ಒಂದೇ ಮಾದರಿಯ ಮೂರು ಶೂಟೌಟ್: ಸಜ್ಜನರ್ ಎನ್ಕೌಂಟರ್ ಇತಿಹಾಸ
ಬೆಂಗಳೂರು, ಡಿಸೆಂಬರ್ 07: ತೆಲಂಗಾಣದ ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿ ಜೀವಂತ ಸುಟ್ಟಿದ್ದ ಪ್ರಕರಣದ ಆರೋಪಿಗಳನ್ನು ನಿನ್ನೆ ಎನ್ಕೌಂಟರ್ ನಲ್ಲಿ ಹೊಡೆದು ಉರುಳಿಸಲಾಗಿದೆ.
ಸೈಬರಾಬಾದ್ ಎಸ್ಪಿ ವಿಶ್ವನಾಥ್ ಸಜ್ಜನರ್ ಈ ಎನ್ಕೌಂಟರ್ ಹಿಂದಿನ ರೂವಾರಿ. ಕನ್ನಡಿಗರಾಗಿರುವ ವಿಶ್ವನಾಥ್ ಸಜ್ಜನರ್ ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗಿದ್ದಾರೆ. ಅತ್ಯಾಚಾರ ಸಂತ್ರಸ್ತೆಗೆ ತುರ್ತಾಗಿ ನ್ಯಾಯದಾನ ಮಾಡಿದ್ದಾರೆ ಎಂದೇ ಸಾಮಾಜಿಕ ಜಾಲತಾಣಗಳು ಸಜ್ಜನರ್ ಅವರನ್ನು ಕೊಂಡಾಡುತ್ತಿವೆ.
ಪಶುವೈದ್ಯೆ ಕೊಂದವರನ್ನು ಎನ್ ಕೌಂಟರ್ ಮಾಡಿದ್ದು ಕನ್ನಡಿಗ
ಎನ್ಕೌಂಟರ್ ಬಗ್ಗೆ ಅನುಮಾನಗಳೂ ವ್ಯಕ್ತವಾಗಿವೆ. ಇದೊಂದು ನಕಲಿ ಎನ್ಕೌಂಟರ್ ಎಂತಲೂ, ನ್ಯಾಯವನ್ನು ಕೈಗೆ ತೆಗೆದುಕೊಳ್ಳಲಾಗಿದೆ ಎಂತಲೂ, ನ್ಯಾಯವ್ಯವಸ್ಥೆಯ ಅಣಕವೆಂತಲೂ ದೂರುಗಳು ಕೇಳಿಬರುತ್ತಿವೆ. ಜೊತೆಗೆ ಈ ಎನ್ಕೌಂಟರ್ ನಕಲಿ ಎನ್ನಲು ವಿಶ್ವನಾಥ ಸಜ್ಜನರ್ ಅವರ ಈ ಹಿಂದಿನ ಎನ್ಕೌಂಟರ್ಗಳನ್ನೂ ಮುನ್ನೆಲೆಗೆ ತರಲಾಗಿದೆ.
ಸಜ್ಜನರ್ಗೆ ಎನ್ಕೌಂಟರ್ ಮೊದಲೇನಲ್ಲ
ವಿಶ್ವನಾಥ್ ಸಜ್ಜನರ್ ಅವರಿಗೆ ಎನ್ಕೌಂಟರ್ಗಳು ಮೊದಲೇನಲ್ಲ ಈ ಮೊದಲೂ ಎರಡು ಎನ್ಕೌಂಟರ್ಗಳನ್ನು ಅವರು ಮಾಡಿದ್ದಾರೆ. ಆದರೆ ಆ ಎನ್ಕೌಂಟರ್ ಮಾಡಿದಾಗ ಅವರು ಕೊಟ್ಟಿದ್ದ ವಿವರಣೆ ನಿನ್ನೆ ಕೊಟ್ಟ ವಿವರಣೆ ಬಹುತೇಕ ಒಂದೇ ಆಗಿದೆ.
ಎಂಜಿನಿಯರಿಂಗ್ ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ
ಮೊದಲಿಗೆ ವಿಶ್ವನಾಥ್ ಅವರು ಮೂವರು ಆಸಿಡ್ ದಾಳಿಕೋರರನ್ನು ಎನ್ಕೌಂಟರ್ ಮಾಡಿದ್ದರು. ಆಗಲೇ ಅವರ ಹೆಸರು ಇಲಾಖೆಯಲ್ಲಿ ಮುನ್ನೆಲೆಗೆ ಬಂದಿದ್ದು. 2008 ರಲ್ಲಿ ಮೂರು ಮಂದಿ ಯುವಕರು ಇಬ್ಬರು ಎಂಜಿನಿಯರ್ ಯುವತಿಯರ ಮುಖಕ್ಕೆ ಆಸಿಡ್ ಹಾಕಿದ್ದರು. ಆಗಲೂ ಇದೇ ಮಾದರಿಯಲ್ಲಿ ಪ್ರತಿಭಟನೆಗಳಾಗಿದ್ದವು.
ಬಂಧಿಸಿದ ಮಾರನೇಯ ದಿನವೇ ಎನ್ಕೌಂಟರ್ ಆಗಿತ್ತು
ಮೂವರನ್ನು ಬಂಧಿಸಿದ ಮಾರನೇಯ ದಿನವೇ ಅವರನ್ನು ವರಾಂಗಲ್ ನಗರದಿಂದ ಮೂವತ್ತು ಕಿ.ಮೀ ಹೊರಗೆ ಮಾಮನೂರು ಕಾಡಿನಲ್ಲಿ ಎನ್ಕೌಂಟರ್ ಮಾಡಲಾಯಿತು. ಆರೋಪಿಗಳು ಬಳಸಿದ್ದ ಬೈಕ್, ಆಸಿಡ್ ಬಾಟೆಲ್ ಅನ್ನು ಹುಡುಕಲು ಹೋಗಿದ್ದಾಗ ಆರೋಪಿಗಳು ಅಲ್ಲಿಯೇ ಅಡಗಿಸಿಟ್ಟಿದ್ದ ನಾಡಪಿಸ್ತೂಲು ಎತ್ತಿಕೊಂಡು ನಮ್ಮ ಮೇಲೆ ಗುಂಡು ಹಾರಿಸಲು ಯತ್ನಿಸಿದರು. ಅವರು ಅಲ್ಲಿಯೇ ಅಡಿಗಿಸಿಟ್ಟಿದ್ದ ಆಸಿಡ್ ಅನ್ನು ತೆಗೆದುಕೊಂಡು ಪೊಲೀಸರ ಮೇಲೆ ಎರಚಲು ಯತ್ನಿಸಿದರು, ಹಾಗಾಗಿ ಅವರನ್ನು ಕೊಲ್ಲಬೇಕಾಯಿತು ಎಂದು ವಿಶ್ವನಾಥ್ ಸಜ್ಜನವರ್ ಆವಾಗ ಹೇಳಿದ್ದರು.
ಮಾಜಿ ನಕ್ಸಲ್ ಮುಖಂಡನ ಎನ್ಕೌಂಟರ್
ಮೂರು ವರ್ಷದ ಹಿಂದೆ 2016 ರಲ್ಲಿ ಸಹ ಸಜ್ಜನರ್ ಒಬ್ಬ ಮಾಜಿ ನೆಕ್ಸಲ್ ಮುಖಂಡನನ್ನು ಎನ್ಕೌಂಟರ್ ಮಾಡಿದ್ದರು. ಆಗ ಅವರು ನಕ್ಸಲ್ ನಿಗ್ರಹ ದಳದ ಮುಖ್ಯಸ್ಥರಾಗಿದ್ದರು. ಮಾಜಿ ನಕ್ಸಲ ಮೊಹಮ್ಮದ್ ನಯೀಮುದ್ದೀನ್ ಎಂಬಾತನನ್ನು ಬಂಧಿಸಲು ಹೋಗಿದ್ದಾಗ ಆತ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ ಎಂದು ಹೇಳಿ ಆತನಿಗೆ ಶೂಟ್ ಮಾಡಿ ಕೊಲ್ಲಲಾಗಿತ್ತು.
ಆರೋಪಿಗಳು ಪೊಲೀಸರ ಬಂದೂಕು ಕಿತ್ತುಕೊಂಡಿದ್ದರು
ನಿನ್ನೆಯ ಎನ್ಕೌಂಟರ್ ಪ್ರಕರಣದಲ್ಲಿ ವಿಶ್ವನಾಥ್ ಸಜ್ಜನರ್ ಹೇಳಿದಂತೆ. ಆರೋಪಿಗಳನ್ನು ಸ್ಥಳ ಮಹಜರು ಮಾಡಲು ನಸುಕಿನಲ್ಲಿ ಹತ್ತು ಮಂದಿ ಬಂದೂಕುದಾರಿ ಪೊಲೀಸರೊಂದಿಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಹುದುಗಿಸಿಟ್ಟಿದ್ದ ಸಂತ್ರಸ್ತೆಯ ವಸ್ತುಗಳನ್ನು ತೆಗೆದುಕೊಡುವಂತೆ ಆರೋಪಿಗಳಿಗೆ ಹೇಳಲಾಯಿತು. ಆಗ ಆರೋಪಿಗಳು ದೊಣ್ಣೆಗಳನ್ನು ತೆಗೆದುಕೊಂಡು ಪೊಲೀಸರಿಗೆ ಹೊಡೆದು ಅವರಲ್ಲಿ ಒಬ್ಬ ಪೊಲೀಸರ ಬಂದೂಕು ಕಿತ್ತುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ ಹಾಗಾಗಿ ನಾಲ್ಕೂ ಮಂದಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಮಾನವ ಹಕ್ಕು ಆಯೋಗ ಪ್ರಕರಣ ದಾಖಲು
ಈ ಎನ್ಕೌಂಟರ್ ನ ಸತ್ಯಾಸತ್ಯತೆಯ ಬಗ್ಗೆ ತನಿಖೆ ಮಾಡಲೆಂದು ಮಾನವ ಹಕ್ಕು ಆಯೋಗವು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇಂದು ಎನ್ಕೌಂಟರ್ ನಡೆದ ಸ್ಥಳಕ್ಕೆ ಭೇಟಿ ನೀಡಿದೆ. ಎನ್ಕೌಂಟರ್ ನಕಲಿ ಎಂದೇನಾದರೂ ಸಾಬೀತಾದರೆ ಪೊಲೀಸರಿಗೆ ಜೀವಾವಧಿ ಶಿಕ್ಷೆ ಆಗಲಿದೆ.