ವಾಹನ ನಕಲಿ ವಿಮೆ ಜಾಲ ಪತ್ತೆ ಮಾಡಿದ ಸೈಬರಾಬಾದ್ ಪೊಲೀಸರು
ಬೆಂಗಳೂರು, ಜನವರಿ 05: ಪ್ರತಿಯೊಂದು ವಾಹನಕ್ಕೂ ವಿಮೆ ಕಡ್ಡಾಯ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ವಾಹನಗಳಿಗೆ ವಿಮೆ ಮಾಡಿಸಲೇಬೇಕು. ನಿಮ್ಮದು ಕಾರು, ಬೈಕ್ ಇದ್ದು, ಏಜೆಂಟರ ಮೂಲಕ ವಿಮೆ ಮಾಡಿಸಿದ್ದರೆ ಮೊದಲು ಅದರ ಅಸಲಿತನದ ಬಗ್ಗೆ ಒಮ್ಮೆ ಪರೀಕ್ಷಿಸಿಕೊಳ್ಳಿ !
ನೆರೆಯ ಸೈಬರಾಬಾದ್ ಪೊಲೀಸರು ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ವಾಹನ ವಿಮೆ ಮಾಡಿಸಿ ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವನ್ನು ಪತ್ತೆ ಮಾಡಿದ್ದಾರೆ. ಕನ್ನಡಿಗರೇ ಆದ ಸೈಬರಾಬಾದ್ ಕಮೀಷನರ್ ವಿ. ಸಿ. ಸಜ್ಜನರ್ ಅವರು ಈ ನಕಲಿ ವಾಹನ ವಿಮೆ ರಾಕೆಟ್ ಜಾಲದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆನ್ಲೈನ್ ತುರ್ತು ಸಾಲಕ್ಕೆ ಕೈ ಹಾಕಿ ಬದುಕು ತೂತು ಮಾಡಿಕೊಳ್ಳಬೇಡಿ!
ರಿಲಾಯನ್ಸ್ ಜನರಲ್ ಇನ್ಸೂರೆನ್ಸ್, ಕೊಟಾಕ್ ಜನರಲ್ ವಿಮೆ, ಎಚ್ಡಿಎಫ್ ಸಿ ಇರ್ಗೋ , ಇಫ್ಕೋ, ಚೋಳಾ, ಫೂಚರ್ ಜನರಲ್ ವಿಮೆ, ರಾಯಲ್ ಸುಂದರಂ ವಿಮೆಯ ಪಾಲಸಿಗಳನ್ನು ನಕಲು ಮಾಡಿ ಜನರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಮಾಡಿರುವ ಜಾಲ ಬೆಳಕಿಗೆ ಬಂದಿದೆ. ಈ ಜಾಲದಲ್ಲಿ ತೊಡಗಿದ್ದ ಹನ್ನೊಂದು ಆರೋಪಿಗಳನ್ನು ಬಂಧಿಸಿರುವ ಸೈಬರಾಬಾದ್ ಪೊಲೀಸರು, 1125 ನಕಲಿ ವಿಮಾ ಪಾಲಸಿಗಳನ್ನು ಜಪ್ತಿ ಜಪ್ತಿ ಮಾಡಿದ್ದಾರೆ. ಅಲ್ಲದೇ ಕೃತ್ಯಕ್ಕೆ ಬಳಸಿದ್ದ ಕಂಪ್ಯೂಟರ್, ಸ್ಟಾಂಪ್ಸ್ ಲ್ಯಾಪ್ಟಾಪ್, ಪ್ರಿಂಟರ್ಸ್ ಮತ್ತು ಸ್ಕಾನರ್ ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಆನ್ ಲೈನ್ ಲೋನ್ ಆಪ್ ಗಳಿಂದ ಪಡೆದ ಸಾಲ ಮನ್ನಾ ಆದಂಗೆ?
ಜಿ. ರಮೇಶ್, ಟಿ. ಸಾಯಿರಾಂ, ಜಿ. ಗೋವರ್ಧನ್, ಜಿ. ರಮೇರ್ಶ, ಜಿ. ರಾಜು, ಎ. ಪ್ರವೀಣ್, ಜಿ. ಸುಧೀರ್ ಕುಮಾರ್, ಜಿ. ಕೃಷ್ಣ, ( ಬೀದರ್ ನಿವಾಸಿ) ಎಂ. ಶೇಖರ್, ಜೀತೇಂದ್ರ ಕುಶ್ವ, ರವಿ ಕಾಡಿಗಲ್ಲ ಬಂಧಿತ ಆರೋಪಿಗಳು. ಇವರು ನಾಗರಕೋಯಿಲ್, ನಲಗೊಂಡ ಮತ್ತಿತರ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ. ನಕಲಿ ವಾಹನ ವಿಮೆ ಮಾಡಿಸಿದ ಆರೋಪ ಸಂಬಂಧ ರಿಯಾಲಯನ್ಸ್, ಎಚ್ಡಿಎಫ್ ಸಿ, ಕೊಟಾಕ್ ಮಹೇಂದ್ರ ಕಂಪನಿ ವತಿಯಿಂದ ನೀಡಿರುವ ದೂರುಗಳನ್ನು ಆಧರಿಸಿ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಸೈಬರಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾರ್ಯಾಚರಣೆ ಹೇಗೆ
ಬಂಧಿತ ಆರೋಪಿಗಳು ಹೈವೇ ಹಾಗೂ ಆರ್ಟಿಓ ಕಚೇರಿಗಳ ಸಮೀಪ ವಾಯು ಮಾಲಿನ್ಯ ತಪಾಸಣಾ ವಾಹನಗಳನ್ನು ಇಟ್ಟುಕೊಳ್ಳುತ್ತಿದ್ದರು. ವಾಯು ಮಾಲಿನ್ಯ ತಪಾಸಣೆ, ಹಾಗೂ ಹೊಸ ವಾಹನ ನೋಂದಣಿಗೆ ಬರುವ ಗ್ರಾಹಕರನ್ನು ಟಾರ್ಗೆಟ್ ಕಡಿಮೆ ಬೆಲೆಗೆ ವಿಮೆ ಮಾಡಿಸಿಕೊಡುವುದಾಗಿ ಗ್ರಾಹಕರನ್ನು ಸೆಳೆಯುತ್ತಿದ್ದರು. ಆರ್ಟಿಓ ಏಜೆಂಟರು ಗ್ರಾಹಕರನ್ನು ಕಳಿಸುತ್ತಿದ್ದರು. ವಿಮೆ ಇಲ್ಲದೇ ಅಥವಾ ವಿಮೆ ಅವಧಿ ಮುಗಿದ ನಂತರ ಮತ್ತೆ ಮಾಡಿಸದೇ ವಾಹನ ನೋಂದಣಿ ಅಸಾಧ್ಯ. ಹೀಗಾಗಿ ವಿಮೆ ಕಡ್ಡಾಯ. ಹತ್ತು ಸಾವಿರ ಮೊತ್ತದ ವಿಮೆ ಪಾಲಸಿಯನ್ನು ಕೇವಲ ಐದು ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಕಡಿಮೆ ಬೆಲೆಗೆ ವಿಮೆ ಸಿಗುತ್ತಿದೆ ಎಂದು ನಂಬಿ ಗ್ರಾಹಕರು ಈ ಏಜೆಂಟರ ಬಳಿ ನಕಲಿ ವಿಮೆ ಪಾಲಸಿಗಳನ್ನು ಪಡೆಯುತ್ತಿದ್ದರು.
ಇಡೀ ಸೈಬರಾಬಾದ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಈ ಆರೋಪಿಗಳು ತಮ್ಮ ಕಾರ್ಯ ಜಾಲ ವಿಸ್ತರಿಸಿಕೊಂಡಿದ್ದರು. ಅಸಲಿ ವಿಮೆಗಳ ಮಾದರಿಯಲ್ಲಿಯೇ ನೋಂದಣಿ ಮಾಡಿ ಕಂಪ್ಯುಟರ್ ಪ್ರಿಂಟ್ ತೆಗೆದುಕೊಡುತ್ತಿದ್ದರು. ಅಸಲಿ ವಿಮೆಗಳನ್ನೇ ಹೊಲುವಂತಿದ್ದ ಈ ವಿಮೆ ಪಾಲಸಿಗಳನ್ನು ಪೊಲೀಸರು ನೋಡಿದರೂ ಅದನ್ನು ಪರೀಕ್ಷಿಸುತ್ತಿರಲಿಲ್ಲ. ಹೀಗಾಗಿ ಹಲವು ವರ್ಷಗಳಿಂದ ಈ ದಂಧೆ ಅವ್ಯಾಹತವಗಿ ನಡೆಸಿಕೊಂಡು ಬಂದಿದ್ದಾರೆ.ವಿಮಾ ಕಂಪನಿಗಳಲ್ಲಿ ಸೇಲ್ಸ್ ಮ್ಯಾನೇಜರ್ ಗಳಾಗಿ ಕಾರ್ಯ ನಿರ್ವಹಿಸಿ ಅದರ ಬಗ್ಗೆ ಜ್ಞಾನ ಪಡೆದಿದ್ದ ಹಲವರು ಈ ಜಾಲದಲ್ಲಿ ಶಾಮೀಲಾಗಿ ಬಂಧನಕ್ಕೆ ಒಳಗಾಗಿದ್ದಾರೆ.
ಆರೋಪಿಗಳ ಹಿನ್ನೆಲೆ
ಪ್ರಮುಖ ಆರೋಪಿ ಜಿ. ರಮೇಶ್ ನಾಯಕ್, ಸರ್ಕಾರಿ ನೋಂದಣಿಯ ವಾಯು ಮಾಲಿನ್ಯ ತಪಾಸಣಾ ಕೇಂದ್ರ ನಡೆಸುತ್ತಿದ್ದ. ಬೆಂಗಳೂರು ಹೈವೇ ನಲ್ಲಿ ತಪಾಸಣಾ ಕೇಂದ್ರ ಹೊಂದಿದ್ದ. ವಾಹನ ತಪಾಸಣೆಗೆ ಬರುವ ವಾಹನಗಳ ಹೆಸರಿನಲ್ಲಿ ನಕಲಿ ವಾಹನ ವಿಮೆ ಮಾಡಿಸಿ ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದ. ಎಂ.ಎಸ್. ವರ್ಡ್ ಪೋಗ್ರೋಮ್ ಬಳಿಸಿ ನಕಲಿ ಪಾಲಸಿಗಳನ್ನು ಮಾಡಿ ಜನರಿಗೆ ಮೋಸ ಮಾಡುತ್ತಿದ್ದ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಮತ್ತೊಬ್ಬ ಆರೋಪಿ ಟಿ. ಸಾಯಿರಾಂ, ವಿವಿಧ ವಿಮೆ ಕಂಪನಿಗಳಲ್ಲಿ ವಿಮೆ ಸೇಲ್ಸ್ ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ವಿಮೆ ಬಗ್ಗೆ ಜ್ಞಾನ ಸಂಪಾದಿಸಿದ್ದ. ಹೀಗಾಗಿ ಮೊಬೈಲ್ ಆಪ್ ಬಳಿಸಿ ಇತರೆ ಆರೋಪಿಗಳಿಗೆ ನಕಲಿ ವಿಮಾ ಪಾಲಸಿಗಳನ್ನು ತಯಾರಿಸಿ ಕೊಡುತ್ತಿದ್ದ. ಇದಕ್ಕಾಗಿ ಸಾಫ್ಟ್ ವೇರ್ ತಯಾರಿಸಿಕೊಂಡಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಇದೇ ರೀತಿ ನಾನಾ ಹಾದಿ ಹಿಡಿದು ಹನ್ನೆರಡು ಆರೋಪಿಗಳು ನಕಲಿ ವಿಮೆ ತಯಾರಿಸಿ ಜನರಿಗೆ ಮೋಸ ಮಾಡುತ್ತಿದ್ದರು ಎಂದು ಸೈಬರಾಬಾದ್ ಪೊಲೀಸ್ ಆಯುಕ್ತವಿ.ಸಿ ಸಜ್ಜನರ್ ತಿಳಿಸಿದ್ದಾರೆ.
ಜಪ್ತಿ
ಬಂಧಿತ ಆರೋಪಿಗಳಿಂದ ವಿವಿಧ ಕಂಪನಿಗಳ ಹೆಸರಿನಲ್ಲಿ ತಯಾರಿಸಿದ್ದ 1125 ನಕಲಿ ವಿಮೆ ಪಾಲಸಿಗಳು, 57 ಸಾವಿರ ರೂಪಾಯಿ ನಗದು, ಮೂರು ವಾಯು ಮಾಲಿನ್ಯ ತಪಾಸಣಾ ವಾಹನಗಳು, ಮೂರು ಸ್ಟಾಂಪ್, ಎರಡು ಲ್ಯಾಪ್ ಟಾಪ್, ರಿಯಾಲ್ಸ ಪ್ಯಾಡ್ ಐದು ಕಂಪ್ಯೂಟರ್ , ಮೂರು ಪ್ರಿಂಟರ್, ನಾಲ್ಕು ಕಲರ್ ಪ್ರಿಂಟರ್, ಹನ್ನೊಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ವಾಹನಗಳ ನಕಲಿ ವಿಮೆ ಪಾಲಸಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿದ ಸೈಬರಾಬಾದ್ ಎಡಿಸಿಪಿ ಜಿ. ಸುಂದೀಪ್, ಶಂಶಾಬಾದ್ ಎಸಿಪಿ ಭಾಸ್ಕರ್, ಇನ್ಸ್ಪೆಕ್ಟರ್ ವೆಂಕಟರೆಡ್ಡಿ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದರು.
ಸಲಹೆ
ನೋಂದಾಯಿತ ಅಧಿಕೃತ ಏಜೆಂಟ್ ಮೂಲಕ ವಾಹನ ವಿಮೆ ಮಾಡಿಸಿ. ವಿಮೆ ಮಾಡಿಸಿದ ಹನ್ನೆರಡು ತಾಸಿನ ಬಳಿಕ ಅದರ ಅಸಲಿ ಪ್ರತಿ ಸಿಗುತ್ತದೆ. ವಿಮೆ ಮಾಡಿಸಿದ ತಕ್ಷಣ ಪಾಲಿಸಿ ಕೊಡುತ್ತಾರೆ ಎಂದು ಹೇಳಿದ್ರೆ ಮೊದಲು ಕಂಪನಿಗೆ ಮಾಹಿತಿ ನೀಡಿ. ಅದು ಅಸಲಿಯಲ್ಲ ಎಂದು ಭಾವಿಸಿ.
ವಿಮೆ ಪಾಲಸಿ ಕೇವಲ ಪೋಸ್ಟ್ ಮೂಲಕವೇ ಮಾಡಿಸಿದವರ ವಿಳಾಸಕ್ಕೆ ಬರುತ್ತವೆ. ವಾಯು ಮಾಲಿನ್ಯ ತಪಾಸಣೆ ಮಾಡುವರಿಗೆ ವಿಮೆ ಪಾಲಿಸಿ ನೀಡುವ ಅಧಿಕಾರ ವಿಲ್ಲ. ಯಾರಾದರೂ ನಕಲಿ ವಿಮೆ ಮಾಡಿಸಿಕೊಟ್ಟರೆ ಕೂಡಲೇ ಪೊಲೀಸರಿಗೆ ದೂರು ನೀಡಿ. ನಕಲಿ ವಿಮೆ ಪಾಲಸಿಯಿಂದ ಅಪಘಾತವಾದವರಿಗೆ ವಾಹನಗಳಿಗೆ ವಿಮೆ ಬರುವುದಿಲ್ಲ.