆ. ರಾಮೇಶ್ವರ್ ಅವರ ಕಡೆಯವರು ದೇವೇಂದ್ರ ಅವರನ್ನು ಕಿಡ್ನಾಪ್ ಮಾಡಿ, ಬಲವಂತವಾಗಿ ನಕಲಿ ಪತ್ರವನ್ನು ಸಂಸ್ಥೆ ವೆಬ್ ಸೈಟಿಗೆ ಅಪ್ಲೋಡ್ ಮಾಡಲು ಯತ್ನಿಸಿದ್ದಾರೆ. ಆದರೆ, ಅದಕ್ಕೂ ಮುನ್ನವೇ ದೇವೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ಆತ ತಾತ್ಕಾಲಿಕ ಉದ್ಯೋಗಿಯಾಗಿದ್ದು, ಆತನ ನಕಲಿ ಸಹಿ ಮಾಡುವ ಪ್ರಮೇಯವೇ ಇಲ್ಲ
3ನೇ ದೂರು ಏನು, ಸ್ಪಷ್ಟನೆ ಏನು?
3ನೇ ದೂರು : ಟಿವಿ9 ಲೋಗೋ : ಲೋಗೋವನ್ನು ಸೃಷ್ಟಿಕರ್ತನೇ ನಾನು. ನಾನು ಅದನ್ನು ಎತ್ತಿಕೊಂಡು ಹೋಗಿ ಏನು ತಾನೇ ಮಾಡಲಿ, ಟಿವಿ9 ಹಾಗೂ ರವಿಪ್ರಕಾಶ್ ಅವಿನಾಭಾವ ಸಂಬಂಧದ ಬಗ್ಗೆ ದೂರು ನೀಡಿರುವುದು ಹಾಸ್ಯಾಸ್ಪದ. ಪೊಲೀಸ್ ವ್ಯವಸ್ಥೆ ಬಗ್ಗೆ ಜಿಗುಪ್ಸೆ ಹುಟ್ಟುವಂತೆ ಮಾಡಿದ್ದಾರೆ. ಉತ್ತಮ ಸಮಾಜಕ್ಕಾಗಿ ಸುದ್ದಿ ಸಂಸ್ಥೆಯನ್ನು ಬೆಳೆಸಿದ ನಾನು ಇದಕ್ಕೆಲ್ಲ ಹೆದರುವುದಿಲ್ಲ ಎಂದಿದ್ದಾರೆ.
ಅಲಂದಾ ಮಾಧ್ಯಮ ಸಂಸ್ಥೆ ಕೌಶಿಕ್ ನೀಡಿದ ದೂರು
ಟಿವಿ9 ತೆಲುಗು ಮಾಧ್ಯಮ ಸಂಸ್ಥೆಯನ್ನು ಅಲಂದಾ ಮೀಡಿಯಾ ನಿರ್ವಹಣೆ ಮಾಡುತ್ತಿತ್ತು. ಇದಕ್ಕೆ ಸಂಬಂಧಪಟ್ಟ ಪತ್ರಗಳು ನಾಪತ್ತೆಯಾಗಿವೆ, ಕೆಲ ಪತ್ರಗಳು ಫೋರ್ಜರಿ ಮಾಡಲಾಗಿದೆ ಎಂದು ಸೈಬಾರಾಬಾದ್ ಪೊಲೀಸ್ ಠಾಣೆಯಲ್ಲಿ ಅಲಂದಾ ಮಾಧ್ಯಮ ಸಂಸ್ಥೆ ಕೌಶಿಕ್ ರಾವ್ ಅವರು ದೂರು ಸಲ್ಲಿಸಿದ್ದರು. ರವಿ ಪ್ರಕಾಶ್ ವಿರುದ್ಧ ಐಟಿ ಕಾಯ್ದೆ 56, ಐಪಿಸಿ ಸೆಕ್ಷನ್ 406, 467 ಅನ್ವಯ ಪ್ರಕರಣ ದಾಖಲಾಗಿದೆ.
ನಾಪತ್ತೆಯಾಗಿರುವ ರವಿಪ್ರಕಾಶ್
ಹೊಸದಾಗಿ ಮೂವರು ನಿರ್ದೇಶಕರನ್ನು ನೇಮಿಸುವ ವಿಷಯದಲ್ಲಿ ರವಿಪ್ರಕಾಶ್ ಹಾಗೂ ಅಲಂದಾ ಸಂಸ್ಥೆ ನಡುವೆ ಒಮ್ಮತ ಮೂಡಿರಲಿಲ್ಲ. ಆದರೆ, ನಿರ್ದೇಶಕರ ನೇಮಕ ಕುರಿತಂತೆ ನಕಲಿ ದಾಖಲೆ ಪತ್ರ ಸಿದ್ಧವಾಗಿತ್ತು. ಈ ಬಗ್ಗೆ ನೀಡಲಾಗಿದ್ದ ದೂರಿನನ್ವಯ ಪೊಲೀಸರು ಟಿವಿ9 ಕಚೇರಿ ಮತ್ತು ಸಿಇಒ ರವಿಪ್ರಕಾಶ್ ಮನೆ ಮೇಲೆ ದಾಳಿ ನಡೆಸಿ ಮಾಹಿತಿ ಕಲೆ ಹಾಕಿದ್ದರು. ರವಿಪ್ರಕಾಶ್ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದ್ದು, ಸದ್ಯ ನಾಪತ್ತೆಯಾಗಿದ್ದಾರೆ.