ಪಶುವೈದ್ಯೆ ಅತ್ಯಾಚಾರ: ಸಚಿವರ ಆಘಾತಕಾರಿ ಹೇಳಿಕೆ, ಪೊಲೀಸರ ವಿರುದ್ಧ ಕುಟುಂಬದ ಆರೋಪ
ನವದೆಹಲಿ, ನವೆಂಬರ್ 29: ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅವರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಹೇಯ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ ತೋಡಿಕೊಂಡಿದ್ದಾರೆ.
ಈ ನಡುವೆ ತೆಲಂಗಾಣದ ಸಚಿವರು ಶುಕ್ರವಾರ ನೀಡಿರುವ ಹೇಳಿಕೆ ಮತ್ತಷ್ಟು ಆಘಾತ ಉಂಟುಮಾಡಿದೆ. ಪಶುವೈದ್ಯೆ ತಂಗಿಗೆ ಕರೆ ಮಾಡುವ ಬದಲು ಆ ಸಮಯದಲ್ಲಿ ಪೊಲೀಸರಿಗೆ ಏಕೆ ಕರೆ ಮಾಡಲಿಲ್ಲ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಪ್ರಿಯಾಂಕಾ ರೆಡ್ಡಿ ಅತ್ಯಾಚಾರ, ಹತ್ಯೆ: ಆ ಕರಾಳ ರಾತ್ರಿ ನಡೆದಿದ್ದೇನು?
'ಈ ಘಟನೆಯಿಂದ ನಮಗೆ ದುಃಖವಾಗಿದೆ. ಪೊಲೀಸರು ಜಾಗೃತರಾಗಿದ್ದಾರೆ ಮತ್ತು ಅಪರಾಧಗಳನ್ನು ನಿಯಂತ್ರಿಸುತ್ತಿದ್ದಾರೆ. ಆದರೆ ಪ್ರಿಯಾಂಕಾ ರೆಡ್ಡಿ ತಮ್ಮ ತಂಗಿಗೆ ಕರೆ ಮಾಡಿದ್ದರೇ ಹೊರತು '100'ಕ್ಕೆ (ಪೊಲೀಸ್ ಸಹಾಯವಾಣಿ) ಕರೆ ಮಾಡದೆ ಇರುವುದು ದುರದೃಷ್ಟಕರ. ಆಕೆ '100'ಕ್ಕೆ ಕರೆ ಮಾಡಿದ್ದರೆ, ಆಕೆಯನ್ನು ಉಳಿಸಬಹುದಾಗಿತ್ತು' ಎಂದು ತೆಲಂಗಾಣದ ಗೃಹ ಸಚಿವ ಮೊಹಮ್ಮದ್ ಮಹಮೂದ್ ಅಲಿ ಹೇಳಿಕೆ ನೀಡಿದ್ದಾರೆ.
ಮೂರು ನಿಮಿಷದಲ್ಲಿ ಪೊಲೀಸರು ಬರುತ್ತಾರೆ
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಯಾರೇ 100ರ ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರೆ ಅವರು ಮೂರು ನಿಮಿಷದೊಳಗೇ ಅಲ್ಲಿಗೆ ಬರುತ್ತಾರೆ. ಆಕೆ ಒಬ್ಬ ವೈದ್ಯೆ. ಆಕೆ ಸುಶಿಕ್ಷಿತೆ. ಆಕೆ ತನ್ನ ತಂಗಿಗೆ ಏಕೆ ಮೊದಲು ಕರೆ ಮಾಡಬೇಕಿತ್ತು? ಆಕೆ ಮೊದಲು 100ಕ್ಕೆ ಕರೆ ಮಾಡಬೇಕಿತ್ತು' ಎಂದು ಹೇಳಿದರು. ಈ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಓಡಿಹೋಗಿರಬೇಕು ಎಂದ ಪೊಲೀಸರು
ಮಗಳು ಕಾಣೆಯಾಗಿದ್ದರ ಬಗ್ಗೆ ಪ್ರಿಯಾಂಕಾ ರೆಡ್ಡಿಯ ಪೋಷಕರು ರಾತ್ರಿ 10.30ರ ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ತಕ್ಷಣ ಕ್ರಮ ತೆಗೆದುಕೊಳ್ಳಲಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ದೂರು ನೀಡಿದಾಗ ಪೊಲೀಸರು ಆರಂಭದಲ್ಲಿ ನಿರ್ಲಕ್ಷಿಸಿದರು. ಮಗಳು ಇನ್ನೂ ಮನೆಗೆ ಬಾರದೆ ಇರುವುದರಿಂದ ಆಕೆ ತೊಂದರೆಯಲ್ಲಿ ಸಿಲುಕಿರಬಹುದು ಎಂದು ಆತಂಕ ಹಂಚಿಕೊಂಡೆವು. ಆದರೆ ಪೊಲೀಸ್ ಅಧಿಕಾರಿಯೊಬ್ಬರು ನಿಮ್ಮ ಮಗಳು ಯಾರದೋ ಜತೆಯಲ್ಲಿ ಓಡಿ ಹೋಗಿರಬೇಕು ಎಂದು ಹೇಳಿದ್ದಾಗಿ ಪ್ರಿಯಾಂಕಾರ ಪೋಷಕರು ಮಾಧ್ಯಮಗಳಿಗೆ ತಿಳಿಸಿದರು.
ಪಶುವೈದ್ಯೆ ಅತ್ಯಾಚಾರ, ಕೊಲೆ: 24 ಗಂಟೆಯಲ್ಲೇ ದುಷ್ಕರ್ಮಿಗಳ ಬಂಧನ
ತಮ್ಮ ವ್ಯಾಪ್ತಿಗೆ ಬರೊಲ್ಲ ಎಂದರು
ಪ್ರಿಯಾಂಕಾ ಎಲ್ಲಿಯೂ ಕಾಣಿಸದೆ ಇದ್ದಾಗ ಕುಟುಂಬದ ಸದಸ್ಯರು ಮೊದಲು ಆರ್ಜಿಐಎ ಪೊಲೀಸ್ ಠಾಣೆಗೆ ತೆರಳಿದರು. ಆದರೆ ಅವರು ಇಲ್ಲಿ ನಡೆಯುವ ಅಪರಾಧ ತಮ್ಮ ಠಾಣೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಶಮ್ಷಾಬಾದ್ ಪೊಲೀಸ್ ಠಾಣೆಗೆ ಹೋಗುವಂತೆ ಸೂಚಿಸಿದರು ಎಂದು ಆರೋಪಿಸಿದ್ದಾರೆ.
ಇಬ್ಬರು ಕಾನ್ಸ್ಟೆಬಲ್ಗಳನ್ನು ಕಳಿಸಿದರು
ಒಂದು ವೇಳೆ ಸೈಬರಾಬಾದ್ ಪೊಲೀಸರು ಕೂಡಲೇ ಕ್ರಮ ತೆಗೆದುಕೊಂಡು ಕಾರ್ಯಾಚರಣೆ ನಡೆಸಿದ್ದರೆ ಈ ಘಟನೆಯನ್ನು ತಡೆಯಲು ಸಾಧ್ಯತೆ ಇತ್ತು ಎಂದು ಕುಟುಂಬದ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಶಮ್ಷಾಬಾದ್ ಪೊಲೀಸ್ ಠಾಣೆಯಲ್ಲಿಯೂ ಸರಿಯಾದ ಸ್ಪಂದನೆ ಸಿಗಲಿಲ್ಲ. ಕೊನೆಗೆ ಇಬ್ಬರು ಕಾನ್ಸ್ಟೆಬಲ್ಗಳನ್ನು ಕುಟುಂಬದ ಸದಸ್ಯರ ಜತೆಗೆ ಕಳುಹಿಸಲಾಯಿತು. ಅವರು ಬೆಳಿಗ್ಗೆ 4 ಗಂಟೆಯವರೆಗೂ ಹುಡುಕಾಡಿದರು. ಆದರೆ ಪ್ರಿಯಾಂಕಾ ಅವರ ಸುಳಿವು ಸಿಗಲಿಲ್ಲ.
ಪಂಕ್ಚರ್ ಆಯಿತೆಂದು ಗಾಡಿ ನಿಲ್ಲಿಸಿದ ಪಶುವೈದ್ಯೆ, ಸಿಕ್ಕಿದ್ದು ಸುಟ್ಟ ಶವವಾಗಿ
ಅಕ್ಕ ಜೀವಂತವಾಗಿಯಾದರೂ ಸಿಗುತ್ತಿದ್ದಳು
'ನಾವು ಒಂದು ಪೊಲೀಸ್ ಠಾಣೆಯಿಂದ ಇನ್ನೊಂದು ಕಡೆಗೆ ಹೋಗುವುದರಲ್ಲಿಯೇ ಸಾಕಷ್ಟು ಸಮಯ ಕಳೆದುಕೊಂಡೆವು. ಪೊಲೀಸರು ಸಮಯ ವ್ಯರ್ಥ ಮಾಡದೆ ಕೂಡಲೇ ಕಾರ್ಯ ಪ್ರವೃತ್ತರಾಗಿದ್ದರೆ ನನ್ನ ಅಕ್ಕ ಕಡೇಪಕ್ಷ ಜೀವಂತವಾಗಿಯಾದರೂ ಸಿಗುತ್ತಿದ್ದಳು' ಎಂದು ತಂಗಿ ಭವ್ಯಾ ಗದ್ಗದಿತರಾಗಿ ಹೇಳಿದರು.