ಬುಕಿಗಳ ಜತೆ ನಂಟು ಆರೋಪ, ವೈಎಸ್ ಆರ್ ಕಾಂಗ್ರೆಸ್ ಶಾಸಕರ ವಿಚಾರಣೆ
ಹೈದರಾಬಾದ್, ಆಗಸ್ಟ್ 24: ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರ ವಿಚಾರಣೆ ನಡೆಸಿದ್ದಾರೆ. ಕ್ರಿಕೆಟ್ ಬುಕಿಗಳು ಹಾಗೂ ಅವರ ಸಹವರ್ತಿಗಳ ಜತೆಗೆ ಶಾಸಕರ ಆರ್ಥಿಕ ವ್ಯವಹಾರಗಳ ವಿಚಾರವನ್ನು ಪೊಲೀಸರು ಪ್ರಶ್ನೆ ಮಾಡಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಗೆ ಸ್ನೇಹಿತರಿಂದಲೇ ಬಲಿಯಾದ ಮಂಡ್ಯದ ವಿದ್ಯಾರ್ಥಿ
ಬುಕಿಗಳೊಂದಿಗೆ ಯಾವುದೇ ದುಡ್ಡು-ಕಾಸಿನ ವ್ಯವಹಾರ ಮಾಡಿಲ್ಲ ಎಂದು ಶಾಸಕರು ಹೇಳಿದ್ದಾರೆ. ಜತೆಗೆ ತನಿಖಾಧಿಕಾರಿಗಳ ವಿಚಾರಣೆಗೆ ಸಂಪೂರ್ಣವಾದ ಸಹಕಾರ ನೀಡಿದ್ದಾರೆ.
ನೆಲ್ಲೂರು ಗ್ರಾಮಾಂತರ ಶಾಸಲ ಕೋಟಂರೆಡ್ಡಿ ಶ್ರೀಧರ್ ರೆಡ್ಡಿ ಮತ್ತು ನೆಲ್ಲೂರು ಪಟ್ಟಣದ ಶಾಸಕ ಪಿ.ಅನಿಲ್ ಕುಮಾರ್ ಇಬ್ಬರಿಗೂ ನೋಟಿಸ್ ನೀಡಲಾಗಿತ್ತು. ಆ ನಂತರ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದರು. ಹೆಚ್ಚುವರಿ ಎಸ್ ಪಿ ಬಿ.ಶರತ್ ಬಾಬು ಹಾಗೂ ತಂಡವು ಶಾಸಕರ ವಿಚಾರಣೆ ನಡೆಸಿದ್ದಾರೆ. ವೈಯಕ್ತಿಕ ಮಾಹಿತಿಗಳನ್ನು ಕೇಳಿದ್ದಾರೆ.
ಆರ್ಥಿಕ ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸಲು ವೈಯಕ್ತಿಕ ಹಾಗೂ ಕುಟುಂಬದವರ ಬ್ಯಾಂಕ್ ಮಾಹಿತಿಗಳನ್ನು ಪರಿಶೀಲಿಸಿ, ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಶ್ರೀಧರ್ ರೆಡ್ಡಿ ಮಾಧ್ಯಮದವರಿಗೆ ಹೇಳಿದ್ದಾರೆ.
ಐಪಿಎಲ್ ಬೆಟ್ಟಿಂಗ್, ಹುಬ್ಬಳ್ಳಿಯಲ್ಲಿ ಬುಕಿ ಬಂಧನ
ಇನ್ನು ವಿಪಕ್ಷಗಳ ಶಾಸಕರಿಗೆ ತೊಂದರೆ ಕೊಡಬೇಕು ಎಂಬ ಕಾರಣಕ್ಕೆ ಹಾಗೂ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಅನಿಲ್ ಕುಮಾರ್ ಮಾತನಾಡಿ, ಬುಕಿಗಳ ಜತೆ ಟಿಡಿಪಿ ಮುಖಂಡರ ನಂಟಿತ್ತು. ಆದರೆ ಅವರನ್ನು ಕೈ ಬಿಟ್ಟು ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಶಾಸಕರನ್ನು ಗುರಿ ಮಾಡಿಕೊಳ್ಳಲಾಗಿದೆ. ನನ್ನ ರಾಜಕೀಯ ಬದುಕು ಸ್ವಚ್ಛವಾಗಿದೆ. ವಿಚಾರಣೆಗಾಗಿ ಎಷ್ಟು ಬಾರಿ ಕರೆಸಿದರೂ ಬರುತ್ತೇನೆ ಎಂದು ಹೇಳಿದ್ದಾರೆ.
ಮುಂದಿನ ವಿಚಾರಣೆಗಾಗಿ ಆಗಸ್ಟ್ ಇಪ್ಪತ್ತೇಳರಂದು ಮತ್ತೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದಾರೆ.