ಜಗನ್ ಪರ ಚುನಾವಣೆ ತಂತ್ರ ಹೆಣೆಯಲು ಪ್ರಶಾಂತ್ ಕಿಶೋರ್ ದಕ್ಷಿಣಕ್ಕೆ
ಹೈದರಾಬಾದ್, ಜುಲೈ 6: ಪ್ರಶಾಂತ್ ಕಿಶೋರ್- ಈ ಹೆಸರು ಬಹಳ ಖ್ಯಾತಿಗೆ ಬಂದಿದೆ. ಅದರಲ್ಲೂ ಚುನಾವಣಾ ರಣತಂತ್ರ ರೂಪಿಸುವುದರಲ್ಲಿ ಈತ ಮಹಾನ್ ಚಾಣಾಕ್ಷ ಎಂಬುದು ಜಗಜ್ಜಾಹೀರು. ಇದೀಗ ಪ್ರಶಾಂತ್ ದಕ್ಷಿಣಕ್ಕೆ ಬಂದಿದ್ದಾರೆ. ಆಂಧ್ರದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ ಪರವಾಗಿ ಕೆಲಸ ಮಾಡಲಿದ್ದಾರೆ.
ಅಂದಹಾಗೆ ಆಂಧ್ರ ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷಗಳ ಸಮಯವಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ನರೇಂದ್ರ ಮೋದಿ ಪರ ರಣತಂತ್ರ ರೂಪಿಸಿದ್ದ ಪ್ರಶಾಂತ್ ಕಿಶೋರ್, ಬಹಳ ಪ್ರಚಾರಕ್ಕೆ ಬಂದರು. ಆ ನಂತರ ಮೋದಿ ಅವರ ರಾಜಕೀಯ ಪ್ರತಿಸ್ಪರ್ಧಿ ಎನಿಸಿದ್ದ ನಿತೀಶ್ ಕುಮಾರ್ ಪರವಾಗಿ ಬಿಹಾರ ಚುನಾವಣೆಗೆ ಕೆಲಸ ಮಾಡಿದರು.
ರಾಜಕೀಯದ ಆಧುನಿಕ 'ಚಾಣಕ್ಯ'ನ ಬೆನ್ನೇರಿದ ಸೋನಿಯಾ ಪಡೆ
ಅಲ್ಲಿ ನಿತೀಶ್ ಮೂರನೇ ಅವಧಿಗೆ ಮರು ಆಯ್ಕೆಯಾದರು. ಆ ನಂತರ ಉತ್ತರಪ್ರದೇಶ ಚುನಾವಣೆ ವೇಳೆ ಪ್ರಶಾಂತ್ ಗೆ ಸಚಿವ ಸ್ಥಾನ ಮಾನ ಕೊಟ್ಟು, ಕಾಂಗ್ರೆಸ್ ಜತೆಗೆ ಸೇರಿ ಕೆಲಸ ಮಾಡುವುದಕ್ಕೆ ನೇಮಿಸಿಕೊಳ್ಳಲಾಯಿತು. ಅಲ್ಲಿ ಅಖಿಲೇಶ್ ಜತೆಗೆ ಕಾಂಗ್ರೆಸ್ ಮೈತ್ರಿ ಮಾಡಿಸಲು ಶ್ರಮ ವಹಿಸಿದ್ದು ಇದೇ ಕಿಶೋರ್.
ಆದರೆ, ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರದಲ್ಲಿ ಬಿಜೆಪಿ ಗೆಲುವಿನ ಅಲೆಯಲ್ಲಿ ತೇಲಿತು. ಇನ್ನು ಪಂಜಾಬ್ ನಲ್ಲಿ ಕಾಂಗ್ರೆಸ್ ಯಶಸ್ಸಿನ ಹಿಂದೆ ಇದ್ದದ್ದು ಪ್ರಶಾಂತ್ ಕಿಶೋರ್.
ಪ್ರಶಾಂತ್ ಕಿಶೋರ್ ವಿರುದ್ಧ ಸೇಡು ತೀರಿಸಿಕೊಂಡ ಅಮಿತ್ ಶಾ
ಜಗನ್ ಮೋಹನ್ ರೆಡ್ಡಿ ಬುಧವಾರ ಹೈದರಾಬಾದ್ ನಲ್ಲಿ ತಮ್ಮ ಪಕ್ಷದವರಿಗೆ ಕಿಶೋರ್ ನ ಪರಿಚಯ ಮಾಡಿಸಿದ್ದಾರೆ. ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಹಾಗೂ ಅಧ್ಯಕ್ಷ ಆಗಿರುವ ರೆಡ್ಡಿ ತಮ್ಮ ಪಕ್ಷದ ಪರ ಕಾರ್ಯ ನಿರ್ವಹಿಸಲು ಪ್ರಶಾಂತ್ ಕಿಶೋರ್ ನನ್ನು ನೇಮಿಸಿಕೊಂಡಿದ್ದಾರೆ.
ಪ್ರಶಾಂತ್ ಕಿಶೋರ್ ರನ್ನು ನಮ್ಮ ಕನ್ಸಲ್ಟಂಟ್ ಎಂದು ತೆಗೆದುಕೊಂಡಿದ್ದೇವೆ. ಪಕ್ಷದವರಿಗೆ ಪರಿಚಯಿಸಲಾಗಿದೆ ಎಂದು ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸಂಸದರಾದ ಪಿ ಮಿಥುನ್ ರೆಡ್ಡಿ ಹೇಳಿದ್ದಾರೆ.