ಇಡಿ ದಾಳಿ: ತೆಲಂಗಾಣ ಮಾಜಿ ಸಚಿವರ ಅಳಿಯ ಮನೆಯಲ್ಲಿ ಕೋಟಿ ಕೋಟಿ!
ಹೈದ್ರಾಬಾದ್, ಏಪ್ರಿಲ್ 11: ತೆಲಂಗಾಣದ ಏಳು ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ಗಳಿಕೆ ಆರೋಪ ಹಿನ್ನೆಲೆ ರಾಜ್ಯದ ಮಾಜಿ ಗೃಹ ಸಚಿವ ನಯಿನಿ ಎನ್ ರೆಡ್ಡಿ ಅಳಿಯ ಶ್ರೀನಿವಾಸ್ ರೆಡ್ಡಿ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.
ತೆಲಂಗಾಣದಲ್ಲಿ ಎರಡು ವರ್ಷಗಳ ಹಿಂದೆ ಟಿಎಸ್ ವೈದ್ಯಕೀಯ ವಿಮಾ ಸೇವೆ ಮತ್ತು ನೌಕರರ ರಾಜ್ಯ ವಿಮಾ ನಿಗಮದಡಿ ಕೋಟ್ಯಂತರ ರೂಪಾಯಿ ಅಕ್ರಮ ಎಸಗಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ತಮಿಳುನಾಡು; ಎಐಎಡಿಎಂಕೆ ಶಾಸಕರ ಚಾಲಕನೂ ಕೋಟ್ಯಧಿಪತಿ!
ಶ್ರೀನಿವಾಸ್ ರೆಡ್ಡಿ ನಿವಾಸ ಹಾಗೂ ಅವರ ಸಹಾಯಕರ ನಿವಾಸದಲ್ಲಿ ಪರಿಶೀಲನೆ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 3 ಕೋಟಿ ನಗದು, 1 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬ್ಯಾಂಕ್ ಚೆಕ್, ಆಸ್ತಿ ಪತ್ರಗಳು ಮತ್ತು ಡಿಜಿಟಿಲ್ ಡಿವೈಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತೆಲಂಗಾಣದಲ್ಲಿ ಇಡಿ ಅಧಿಕಾರಿಗಳ ದಾಳಿ:
ರಾಜ್ಯ ನೌಕರರ ವಿಮಾ ನಿಗಮಕ್ಕೆ ಸಂಬಂಧಿಸಿದ ಹಗರಣದಲ್ಲಿ ತೆಲಂಗಾಣದ ಮಾಜಿ ಗೃಹ ಸಚಿವ ನಯಿನಿ ನರಸಿಂಹ ರೆಡ್ಡಿ ಅಳಿಯ ಶ್ರೀನಿವಾಸ್ ರೆಡ್ಡಿ, ಮುಕುಂದ್ ರೆಡ್ಡಿ, ಮಾಜಿ ಸಚಿವ ನಯಿನಿ ರೆಡ್ಡಿ ಅವರ ಮಾಜಿ ಪಿಎಸ್ ದೇವಿಕಾ ರಾಣಿ, ಐಎಸ್ಐಸಿ ಮಾಜಿ ನಿರ್ದೇಶಕ ಸೇರಿದಂತೆ ಏಳು ಮಂದಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದರು.