ತಿರುಮಲ ತಿರುಪತಿ ವೆಂಕಟೇಶ್ವರನ ಸನ್ನಿಧಾನದಲ್ಲಿ ಅಗ್ನಿ ಅವಘಡ!
ಹೈದ್ರಾಬಾದ್, ಡಿಸೆಂಬರ್.08: ತಿರುಮಲ ತಿರುಪತಿ ವೆಂಕಟೇಶ್ವರನ ಸನ್ನಿಧಿಯಲ್ಲಿ ಇಂಥದೊಂದು ಘಟನೆ ನಡೆದು ಹೋಗುತ್ತದೆ ಎಂದು ಯಾರೂ ಕೂಡಾ ಊಹೆಯನ್ನು ಮಾಡಿರಲಿಲ್ಲ. ಆದರೆ, ಇಂದು ನಡೆದ ಘಟನೆ ಇಡೀ ಭಕ್ತಸಮೂಹವನ್ನೇ ಕಂಗೆಡುವಂತೆ ಮಾಡಿದೆ.
ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ತಿರುಮಲ ತಿರುಪತಿಯ ಲಡ್ಡು ಪ್ರಸಾದ ತಯಾರಿಕಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಲಡ್ಡು ತಯಾರಿಕೆಗೆಂದು ಸ್ಟೌ ಮೇಲೆ ತುಪ್ಪ ಇರಿಸಿ ಮೈ ಮರೆತಿದ್ದಕ್ಕೆ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಟಿಟಿಡಿ ವೆಬ್ ತಾಣ ಸ್ವಚ್ಛವಾಗಿದೆ, ಟಿಡಿಪಿಗೆ ಸುಬ್ಬಾರೆಡ್ಡಿ ಎಚ್ಚರಿಕೆ
ಆದರೆ, ಕೋಟಿ ಕೋಟಿ ಭಕ್ತರ ಆರಾಧ್ಯ ದೈವವಾಗಿರುವ ಶ್ರೀವೆಂಕಟೇಶ್ವರನ ಆಶೀರ್ವಾದ ಭಕ್ತ ಸಮೂಹವನ್ನು ಕಾಪಾಡಿದೆ. ಕೂದಲೆಳೆ ಅಂತರದಲ್ಲೇ ಭಾರಿ ದುರಂತವೊಂದು ತಪ್ಪಿ ಹೋಗಿದೆ. ಅಗ್ನಿ ಅವಘಡದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ಲಾಡು ತಯಾರಿಕೆಗೆ ಮುಂದಾಗಿದ್ದ ಸಿಬ್ಬಂದಿ ಅದಕ್ಕಾಗಿ ಸ್ಟೌ ಮೇಲೆ ತುಪ್ಪ ಕಾಯಿಸಲು ಇಟ್ಟಿದ್ದಾರೆ. ನಂತರದಲ್ಲಿ ಅದನ್ನು ಹಾಗಿ ಬಿಟ್ಟಿದ್ದು, ಬೆಂಕಿ ಹೊತ್ತಿಕೊಂಡಿದೆ. ಅಲ್ಲಿಂದ ಬೆಂಕಿ ಪ್ರಮಾಣ ಹೆಚ್ಚಾಗಿದ್ದು, ಇಡೀ ಕಟ್ಟಡಕ್ಕೆ ದೊಡ್ಡ ಪ್ರಮಾಣದಲ್ಲಿ ಆವರಿಸಿದೆ.
ತಿರುಮಲದ ಲಾಡು ತಯಾರಿಕಾ ಘಟಕದಲ್ಲಿ ಬೆಂಕಿ ಹೊತ್ತಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿತು. ಶೀಘ್ರ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.