ತಹಶೀಲ್ದಾರರಿಗೆ ಬೆಂಕಿಹಚ್ಚಿ ಕೊಂದು, ಪೊಲೀಸ್ ಠಾಣೆಗೆ ನಡೆದ ರೈತ
ಹೈದರಾಬಾದ್, ನವೆಂಬರ್ 04: ತೆಲಂಗಾಣದಲ್ಲಿ ಮಹಿಳಾ ತಹಶೀಲ್ದಾರ್ ವಿಜಯಾ ರೆಡ್ಡಿ ಎಂಬುವವನ್ನು ಅವರ ಕಚೇರಿಯಲ್ಲೇ ಬೆಂಕಿ ಹಚ್ಚಿ ಹತ್ಯೆ ಮಾಡಿದ ರೈತ ನಂತರ ತಾನೇ ಪೊಲೀಸ್ ಸ್ಟೇಷನ್ನಿಗೆ ತೆರಳಿದ್ದ ಎಂದು ಕೆಲವು ಮೂಲಗಳು ತಿಳಿಸಿವೆ.
ತೆಲಂಗಾಣದ ರಂಗಾರೆಡ್ಡಿಜಿಲ್ಲೆ ಅಬ್ದುಲ್ಲಾಪುರ ಎಂಬಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಮಹಿಳಾ ತಹಶೀಲ್ದಾರ್ ಗೆ ಕಚೇರಿಯಲ್ಲೇ ಬೆಂಕಿ, ಸ್ಥಳದಲ್ಲೇ ಸಾವು
ಪೊಲೀಸ್ ಸ್ಟೇಷನ್ನಿಗೆ ನಡೆದು ಹೋದ ರೈತ ಅಲ್ಲೇ ಮೂರ್ಛೆ ತಪ್ಪಿ ಬಿದ್ದಿದ್ದ. ಆತನ ದೇಹದ ಮೇಲೂ ಸಾಕಷ್ಟು ಸುಟ್ಟ ಗಾಯಗಳಾಗಿದ್ದವು ಎನ್ನಲಾಗಿದೆ. ಕೂಡಲೇ ಪೊಲೀಸರೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಕೋರ್ಟಿನಲ್ಲಿ ತಮ್ಮ ಜಮೀನಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದ್ದರಿಂದ, ಜಮೀನನ್ನು ತಮ್ಮ ಹೆಸರಿಗೆ ನೋಂದಣಿ ಮಾಡಲು ವಿಳಂಬವಾಗುತ್ತಿದ್ದು, ಅದಕ್ಕೆ ಕಾರಣ ತಹಶೀಲ್ದಾರ್ ವಿಜಯ ರೆಡ್ಡೀ ಎಂದು ದೂರಿ ಅವರೊಂದಿಗೆ ಕೆಲ ಹೊತ್ತು ಮಾತಿನ ಚಕಮಕಿ ನಡೆಸಿದ ರೈತ, ಅವರ ಮೇಲೆ ಪೆಟ್ರೋಲ್ ಸುರಿದು, ಅವರ ಕಚೇರಿಯಲ್ಲೇ ಸಜೀವವಾಗಿ ಹತ್ಯೆ ಮಾಡಿದ್ದ.