ಜ್ಞಾನ ಸರಸ್ವತಿ ದೇವಿ ವಿಗ್ರಹದಲ್ಲಿನ ಕಿರೀಟದಿಂದ ಪಚ್ಚೆ ನಾಪತ್ತೆ
ಹೈದರಾಬಾದ್ (ತೆಲಂಗಾಣ), ಮೇ 6: ಅದಿಲಾಬಾದ್ ಜಿಲ್ಲೆಯಲ್ಲಿ ಇರುವ ಜ್ಞಾನ ಸರಸ್ವತಿ ದೇಗುಲದಲ್ಲಿ ಮುಖ್ಯ ದೇವತೆ ಕಿರೀಟದಲ್ಲಿನ ಪಚ್ಚೆ ನಾಪತ್ತೆಯಾಗಿದ್ದು, ಈ ಬಗ್ಗೆ ತೆಲಂಗಾಣ ರಾಜ್ಯ ಸರಕಾರವು ಸೋಮವಾರ ತನಿಖೆಗೆ ಆದೇಶ ನೀಡಿದೆ. ದೇವಾಲಯದ ಅರ್ಚಕರು ಗರ್ಭಗುಡಿಯನ್ನು ಪ್ರವೇಶಿಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ.
ದೇವತೆಗೆ ಹಾಕಿದ್ದ ಕಿರೀಟದಲ್ಲಿನ ಪಚ್ಚೆ ನಾಪತ್ತೆ ಆಗಿದೆ ಎಂಬುದು ಗಮನಕ್ಕೆ ಬಂದಿದೆ. ಆರಂಭದಲ್ಲಿ, ಪಚ್ಚೆ ಕಲ್ಲು ಕಿರೀಟದಿಂದ ಬಿದ್ದಿರಬೇಕು ಎಂದುಕೊಂಡಿದ್ದಾರೆ. ಆ ಮೇಲೆ ಎಷ್ಟೇ ಹುಡುಕಾಡಿದರೂ ಪತ್ತೆ ಆಗಿಲ್ಲ. ಕೆಲ ಭಕ್ತರು ಕಿರೀಟದಲ್ಲಿನ ಪಚ್ಚೆ ನಾಪತ್ತೆ ಆಗಿದೆ ಎಂದು ದೇವಾಲಯದ ಆಡಳಿತ ಮಂಡಳಿಯವರ ಗಮನಕ್ಕೆ ತಂದಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ದೇವಾಲಯದ ಗರ್ಭಗುಡಿಯಲ್ಲಿ ಸುರಕ್ಷತೆ ಇಲ್ಲದ ಬಗ್ಗೆ ಆತಂಕ ಕೂಡ ವ್ಯಕ್ತಪಡಿಸಿದ್ದಾರೆ. ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಸಂಧ್ಯಾರಾಣಿ ಮಾತನಾಡಿ, ಈ ಕಿರೀಟವನ್ನು ಹದಿಮೂರು ವರ್ಷಗಳ ಹಿಂದೆ ಹೈದರಾಬಾದ್ ನ ದಾನಿಗಳು ನೀಡಿದ್ದರು. ಅದರಲ್ಲಿ ನವರತ್ನಗಳನ್ನು ಹಾಕಲಾಗಿತ್ತು. ಈಗ ನಾಪತ್ತೆ ಆಗಿರುವ ರತ್ನ ಅಂಥ ದುಬಾರಿಯಲ್ಲ. ಆದರೂ ಒಂದು ರತ್ನ ಕಳೆದಿರುವುದು ಎಚ್ಚರಿಕೆ. ದೇವಾಲಯದ ಸುರಕ್ಷತೆಗೆ ಹಾಗೂ ಭದ್ರತೆಗೆ ಎಲ್ಲ ಕ್ರಮ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.
ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ಸಚಿವ ಇಂದ್ರಕರಣ್ ರೆಡ್ದಿ ಆದೇಶ ನೀಡಿದ್ದಾರೆ. ಈ ಬಗ್ಗೆ ಸಮಗ್ರ ವರದಿ ನೀಡಬೇಕು ಹಾಗೂ ಈ ಘಟನೆಗೆ ಜವಾಬ್ದಾರಿ ಯಾರೋ ಆ ವ್ಯಕ್ತಿ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಕಳೆದ ವರ್ಷ ಈ ದೇವಾಲಯ ವಿವಾದಕ್ಕೆ ಕಾರಣವಾಗಿತ್ತು. ನಲಗೊಂಡದ ಶಾಲೆಯೊಂದಕ್ಕೆ ಅಕ್ಷರಾಬ್ಯಾಸಕ್ಕಾಗಿ ದೇವಿಯ ವಿಗ್ರಹವನ್ನು ತೆಗೆದುಕೊಂಡು ಹೋಗಿದ್ದ ಆರೋಪ ಇತ್ತು. ವಿಗ್ರಹ ನಾಪತ್ತೆ ಅಗಿದ್ದಕ್ಕೆ ಅದನ್ನು ಹೊರಸಾಗಿಸಲು ಅರ್ಚಕರು ನೆರವಾಗಿದ್ದಾರೆ ಎಂಬ ಆರೋಪ ಬಂದಿತ್ತು. ಈ ಘಟನೆಗೆ ಕಾರಣರಾದ ಅರ್ಚಕರನ್ನು ಅಮಾನತು ಮಾಡಲಾಗಿತ್ತು.
ಶಿರಸಿಯಲ್ಲಿ ದೇವಾಲಯದ ಗೋಡೆ ಧ್ವಂಸಗೊಳಿಸಿ ಕಳಶ ಕದ್ದೊಯ್ದ ಕಿಡಿಗೇಡಿಗಳು
ಬಸಾರ್ ನಲ್ಲಿರುವ ಜ್ಞಾನ ಸರಸ್ವತಿ ದೇಗುಲ ಗೋದಾವರಿ ನದಿ ದಂಡೆಯಲ್ಲಿದ್ದು, ಇಲ್ಲಿ ಅಕ್ಷರಾಭ್ಯಾಸ ಮಾಡಿಸುವುದು ಬಹಳ ಶ್ರೇಷ್ಠ ಎಂಬ ನಂಬಿಕೆ ಇದೆ. ಈ ದೇವಾಲಯಕ್ಕೆ ವಾರ್ಷಿಕ ಮೂರರಿಂದ ಹತ್ತು ಕೋಟಿ ಆದಾಯ ಇದೆ. ಹತ್ತು ಲಕ್ಷಕ್ಕೂ ಅಧಿಕ ಭಕ್ತರು ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುತ್ತಾರೆ. ಇದರಲ್ಲಿ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯದ ಭಕ್ತರೂ ಬರುತ್ತಾರೆ.