ಬಿರಿಯಾನಿ ಕೀ ಬಾತ್: ಜಿಎಸ್ಟಿ ಹೆಸರಲ್ಲಿ 3 ರೂ. ಸುಲಿದ ಸ್ವಿಗ್ಗಿಗೆ 2,000 ರೂ. ದಂಡ!
ಹೈದ್ರಾಬಾದ್, ಜೂನ್ 21: ನಾನು ಕಾಲೇಜು ವಿದ್ಯಾರ್ಥಿ. ಹೋಟೆಲ್, ರೆಸ್ಟೋರೆಂಟ್ ಮತ್ತು ಉಪಹಾರ ಮಂದಿರಗಳಿಗೆ ಹೋಗಿ ಊಟ ಮಾಡಿಕೊಂಡು ಬರುವುದಕ್ಕೆ ಟೈಮ್ ಸಾಕಾಗುವುದಿಲ್ಲ. ಅಥವಾ ನಮ್ಮಿಷ್ಟದ ರೆಸ್ಟೋರೆಂಟ್ ನಿಂದಲೇ ಊಟವನ್ನು ಸವಿಯಬೇಕು ಅಂತಾ ಆಹಾರ ಪ್ರಿಯರು ಸ್ವಿಗ್ಗಿ ಮೇಲೆ ಡಿಪೆಂಡ್ ಆಗಿರುತ್ತಾರೆ.
ಅದೇ ರೀತಿ ಸ್ವಿಗ್ಗಿ ಮತ್ತು ಝೊಮ್ಯಾಟೋ ಮೂಲಕ ತಾವು ಬಯಸಿದ ರೆಸ್ಟೋರೆಂಟ್ನಲ್ಲಿ ತಯಾರಿಸಿದ ತಮ್ಮಿಷ್ಟರ ಊಟವನ್ನು ಜನರು ಆರ್ಡರ್ ಮಾಡಿ ತರಿಸಿಕೊಳ್ಳುತ್ತಾರೆ. ಇದರಿಂದ ಅದೆಷ್ಟೋ ಸಾವಿರ ಸಾವಿರ ಮಂದಿಗೆ ಉಪಕಾರವಾಗಿದೆ.
ಆಂಟಿಗೆ 'Miss U Lot' ಮೆಸೇಜ್ ಕಳುಹಿಸಿದ ಸ್ವಿಗ್ಗಿ ಬಾಯ್ ಕಥೆ ಏನಾಯ್ತು?
ಎಲ್ಲವೂ ಕಮರ್ಷಿಯಲ್ ಆಗುತ್ತಿರುವ ಕಾಲದಲ್ಲಿ ಕೊಂಚ ಅತಿಯಾಸೆ ತೋರಿಸಿದ್ದಕ್ಕೆ ಈಗ ಅದೇ ಕಂಪನಿಯು ಗ್ರಾಹಕನಿಗೆ ದಂಡ ಪಾವತಿಸಿರುವ ಘಟನೆಯು ಹೈದ್ರಾಬಾದ್ ನಗರದಲ್ಲಿ ನಡೆದಿದೆ. ಜಸ್ಟ್ 3 ರೂಪಾಯಿ ಆಸೆಗೆ ಬಿದ್ದ ಸ್ವಿಗ್ಗಿ ಈಗ ಗ್ರಾಹಕರ ಜೇಬು ತುಂಬುವಷ್ಟು ದಂಡ ತೆತ್ತಿದೆ. ಹೌದು, ನೀವು ಕಣ್ಣು ಅರಳಿಸಿ ಓದುವ ಈ ಸ್ಟೋರಿ ನಿಮ್ಮ ಮುಖದಲ್ಲಿ ಮಂದಹಾಸ ಮೂಡಿಸುತ್ತದೆ.
ಬಿರಿಯಾನಿ ಆರ್ಡರ್ ಕೊಟ್ಟಿದ್ದ ಮುರುಳಿ ಕುಮಾರ್ ರೆಡ್ಡಿ
ಹೈದ್ರಾಬಾದ್ ಮೂಲದ ವಿದ್ಯಾರ್ಥಿ ಮುರುಳಿ ಕುಮಾರ್ ರೆಡ್ಡಿ ಎನ್ನುವವರು ಇತ್ತೀಚಿಗೆ ತಮ್ಮಿಷ್ಟದ ರೆಸ್ಟೋರೆಂಟ್ ಮೂಲಕ ಬಿರಿಯಾನಿ ಖರೀದಿಸುವುದಕ್ಕೆ ಸ್ವಿಗ್ಗಿಯಲ್ಲಿ ಆರ್ಡರ್ ಕೊಟ್ಟಿದ್ದರು. 200 ರೂಪಾಯಿ ಬಿರಿಯಾನಿಗೆ ಕೂಪನ್ ಆಫರ್ ಪಡೆದುಕೊಂಡಿದ್ದ ವಿದ್ಯಾರ್ಥಿಯು ಒಂದು ಪ್ಲೇಟ್ ಬಿರಿಯಾನಿಗಾಗಿ 140 ರೂಪಾಯಿ ಹಣ ಪಾವತಿ ಮಾಡಿದ್ದರು.
7ರ ಬದಲಿಗೆ 10 ರೂಪಾಯಿ ಪಡೆದುಕೊಂಡ ಸ್ವಿಗ್ಗಿ
ಒಂದು ಪ್ಲೇಟ್ ಬಿರಿಯಾನಿಯನ್ನು ಡೆಲಿವರಿ ಮಾಡಿದ್ದ ಸ್ವಿಗ್ಗಿ ಅಪ್ಲಿಕೇಷನ್ ತನ್ನ ಗ್ರಾಹಕನಿಂದ ಹೆಚ್ಚುವರಿ ತೆರಿಗೆಯನ್ನು ಪಡೆದುಕೊಂಡಿತು. ಸರಕು ಸೇವೆ ತೆರಿಗೆ(ಜಿಎಸ್ಟಿ) ಹೆಸರಿನಲ್ಲಿ ಹೆಚ್ಚುವರಿ ಆಗಿ 3 ರೂಪಾಯಿ ಅನ್ನು ಸ್ವೀಕರಿಸಲಾಯಿತು. ಅಂದರೆ 7 ರೂಪಾಯಿ ತೆರಿಗೆಯ ಬದಲಿಗೆ 10 ರೂಪಾಯಿ ಅನ್ನು ಗ್ರಾಹಕ ಮರುಳಿ ಕುಮಾರ್ ರೆಡ್ಡಿಯಿಂದ ಪಡೆದುಕೊಳ್ಳಲಾಗಿತ್ತು.
ಸ್ವಿಗ್ಗಿ ಮತ್ತು ರೆಸ್ಟೋರೆಂಟ್ ವಿರುದ್ಧ ಮುರುಳಿ ಕುಮಾರ್ ರೆಡ್ಡಿ
ಬಿರಿಯಾನಿಗೆ ತಾವು ಬುಕ್ ಮಾಡಿದ ಬೆಲೆಗಿಂತ ಹೆಚ್ಚು ದರವನ್ನು ತೆಗೆದುಕೊಂಡ ಮಶೀರಾಬಾದ್ ಪ್ರದೇಶದಲ್ಲಿರುವ ಬಿರಿಯಾನಿ ಹೌಸ್ ಮತ್ತು ಸ್ವಿಗ್ಗಿ ಡೆಲಿವರಿ ಅಪ್ಲಿಕೇಷನ್ ವಿರುದ್ಧ ಮುರುಳಿ ಕುಮಾರ್ ರೆಡ್ಡಿ ದೂರು ನೀಡಿದರು. ವಿದ್ಯಾರ್ಥಿಯು ನೀಡಿದ ದೂರನ್ನು ಸ್ವೀಕರಿಸಿದ ಹೈದರಾಬಾದ್ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ-3ವು ರೆಸ್ಟೋರೆಂಟ್ ಮತ್ತು ಸ್ವಿಗ್ಗಿಗೆ ದಂಡ ವಿಧಿಸಿದೆ.
ಸ್ವಿಗ್ಗಿಗೆ 2000 ರೂಪಾಯಿ ದಂಡ
ಜಸ್ಟ್ 3 ರೂಪಾಯಿ ಆಸೆಗೆ ಹೆಚ್ಚುವರಿ ತೆರಿಗೆಯನ್ನು ಪಡೆದ ಬಿರಿಯಾನಿ ಹೌಸ್ ಮತ್ತು ಸ್ವಿಗ್ಗಿ ಡೆಲಿವರಿ ಅಪ್ಲಿಕೇಷನ್ ಈಗ ದಂಡ ಪಾವತಿಸಬೇಕಾಗಿದೆ. ಗ್ರಾಹಕನಿಂದ 3 ರೂಪಾಯಿ ಹೆಚ್ಚುವರಿ ಆಗಿ ಸ್ವೀಕರಿಸಿದವರಿಗೆ 2,000 ರೂಪಾಯಿ ದಂಡ ವಿಧಿಸಲಾಗಿದೆ. ಗ್ರಾಹಕ ಮುರುಳಿ ಕುಮಾರ್ ರೆಡ್ಡಿಗೆ 2000 ರೂಪಾಯಿ ಪರಿಹಾರವನ್ನು ನೀಡುವಂತೆ ಹೈದರಾಬಾದ್ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ-3ವು ಸೂಚನೆ ನೀಡಿದೆ.