ಮುಂದಿನ ಸಾರ್ವತ್ರಿಕ ಚುನಾವಣೆ ವೇಳೆ ಇ-ವೋಟಿಂಗ್ ಸೌಲಭ್ಯ?
ಹೈದರಾಬಾದ್, ಮಾರ್ಚ್ 27: ಮತ ಪತ್ರಗಳಿಂದ ಇವಿಎಂಗೆ ಪ್ರಗತಿ ಹೊಂದಿರುವ ದೇಶದ ಚುನಾವಣಾ ವ್ಯವಸ್ಥೆ ಮತ್ತೊಂದು ಹಂತಕ್ಕೆ ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ. ಅಂದುಕೊಂಡಂತೆ ನಡೆದರೆ, 2024ರ ಸಾರ್ವತ್ರಿಕ ಚುನಾವಣೆ ವೇಳೆ ಇ-ವೋಟಿಂಗ್ ಅಸ್ತಿತ್ವಕ್ಕೆ ಬರಲಿದೆ.
ದೂರದ ಪ್ರದೇಶಗಳ ಮತದಾನಕ್ಕಾಗಿ ಬ್ಲಾಕ್ಚೈನ್ ತಂತ್ರಜ್ಞಾನ ಬಳಸಿಕೊಳ್ಳುವುದರ ಬಗ್ಗೆ ಚುನಾವಣಾ ಆಯೋಗವು ಐಐಟಿ-ಮದ್ರಾಸ್ ಜತೆಗೂಡಿ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿನ 2024ರ ಲೋಕಸಬೆ ಚುನಾವಣೆ ವೇಳೆಗೆ ತಂತ್ರಜ್ಞಾನ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ತಿಳಿಸಿದ್ದಾರೆ.
ಬಿಜೆಪಿ ವಿರುದ್ಧ ಆರೋಪ: ಪುದುಚೇರಿ ವಿಧಾನಸಭೆ ಚುನಾವಣೆ ಮುಂದೂಡುವ ಬಗ್ಗೆ ಕೋರ್ಟ್ ಪ್ರಶ್ನೆ
ಹೈದರಾಬಾದ್ನ ಸರ್ದಾರ್ ವಲ್ಲಭಬಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಶುಕ್ರವಾರ ಐಪಿಎಸ್ ಪ್ರೊಬೇಷನರಿಗಳೊಂದಿಗೆ ಸಂವಾದ ನಡೆಸಿದ ಅರೋರಾ, 'ಒಂದು ದೇಶ ಒಂದು ಚುನಾವಣೆ' ಅಪೇಕ್ಷಣೀಯ. ಆದರೆ ಈಗಿರುವ ಕಾನೂನುಗಳಿಗೆ ತಿದ್ದುಪಡಿ ತರಬೇಕಿರುವುದರಿಂದ ಮತ್ತು ರಾಜಕೀಯ ಸಹಮತ ಬೇಕಿರುವುದರಿಂದ ಅದು ಕಷ್ಟಕರ ಎಂದು ಹೇಳಿದರು.
'ನಾವು ಚೆನ್ನೈನಲ್ಲಿರುವ ಐಐಟಿ-ಮದ್ರಾಸ್ ಮತ್ತು ಕೆಲವು ಪ್ರಮುಖ ವಿಜ್ಞಾನಿಗಳ ಜತೆ ಒಂದು ಯೋಜನೆ ನಡೆಸುತ್ತಿದ್ದೇವೆ. ನಾವು ಬ್ಲ್ಯಾಕ್ ಚೈನ್ ಪ್ರಾಜೆಕ್ಟ್ ಮಾಡುತ್ತಿದ್ದೇವೆ. ಇ-ಮತದಾನ ಸೇರಿದಂತೆ 2024ರ ಲೋಕಸಭೆ ಚುನಾವಣೆಯ ವೇಳೆಗೆ ನೀವು ಸಾಕಷ್ಟು ಮೂಲಭೂತ ಬದಲಾವಣೆಗಳನ್ನು ಕಾಣುತ್ತೀರಿ ಎಂದು ನಾವು ವಿಶ್ವಾಸ ಹೊಂದಿದ್ದೇವೆ' ಎಂದು ಅವರು ತಿಳಿಸಿದರು.
ದೂರ ಊರುಗಳಲ್ಲಿನ ನಾಗರಿಕರಿಗೆ ಅನುಕೂಲವಾಗುವಂತೆ ಆಪ್ ಆಧಾರಿತ ಇ-ವೋಟಿಂಗ್ ಪರಿಚಯಿಸಲು ಚುನಾವಣಾ ಆಯೋಗ ಚಿಂತನೆ ನಡೆಸಿದೆಯೇ ಎಂಬ ಪ್ರಶ್ನೆಗೆ ಸುನಿಲ್ ಅರೋರಾ ಪ್ರತಿಕ್ರಿಯಿಸಿದರು.
ತಮಿಳುನಾಡು; ಕೋಟಿ ರೂ ವಶಪಡಿಸಿಕೊಂಡ ಬೆನ್ನಲ್ಲೇ ಡಿಸಿ, ಎಸ್ಪಿ ವರ್ಗಾವಣೆ
ಚುನಾವಣಾ ಸುಧಾರಣೆಯ ಭಾಗವಾಗಿ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ಜೋಡಣೆ ಮಾಡುವ ನಿಟ್ಟಿನಲ್ಲಿ ಕೂಡ ಆಯೋಗ ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
'ಒಂದು ದೇಶ ಒಂದು ಚುನಾವಣೆ' ಜಾರಿಗೆ ತರುವುದು ಬಹುದೊಡ್ಡ ಕೆಲಸ. ಅದಕ್ಕಾಗಿ ಈಗ ಅಸ್ತಿತ್ವದಲ್ಲಿರುವ ಕಾನೂನುಗಳಲ್ಲಿ ತಿದ್ದುಪಡಿ ತರುವುದು ಅಗತ್ಯ. ಅಷ್ಟೇ ಅಲ್ಲದೆ ಇದಕ್ಕೆ ರಾಜಕೀಯ ಸಮ್ಮತಿಯ ಅಗತ್ಯವಿದೆ ಎಂದರು. 'ಅದು ಅಪೇಕ್ಷಣೀಯ ಗುರಿ. ಈಗಿರುವ ಕಾನೂನುಗಳಲ್ಲಿ ತಿದ್ದುಪಡಿ ತರುವವರೆಗೂ ಅದನ್ನು ಸಾಧಿಸುವುದು ಕಷ್ಟಕರ. ಕಾನೂನುಗಳ ತಿದ್ದುಪಡಿಯ ಮೂಲಕ ಸಂಸತ್ ಮತ್ತು ರಾಜ್ಯ ವಿಧಾನಸಭೆಗಳ ಕಾಲಾವಧಿಯನ್ನು ಸೇರಿಸಬೇಕು' ಎಂದು ತಿಳಿಸಿದರು.
ಚುನಾವಣೆ ನಡೆಯುತ್ತಿರುವ ರಾಜ್ಯಗಳ ಕುರಿತು ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಇರುವುದರಿಂದ ಚುನಾವಣಾ ಆಯೋಗವು ಪ್ರತಿ ದಿನವೂ ಅದರ ಪರಿಶೀಲನೆಗೆ ಇಬ್ಬರು ಹಿರಿಯ ಅಧಿಕಾರಿಗಳನ್ನು ಪೊಲೀಸ್ ವೀಕ್ಷಕರಾಗಿ ನೇಮಿಸಿದೆ. ಅಸ್ಸಾಂನಲ್ಲಿ ಗಡಿ ಸಮಸ್ಯೆಗಳಿವೆ ಎಂದರು.
ತಮಿಳುನಾಡು ವೆಚ್ಚದ ವಿಚಾರದಲ್ಲಿ ಸೂಕ್ಷ್ಮವಾದ ರಾಜ್ಯ. ಹೀಗಾಗಿ ಇಲ್ಲಿನ ಆಂತರಿಕ ವ್ಯವಹಾರಗಳ ಬಗ್ಗೆ ಅಪಾರ ಜ್ಞಾನವುಳ್ಳ ಹಾಗೂ ಅತ್ಯುತ್ತಮ ವೃತ್ತಿ ದಾಖಲೆಗಳನ್ನು ಹೊಂದಿರುವ ಇಬ್ಬರು ವಿಶೇಷ ವೆಚ್ಚ ವೀಕ್ಷಕರನ್ನು ಇಲ್ಲಿಗೆ ನಿಯೋಜಿಸಲಾಗಿದ್ದು, ಚುನಾವಣೆಯಲ್ಲಿ ಹಣದ ಹರಿವು ತಡೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.