ತಹಶೀಲ್ದಾರ್ ಸಜೀವ ದಹನ ಕೇಸ್, ರಕ್ಷಣೆಗೆ ಮುಂದಾಗಿದ್ದ ಡ್ರೈವರ್ ಸಾವು
ಹೈದರಾಬಾದ್, ನವೆಂಬರ್ 05: ತೆಲಂಗಾಣದಲ್ಲಿ ಸೋಮವಾರ ತಹಶೀಲ್ದಾರ್ ವಿಜಯಾ ರೆಡ್ಡಿ ಎಂಬುವವರನ್ನು ರೈತನೊಬ್ಬ ಜೀವಂತವಾಗಿ ಕೊಂದ ಘಟನೆಯಲ್ಲಿ ತಹಶೀಲ್ದಾರರನ್ನು ರಕ್ಷಿಸಲು ಪ್ರಯತ್ನಿಸಿದ್ದ ಡ್ರೈವರ್ ಗುರುನಾಥಮ್ ಅವರೂ ಮೃತರಾಗಿದ್ದಾರೆ.
ತಹಶೀಲ್ದಾರ್ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ ನಂತರ ಅವರ ಚೇಂಬರ್ ನಿಂದ ಕಿರುಚಾಟ ಕೇಳಿಸಿತ್ತು. ಕೂಡಲೇ ಅವರ ಚೇಂಬರ್ ನ ಬಾಗಿಲನ್ನು ಒಡೆದು, ಅವರನ್ನು ರಕ್ಷಿಸಲು ಡ್ರೈವರ್ ಗುರುನಾಥಮ್ ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ ಅವರೂ ಗಂಭೀರವಾಗಿ ಗಾಯಗೊಂಡಿದ್ದರು. ಶೇ.60 ರಷ್ಟು ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತರಾದರು.
ಮಹಿಳಾ ತಹಶೀಲ್ದಾರ್ ಗೆ ಕಚೇರಿಯಲ್ಲೇ ಬೆಂಕಿ, ಸ್ಥಳದಲ್ಲೇ ಸಾವು
ತೆಲಂಗಾಣದ ರಂಗಾರೆಡ್ಡಿಜಿಲ್ಲೆ ಅಬ್ದುಲ್ಲಾಪುರ ಎಂಬಲ್ಲಿ ತಮ್ಮಚೇಂಬರ್ ನಲ್ಲಿದ್ದ ವಿಜಯಾ ರೆಡ್ಡಿ ಅವರನ್ನು ರೈತನೊಬ್ಬ ಬೇಟಿಯಾಗಲು ಬಂದಿದ್ದ. ತನ್ನ ಜಮೀನಿಗೆ ಸಂಬಂಧಿಸಿದ ಪ್ರಕರಣವನ್ನು ಕೋರ್ಟಿನಲ್ಲಿದ್ದು, ಆ ಕಾರಣ ಜಮೀನು ನೋಂದಾವಣೆಗೆ ವಿಳಂಬವಾಗುತ್ತಿದೆ ಎಂದು ತಹಶೀಲ್ದಾರ್ ಬಳಿ ವಾದ ಮಾಡುತ್ತಿದ್ದ. ಈ ವಾದವೇ ವಿಪರೀತಕ್ಕೆ ತಿರುಗಿ, ನಂತರ ಅವರ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಅವರನ್ನು ಸಜೀವವಾಗಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದ. ಈ ಸಂದರ್ಭದಲ್ಲಿ ಅವರನ್ನು ರಕ್ಷಿಸಲು ಡ್ರೈವರ್ ಗುರುನಾಥಮ್ ಮತ್ತು ಇನ್ನೊಬ್ಬರು ಆಪ್ತ ಕಾರ್ಯದರ್ಶಿ ಧಾವಿಸಿದ್ದರು. ಅವರೂ ಗಂಭೀರವಾಗಿ ಗಾಯಗೊಂಡಿದ್ದರು.
ಹಯತ್ನಗರ್ ದ ಗೌರೆಲ್ಲಿ ಎಂಬಲ್ಲಿಯ ರೈತ ಸುರೇಶ್ ಎಂಬಾತನೇ ಈ ಕೃತ್ಯ ಎಸಗಿದ್ದು ದೃಢವಾಗಿದ್ದು, ಕೊಲೆ ಮಾಡಿದ ನಂತರ ಆತ ಪೊಲೀಸ್ ಸ್ಟೇಷನ್ನಿಗೆ ತೆರಳಿದ್ದ ಎನ್ನಲಾಗಿದೆ. ಆತನ ದೇಹದಲ್ಲೂ ಸುಟ್ಟ ಗಾಯಗಳಾಗಿದ್ದು, ಅವನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.