ಮೋದಿ ಸರ್ಕಾರಕ್ಕೆ ಜ.26ರವರೆಗೆ ಗಡುವು: MSPಗಾಗಿ ಒತ್ತಾಯ
ನವದೆಹಲಿ ನವೆಂಬರ್ 26: ದೆಹಲಿ ಗಡಿ ಭಾಗದಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು, ಬೇಡಿಕೆ ಈಡೇರಿಕೆಗಾಗಿ ಕೇಂದ್ರ ಸರ್ಕಾರಕ್ಕೆ ರೈತರು ಗಡುವು ಕೊಟ್ಟಿದ್ದಾರೆ. ಸಂಸತ್ತಿನ ಅಧಿವೇಶನ ನಡೆಯುವವರೆಗೂ ಸರ್ಕಾರಕ್ಕೆ ಯೋಚಿಸಲು ಮತ್ತು ಅರ್ಥಮಾಡಿಕೊಳ್ಳಲು ಸಮಯವಿದೆ. ಕೇಂದ್ರ ಸರ್ಕಾರಕ್ಕೆ ಜನವರಿ 26 ರವರೆಗೆ ಬೇಡಿಕೆ ಈಡೇರಿಕೆಗೆ ಸಮಯ ನೀಡಿದ್ದೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಕುರಿತು ಹೇಳಿಕೆ ನೀಡಿದ್ದಾರೆ. ಸಂಸತ್ತಿನ ಅಧಿವೇಶನ ನಡೆಯುವವರೆಗೂ ಸರ್ಕಾರಕ್ಕೆ ಯೋಚಿಸಲು ಮತ್ತು ಅರ್ಥಮಾಡಿಕೊಳ್ಳಲು ಸಮಯವಿದೆ. ಸಂಸತ್ತಿಗೆ ಚಾಲನೆ ನೀಡಿದ ನಂತರ ಚಳವಳಿಯನ್ನು ಹೇಗೆ ಮುಂದುವರಿಸಬೇಕು ಎಂಬುದರ ಕುರಿತು ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ನಮ್ಮ ಆಂದೋಲನದ ರೂಪುರೇಷೆ ಏನೆಂಬುದನ್ನು ನವೆಂಬರ್ 27 ರಂದು ನಡೆಯಲಿರುವ ಯುನೈಟೆಡ್ ಕಿಸಾನ್ ಮೋರ್ಚಾ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಗಾಜಿಪುರ ಗಡಿಯಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು.
ಮಾತನಾಡಿದ ಟಿಕಾಯತ್ ಅವರು, "ಸರ್ಕಾರ ವಿವಾದಿತ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ. ಆದರೆ ಅವು ನಮ್ಮ ಪರಿಹಾರವಲ್ಲ. ದೇಶದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಲವಾರು ಇವೆ. ಕೇಂದ್ರ ಸರ್ಕಾರವು ರೈತರೊಂದಿಗೆ ಮಾತುಕತೆ ನಡೆಸಿ ಎಂಎಸ್ಪಿ ಕುರಿತು ಕಾನೂನು ತರುವವರೆಗೆ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ" ಎಂದು ಹೇಳಿದರು.
"ರೈತ ಚಳವಳಿಗಾರರ ಪರವಾಗಿ ನಾವು ಸರ್ಕಾರದ ಮುಂದೆ ಬೇಡಿಕೆಗಳನ್ನು ಇಟ್ಟಿದ್ದೇವೆ. ಆ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ನಾವು ಜನವರಿ 26 ರವರೆಗೆ ಸಮಯ ನೀಡಿದ್ದೇವೆ. ನಮ್ಮ ಸ್ಥಳವನ್ನು ಖಾಲಿ ಮಾಡುವುದಿಲ್ಲ. ನವೆಂಬರ್ 29 ರಂದು ನಾವು ಮೆರವಣಿಗೆ ಮಾಡುತ್ತೇವೆ. ರೈತ ಸಹೋದರರೊಂದಿಗೆ 60 ಟ್ರ್ಯಾಕ್ಟರ್ಗಳೊಂದಿಗೆ ಸಂಸತ್ ಭವನದ ಕಡೆಗೆ ಮೆರವಣೆಗೆ ಹೋಗಲಿದೆ" ಎಂದರು. ರೈತ ಸಂಘಟನೆಗಳ 'ಭಾರತ್ ಬಂದ್' ಯಶಸ್ವಿಯಾಗಿದೆ. ನಮಗೆ ರೈತರ ಸಂಪೂರ್ಣ ಬೆಂಬಲ ಸಿಕ್ಕಿದೆ ಎಂದರು. ಸರ್ಕಾರ ಮಾತನಾಡಲಿ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧರಿದ್ದೇವೆ, ಆದರೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ಟಿಕಾಯತ್ ದೂರಿದ್ದಾರೆ.
ಎಂಎಸ್ಪಿ ಏಕೆ ಅಗತ್ಯ ಮತ್ತು ಎಂಎಸ್ಪಿ ಲೆಕ್ಕಾಚಾರ ಹೇಗಿರಬೇಕು ಎಂಬುದನ್ನು ವಿವರಿಸುವ ಬರಹವನ್ನು ಸಂಯುಕ್ತ ಕಿಸಾನ್ ಮೋರ್ಚಾ ಬುಧವಾರ ಬಿಡುಗಡೆ ಮಾಡಿದೆ. ಕೃಷಿ ಕಾಯ್ದೆಗಳನ್ನು ತೆಗೆದುಹಾಕಲು, ಮಸೂದೆ ಮಂಡಿಸಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದ ದಿನವೇ ಕಿಸಾನ್ ಸಂಯುಕ್ತ ಮೋರ್ಚಾ ಎಂಎಸ್ಪಿಯ ಅಗತ್ಯವನ್ನು ಪ್ರತಿಪಾದಿಸಿದೆ. 'ಈ ಪ್ರತಿಭಟನೆ ಕೊನೆಯಾಗಿಲ್ಲ. ಮುಂದೆ ಏನು ಮಾಡಬೇಕು ಎಂಬುನ್ನು ನಿರ್ಧರಿಸಲು ನಾವು ಇದೇ 27ಕ್ಕೆ ಸಭೆ ನಡೆಸಲಿದ್ದೇವೆ' ಎಂದು ಭಾರತೀಯ ಕಿಸಾನ್ ಯೂನಿಯನ್ನ ನಾಯಕ ರಾಕೇಶ್ ಟಿಕಾಯತ್ ಬುಧವಾರ ಟ್ವೀಟ್ ಮಾಡಿದ್ದಾರೆ.
'ಕೃಷಿ ವೆಚ್ಚ ಮತ್ತು ಬೆಲೆ ಆಯೋಗವು (ಸಿಎಸಿಪಿ) ಎಲ್ಲಾ ಬೆಳೆಗಳಿಗೆ ರೈತ ಮಾಡಿದ ವೆಚ್ಚ ಮತ್ತು ಕುಟುಂಬದ ಸದಸ್ಯರ ದುಡಿಮೆಯನ್ನು ಸೇರಿಸಿ ಎಂಎಸ್ಪಿ ನಿಗದಿ ಮಾಡುತ್ತದೆ. ಆದರೆ ಸ್ವಾಮಿನಾಥನ್ ಆಯೋಗದ ವರದಿಯಲ್ಲಿ ಶಿಫಾರಸು ಮಾಡಲಾದ ಎಂಎಸ್ಪಿಯು ರೈತ ಮಾಡಿದ ವೆಚ್ಚ, ಕುಟುಂಬದ ಸದಸ್ಯರ ದುಡಿಮೆ, ಜಮೀನು ಮತ್ತು ಬಂಡವಾಳ ಹೂಡಿಕೆ ಮೇಲಿನ ಗಳಿಕೆಯನ್ನು ಒಳಗೊಂಡಿದೆ. ಸಿಎಸಿಪಿ ನಿಗದಿ ಮಾಡುವ ಎಂಎಸ್ಪಿಯು, ಸ್ವಾಮಿನಾಥನ್ ಆಯೋಗದಲ್ಲಿ ವಿವರಿಸಲಾದ ಎಂಎಸ್ಪಿಗಿಂತ ಕಡಿಮೆ' ಎಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ) ವಿವರಿಸಿದೆ.
Recommended Video
'ಬೇರೆ-ಬೇರೆ ರಾಜ್ಯಗಳು ಎಂಎಸ್ಪಿಯನ್ನು ಬೇರೆ-ಬೇರೆ ರೀತಿಯಲ್ಲಿ ಲೆಕ್ಕ ಹಾಕುತ್ತವೆ. ಹೀಗಾಗಿ ಒಂದೇ ಬೆಳೆಗೆ ಹಲವು ರಾಜ್ಯಗಳಲ್ಲಿ ಭಿನ್ನ ಎಂಎಸ್ಪಿ ಇದೆ. ಈ ಕಾರಣದಿಂದಲೇ ರೈತರು ಸರಿಯಾದ ಎಂಎಸ್ಪಿ ಇರಬೇಕು ಎಂದು ಒತ್ತಾಯಿಸುತ್ತಿದ್ದಾರೆ' ಎಂದು ಎಸ್ಕೆಎಂ ಹೇಳಿದೆ.