ಸಿಕಂದರಾಬಾದ್ ಹಿಂಸಾಚಾರದ ಹಿಂದಿನ ಮಾಸ್ಟರ್ಮೈಂಡ್ ಒಬ್ಬ ಮಾಜಿ ಯೋಧ
ಹೈದರಾಬಾದ್, ಜೂನ್ 19: ಅಗ್ನಿಪಥ್ ಯೋಜನೆ ವಿರುದ್ಧ ಭುಗಿಲೆದ್ದ ಆಕ್ರೋಶದಲ್ಲಿ ಪ್ರತಿಭಟನಾಕಾರರು ಸಿಕಂದರಾಬಾದ್ನಲ್ಲಿ ಎಸಗಿದ್ದ ವಿದ್ವಂಸಕ ಕೃತ್ಯದ ಮಾಸ್ಟರ್ ಮೈಂಡ್ ಎಂದು ಭಾವಿಸಲಾಗಿರುವ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಗ್ನಿಪಥ್ ಯೋಜನೆ ವಿರುದ್ಧದ ಪ್ರತಿಭಟನೆ ವೇಳೆ ಸಿಕಂದರಾಬಾದ್ ರೈಲ್ವೆ ನಿಲ್ದಾಣಗಳಲ್ಲಿ ಸಂಭವಿಸಿದ ಹಿಂಸಾಚಾರ ಘಟನೆ ಸಂಬಂಧ ಪೊಲೀಸರು ಅವುಲ ಸುಬ್ಬಾ ರಾವ್ ಎಂಬುವರನ್ನು ಬಂಧಿಸಿದ್ದಾರೆ. ರೈಲ್ವೆ ಪೊಲೀಸರ ಪ್ರಕಾರ ಅವುಲ ಸುಬ್ಬಾ ರಾವ್ ಹಾಗು ಅವರು ನಡೆಸುತ್ತಿದ್ದ ಕೋಚಿಂಗ್ ಅಕಾಡೆಮಿಯು ಯುವಕರಿಗೆ ಹಿಂಸಾಚಾರ ನಡೆಸಲು ಪ್ರಚೋದನೆ ನೀಡಿತೆನ್ನಲಾಗಿದೆ. ಸಿಕಂದರಾಬಾದ್ ಹಿಂಸಾಚಾರ ಘಟನೆಯ ಮಾಸ್ಟರ್ ಮೈಂಡ್ ಇದೇ ಅವುಲ ಸುಬ್ಬಾರಾವ್ ಎಂದು ರೈಲ್ವೆ ಪೊಲೀಸರು ಆರೋಪಿಸಿದ್ಧಾರೆ.
ಆರ್ಎಸ್ಎಸ್ ಯುವಕರನ್ನು ಸೇನೆಗೆ ತುಂಬುವ ಹುನ್ನಾರವೇ 'ಅಗ್ನಿಪಥ್' : ಎಚ್.ಡಿ.ಕುಮಾರಸ್ವಾಮಿ
ಇವರ ಕೋಚಿಂಗ್ ಅಕಾಡೆಮಿಯಲ್ಲಿ ಕಲಿಯುವ ಹಲವು ಯುವಕರು ಸಿಕಂದರಾಬಾದ್ ರೈಲ್ವೆ ನಿಲ್ದಾಣದ ಬಳಿ ಶುಕ್ರವಾರ ನಡೆದ ಗಲಭೆಯಲ್ಲಿ ಪಾಲ್ಗೊಂಡಿದ್ದಾರೆ. ಇವರಿಗೆಲ್ಲಾ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದು ಸುಬ್ಬಾರಾವ್ ಎಂದು ಆರೋಪಿಸಲಾಗುತ್ತಿದೆ. ಅವುಲಾ ಸುಬ್ಬಾರಾವ್ ಒಬ್ಬ ನಿವೃತ್ತ ಸೇನಾ ಯೋಧರಾಗಿದ್ದಾರೆ. ಆಂಧ್ರ, ತೆಲಂಗಾಣದ ಹಲವು ಕಡೆ ಇವರ ಮಿಲಿಟರಿ ಕೋಚಿಂಗ್ ಸೆಂಟರ್ಗಳಿವೆ. ಇವರನ್ನು ಬಂಧಿಸಲಾಗಿದ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಅಗ್ನಿಪಥ್ ಹಿಂಸಾಚಾರ: ಸಿಎಂ ಯೋಗಿಗೆ ಓವೈಸಿ 'ಬುಲ್ಡೋಜರ್' ಪ್ರಶ್ನೆ
ಡಿಫೆನ್ಸ್ ಅಕಾಡೆಮಿ ರೂವಾರಿ
ಅವುಲ ಸುಬ್ಬಾರಾವ್ ಮಾಜಿ ಸೇನಾ ಯೋಧರಾಗಿದ್ದಾರೆ. ಆಂಧ್ರದ ಪಲನಾಡು ಜಿಲ್ಲೆಯ ನರಸರಪೇಟಾ ಪ್ರದೇಶದವರಾದ ಅವುಲ ಸುಬ್ಬಾರಾವ್ 18 ವರ್ಷ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಿಎಸ್ಸಿ ಮತ್ತು ಬಿಇಡಿ ಪದವಿಗಳನ್ನು ಗಳಿಸಿರುವ ಅವರು 2010ರಲ್ಲಿ ಎಎಸ್ಆರ್ ಸಾಯಿ ಶಿಕ್ಷಣ ಸಂಸ್ಥೆಗಳು ಮತ್ತು ಡಿಫೆನ್ಸ್ ಅಕಾಡೆಮಿಯನ್ನು ಪ್ರಾರಂಭಿಸಿದ್ದಾರೆ. ಇವರ ಅಕಾಡೆಮಿಯಿಂದ ಪ್ರತೀ ವರ್ಷ ನೂರಾರು ಯುವಕರು ವಿವಿಧ ಭದ್ರತಾ ಪಡೆಗಳಿಗೆ ಸೇರ್ಪಡೆಯುತ್ತಿರುತ್ತಾರೆ. ಆಂಧ್ರ, ತೆಲಂಗಾಣ ಮಾತ್ರವಲ್ಲದೇ ಕರ್ನಾಟಕ, ಒಡಿಶಾ ಮತ್ತು ತಮಿಳುನಾಡು ರಾಜ್ಯಗಳಿಂದಲೂ ಸೇನಾ ಉದ್ಯೋಗಾಕಾಂಕ್ಷಿಗಳು ಇವರ ಅಕಾಡೆಮಿಗೆ ಸೇರುತ್ತಾರೆ.
ಓದಿನ ಜೊತೆಗೆ ದೈಹಿಕ ಕ್ಷಮತೆಯ ತರಬೇತಿ
ಇವರ ಕೋಚಿಂಗ್ ಅಕಾಡೆಮಿಯ ಹೆಸರಾದ ಎಎಸ್ಆರ್ ಎಂದರೆ ಅವುಲ ಸುಬ್ಬಾರಾವ್ ಎಂದು. ತಮ್ಮ ಹುಟ್ಟೂರಿರುವ ಪಲನಾಡು ಜಿಲ್ಲೆಯಲ್ಲಿ ಮೊದಲು ಇವರು ಕೋಚಿಂಗ್ ಸೆಂಟರ್ ಆರಂಭಿಸುತ್ತಾರೆ. ನಂತರ ಆಂಧ್ರ ಮತ್ತು ತೆಲಂಗಾಣದ ಒಂಬತ್ತು ಕಡೆ ಇವರ ಕೋಚಿಂಗ್ ಅಕಾಡೆಮಿಗಳು ವಿಸ್ತರಣೆಯಾಗುತ್ತವೆ.
ಇವರ ಕೋಚಿಂಗ್ ಅಕಾಡೆಮಿಯ ಶಿಕ್ಷಣ ಸ್ವರೂಪ ಎಲ್ಲವನ್ನೂ ಇವರೇ ಸಿದ್ಧಪಡಿಸಿದ್ದು. ನಿವೃತ್ತ ಸೈನಿಕರಿಂದ ಈ ಅಕಾಡೆಮಿಯ ಶಿಕ್ಷಾರ್ಥಿಗಳಿಗೆ ದೈಹಿಕ ಕ್ಷಮತೆಯ ತರಬೇತಿಯನ್ನೂ ಕೊಡಿಸಲಾಗುತ್ತದೆ. ಹೀಗಾಗಿ, ಯುವಕರು ಈ ಅಕಾಡೆಮಿ ಸೇರಲು ಮುಗಿಬೀಳುತ್ತಾರೆ.
ಯುವಕರಿಗೆ ಹಿಂಸಾಚಾರಕ್ಕೆ ಪ್ರಚೋದನೆ
ಆಂಧ್ರ ಪೊಲೀಸರು ಶುಕ್ರವಾರ ಅವುಲ ಸುಬ್ಬಾರಾವ್ ಅವರನ್ನು ಬಂಧಿಸಿದ್ದಾರೆ. ಅವರ ಮೊಬೈಲ್ ಫೋನ್ ಅನ್ನು ಜಫ್ತಿ ಮಾಡಿಕೊಳ್ಳಲಾಗಿದೆ. ಸಿಕಂದರಾಬಾದ್ ಪ್ರತಿಭಟನೆಗೆ ಪ್ರಚೋದನೆಗೆ ಕರೆಕೊಡಲಾಗಿದ್ದ ವಾಟ್ಸಾಪ್ ಗ್ರೂಪ್ಗಳನ್ನು ಇದೇ ಫೋನ್ನಿಂದ ಶುರು ಮಾಡಲಾಗಿರಬಹುದು ಎಂಬುದು ಪೊಲೀಸರ ಸಂದೇಹ. ಸದ್ಯ ಅವರು ವಿಚಾರಣೆ ನಡೆಸುತ್ತಿದ್ದಾರೆ.
"ರೈಲ್ವೆ ನಿಲ್ದಾಣಕ್ಕೆ ಪೆಟ್ರೋಲ್, ಕಬ್ಬಿಣದ ರಾಡ್ ಮತ್ತು ದೊಣ್ಣೆಗಳನ್ನು ತೆಗೆದುಕೊಂಡು ಹೋಗುವಂತೆ ಅವುಲ ಸುಬ್ಬಾರಾವ್ ಅವರೇ ನಿರ್ದೇಶನ ನೀಡಿದ್ದರು. ತೆಲಂಗಾಣದ ವಿವಿಧ ಸ್ಥಳಗಳಲ್ಲಿ ಯುವಕರನ್ನು ಸೇರಿಸಿ ಸಿಕಂದರಾಬಾದ್ಗೆ ಪ್ರತಿಭಟನೆಗೆ ಕಳುಹಿಸಿದ್ದು ಇವರೆಯೇ" ಎಂದು ತೆಲಂಗಾಣ ರೈಲ್ವೆ ಎಡಿಜಿಪಿ ಸಂದೀಪ್ ಶಾಂಡಿಲ್ಯ ಹೇಳಿದ್ದಾರೆ.
ಸುಬ್ಬಾರಾವ್ ಬಿಡುಗಡೆ ಮಾಡಿದ ವಿಡಿಯೋ
ಕೇಂದ್ರ ಸರಕಾರ ಅಗ್ನಿಪಥ್ ಯೋಜನೆಯನ್ನು ಘೋಷಣೆ ಮಾಡಿದ ದಿನ ಅವುಲ ಸುಬ್ಬಾರಾವ್ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಬಿಡುಗಡೆ ಮಾಡಿದ್ದರು. ಸರಕಾರ ನಿಯಮಿತವಾಗಿ ಮಾಡುವ ನೇಮಕಾತಿ ಪ್ರಕ್ರಿಯೆ ನಿಲ್ಲಿಸಬಹುದು ಎಂದು ಆ ವಿಡಿಯೋದಲ್ಲಿ ಆತಂಕ ತೋರ್ಪಡಿಸಿದ ಅವರು, ಸೇನಾ ನೇಮಕಾತಿಗೆ ನಡೆಯುವ ಲಿಖಿತ ಪರೀಕ್ಷೆ ನಿಂತಂತೆಯೇ ಎಂದಿದ್ದರು.
ದೊಡ್ಡ ಮೊತ್ತದ ಹಣ ತೆತ್ತು ಇವರ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಶಿಕ್ಷಾರ್ಥಿಗಳು ಆಗ ಸೇನಾ ನೇಮಕಾತಿಯಲ್ಲಿ ತಮಗೆ ಅವಕಾಶ ಕೈತಪ್ಪಬಹುದು ಎಂದು ವ್ಯಾಕುಲಗೊಂಡರು. ರಾವ್ ಮತ್ತಿತರರು ರಚಿಸಿದ ವಾಟ್ಸಾಪ್ ಗ್ರೂಪ್ಗಳಲ್ಲಿ ಇವರೆಲ್ಲರೂ ಪ್ರಚೋದನಾಕಾರಿ ಮತ್ತು ನಿಂದನಕಾರಿ ಸಂದೇಶಗಳನ್ನು ಕಳುಹಿಸಲು ಆರಂಭಿಸಿದರೆನ್ನಲಾಗಿದೆ.
ಪೊಲೀಸರ ಪ್ರಕಾರ ಗುಂಟೂರಿನಲ್ಲಿದ್ದ ಸುಬ್ಬಾರಾವ್ ಗುರುವಾರ (ಜೂನ್ 16) ಸಂಜೆಯೇ ಹೈದರಾಬಾದ್ಗೆ ಬಂದಿದ್ದರು. ಅಲ್ಲಿ ಪ್ರತಿಭಟನೆಗಳಿಗೆ ಯುವಕರನ್ನು ಸೇರಿಸುವ ಕೆಲಸ ಮಾಡಿರುವ ಶಂಕೆ ಇದೆ.
ಸದ್ಯ ರೈಲ್ವೆ ನಿಲ್ದಾಣದಲ್ಲಿ ರೈಲು ಬೋಗಿಗಳಿಗೆ ಬೆಂಕಿಹಚ್ಚಲು ಪೆಟ್ರೋಲ್ ತಂದಿದ್ದ ಐವರು ಯುವಕರನ್ನು ರೈಲ್ವೆ ಪೊಲೀಸರು ಗುರುತಿಸಿದ್ದಾರೆ. ರೈಲ್ವೆ ನಿಲ್ದಾಣದಲ್ಲಿದ್ದ ಸಿಸಿಟಿವಿ ದೃಶ್ಯದ ಆಧಾರದಲ್ಲಿ ಇತರ 34 ಪ್ರತಿಭಟನಾಕಾರರ ಗುರುತು ಪತ್ತೆಹಚ್ಚಲಾಗಿರುವುದು ತಿಳಿದುಬಂದಿದೆ. ಕೆಲ ವರದಿಗಳ ಪ್ರಕಾರ, ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿನ ಗಲಭೆ ಘಟನೆಯ ತನಿಖೆಯನ್ನು ಹೈದರಾಬಾದ್ ನಗರ ಪೊಲೀಸರಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
(ಒನ್ಇಂಡಿಯಾ ಸುದ್ದಿ)