ಲೋಕ ಸಮರ : ತೆಲಂಗಾಣ ಸಿಎಂ ಪುತ್ರಿಗೆ ಸೋಲುಣಿಸಿದ ರೈತ ಸಮೂಹ
ಹೈದರಾಬಾದ್, ಮೇ 28: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಇವಿಎಂ ಬಳಕೆ ಮಾಡುವ ಮೂಲಕ ದಾಖಲೆ ಬರೆದಿದ್ದ ನಿಜಾಮಾಬಾದ್ ಕ್ಷೇತ್ರದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಅಭ್ಯರ್ಥಿ ಕೆ ಕವಿತಾ ಅವರು ಸೋಲು ಕಂಡಿದ್ದಾರೆ. ಕವಿತಾ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಅರವಿಂದ್ ಧರ್ಮಪುರಿ ಗೆಲುವು ಸಾಧಿಸಿದರೂ ಗೆಲುವಿನ ಪಾಲಿನಲ್ಲಿ ರೈತ ಸಮೂಹದ ಹೋರಾಟವೂ ಸೇರಿದೆ.
ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ- ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಮಗಳು ಕಲ್ವಕುಂಟ್ಲ ಕವಿತಾ ಸ್ಪರ್ಧಿಸುತ್ತಿದ್ದಾರೆ. ಕವಿತಾ ಹೊರತುಪಡಿಸಿ, ಕಾಂಗ್ರೆಸ್ ನಿಂದ ಮಧು ಯಕ್ಷಿ ಗೌಡ್, ಬಿಜೆಪಿಯ ಧರ್ಮಪುರಿ ಅರವಿಂದ್ ಸ್ಪರ್ಧೆಯಲ್ಲಿದ್ದರು. ಮಿಕ್ಕಂತೆ 177 ಮಂದಿ ರೈತರು ಕಣದಲ್ಲಿದ್ದರು. ಅಗತ್ಯ ಬೆಂಬಲ ಬೆಳೆ ನೀಡದ ಕಾರಣ, ಅರಿಶಿನ ಬೆಳೆಯುವ ರೈತ ಸಮೂಹ ರಾಜಕೀಯಕ್ಕೆ ಕಾಲಿಟ್ಟಿತ್ತು. ಒಟ್ಟಾರೆ ನಿಜಾಮಾಬಾದಿನಲ್ಲಿ 185 ಮಂದಿ ಸ್ಪರ್ಧಿಗಳಿದ್ದರು.
ಅತಿ ಹೆಚ್ಚು ಇವಿಎಂ ಬಳಕೆ, ಇತಿಹಾಸ ಸೃಷ್ಟಿಸಿದ ನಿಜಾಮಾಬಾದ್
ಈ 177 ಮಂದಿ ರೈತರ ಸ್ಪರ್ಧೆ, ಗೆಲುವಿಗೆ ಅಡ್ಡಿಯಾಗಬಹುದು ಎಂದು ಕವಿತಾ ಅವರು ಊಹಿಸಿರಲಿಕ್ಕು ಸಾಧ್ಯವಿಲ್ಲ. ಕವಿತಾ ಅವರನ್ನು ಶೇ 6.67 ಮತಗಳ ಅಂತರದಿಂದ ಬಿಜೆಪಿಯ ಅರವಿಂದ್ ಧರ್ಮಪುರಿ ಅವರು ಸೋಲಿಸಿದರು. ಈ ಶೇ 6.67 ಮತಗಳನ್ನು ಪಡೆದಿದ್ದು ಇದೇ 177 ಮಂದಿ ರೈತ ಸಮೂಹದ ಅಭ್ಯರ್ಥಿಗಳು ಎಂಬುದು ವಿಶೇಷ.
ನಿಜಾಮಾಬಾದಿನಲ್ಲಿ ದಾಖಲೆ ಇವಿಎಂ ಬಳಕೆ
ಸಾಮಾನ್ಯ ಇವಿಎಂಗಳನ್ನು 64 ಮಂದಿ ಅಭ್ಯರ್ಥಿಗಳಿರುವ ಕ್ಷೇತ್ರಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಭ್ಯರ್ಥಿಗಳಿದ್ದರೆ ಬ್ಯಾಲೆಟ್ ಪೇಪರ್ ಬಳಸಿ ಚುನಾವಣಾ ಪ್ರಕ್ರಿಯೆ ನಡೆಸಲಾಗುತ್ತದೆ. ಆದರೆ, ತೆಲಂಗಾಣದ ಮುಖ್ಯ ಚುನಾವಣಾಧಿಕಾರಿ ರಜತ್ ಕುಮಾರ್ ಅವರು 26,820 ಜಂಬೋ ಇವಿಎಂಗಳನ್ನು ತರಿಸಿಕೊಂಡು ನಿಜಾಬಾಮಾದ್ ನಲ್ಲಿ ಮತದಾನ ಪ್ರಕ್ರಿಯೆ ಇವಿಎಂ ಮೂಲಕವೆ ನಡೆಯುವಂತೆ ನೋಡಿಕೊಂಡಿದ್ದರು.
2019ರ ಚುನಾವಣೆ ಫಲಿತಾಂಶ
ಏಪ್ರಿಲ್ 11 ರಿಂದ ಮೇ 19ರ ತನಕ ಒಟ್ಟು 7 ಹಂತಗಳಲ್ಲಿ ಮತದಾನ ನಡೆಸಲಾಯಿತು, 542 ಕ್ಷೇತ್ರಗಳ ಚುನಾವಣಾ ಫಲಿತಾಂಶ ಮೇ 23ರಂದು ಪ್ರಕಟವಾಗಿತ್ತು. ಬಿಜೆಪಿ ಅಭ್ಯರ್ಥಿ ಅರವಿಂದ್ 4,80,584 ಮತ(45.22%) ಗಳಿಸಿ ಜಯ ಸಾಧಿಸಿದರೆ, ಕವಿತಾ 4,09,709 ಮತ(38.55%) ಗಳಿಸಿದರು. ಕಾಂಗ್ರೆಸ್ಸಿನ ಮಧುಗೌಡ ಯಕ್ಷಿ 69,240(6.52%) ಗಳಿಸಿ ಮೂರನೇ ಸ್ಥಾನ ಗಳಿಸಿದರು. 177 ರೈತ ಸಮೂಹದ ಮತ ಗಳಿಕೆ 90 ಸಾವಿರಕ್ಕೂ ಅಧಿಕ. ಕವಿತಾ 70,875 ಮತಗಳ ಅಂತರದಿಂದ ಸೋಲು ಕಂಡರು. ರೈತರು ಸ್ಪರ್ಧಿಸಿರದಿದ್ದರೆ ಕವಿತಾಗೆ ಗೆಲ್ಲುವ ಅವಕಾಶವಿರುತ್ತಿತ್ತು.
ಮುತ್ತಿನ ನಗರಿ ಹೈದರಾಬಾದ್: ಲೋಕಸಭಾ ಕ್ಷೇತ್ರ ಪರಿಚಯ
ವಾರಣಾಸಿಯಲ್ಲಿ ಏಕೈಕ ರೈತನಿಂದ ಸ್ಪರ್ಧೆ
ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಂದ 100ಕ್ಕೂ ಅಧಿಕ ರೈತರು, ವಾರಣಾಸಿಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಬಂದಿತ್ತು. ನಿಜಾಮಾಬಾದಿನ 55 ರೈತರು ಹಾಗೂ ತಮಿಳುನಾಡಿನ 40 ಮಂದಿ ರೈತರು ಕಣಕ್ಕಿಳಿಯುವ ಸಾಧ್ಯತೆಯಿತ್ತು. ಆದರೆ, ಕೊನೆಗೆ 25 ಮಂದಿ ರೈತರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಒಬ್ಬ ರೈತನ ನಾಮಪತ್ರ ಮಾತ್ರ ಸ್ವೀಕೃತವಾಗಿತ್ತು.
ಅರವಿಂದ್ ಮೇಲೆ ನಂಬಿಕೆಯಿದೆ
ಕವಿತಾ ಅವರು ರೈತರ ಬೇಡಿಕೆ ಈಡೇರಿಸದ ಕಾರಣ ಬಿಜೆಪಿ ಅಭ್ಯರ್ಥಿ ಅರವಿಂದ್ ಗೆ ಮತ ಹಾಕಲಾಗಿದೆ. ಒಂದು ವೇಳೆ ಅರಿಶಿನ ಹಾಗೂ ಕೆಂಪು ಜೋಳಕ್ಕೆ ಅಗತ್ಯ ಬೆಂಬಲ ಬೆಲೆ ಸಿಗದಿದ್ದರೆ ನೂತನ ಸಂಸದ ಅರವಿಂದ್ ವಿರುದ್ಧ ಪ್ರತಿಭಟನೆ ನಡೆಸಲಾಗುವುದು, ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಜನಪ್ರತಿನಿಧಿಗಳ ಕರ್ತವ್ಯ ಎಂದು ರೈತ ಸಮೂಹದ ನಾಯಕ ಕೆ ದಿವಾಕರ್ ಹೇಳಿದ್ದಾರೆ.