ದೇಶಿ ಲಸಿಕೆ ಕೊವ್ಯಾಕ್ಸಿನ್ ಮಾರುಕಟ್ಟೆಗೆ ಬರೋದು ಯಾವಾಗ?
ಹೈದರಾಬಾದ್, ಆ. 14: ಕೊರೊನಾವೈರಸ್ ವಿರುದ್ಧ ವಿವಿಧ ದೇಶಗಳೂ ಲಸಿಕೆ, ಔಷಧಿ ಕಂಡು ಹಿಡಿದು ಪ್ರಯೋಗಕ್ಕೆ ಒಳಪಡಿಸುತ್ತಿವೆ. ಈ ನಡುವೆ ಹೊಸ ಆಶಾಕಿರಣವಾಗಿ ಹೊರಹೊಮ್ಮಿರುವ ಸ್ವದೇಶಿ ಲಸಿಕೆ ಕೊವ್ಯಾಕ್ಸಿನ್ ಮಾರುಕಟ್ಟೆಗೆ ಯಾವಾಗ ಬರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಆಗಸ್ಟ್ 15ರಂದು ಕೊವ್ಯಾಕ್ಸಿನ್ ಬರಬಹುದೇ ಎಂದು ಕಾಯುತ್ತಿರುವವರಿಗೆ ಸಂಸ್ಥೆ ಕೊಟ್ಟ ಉತ್ತರ ಇಲ್ಲಿದೆ..
ಡ್ರಗ್ ಕಂಟ್ರೋಲರ್ ಜನರಲ್ ಅಫ್ ಇಂಡಿಯಾ(ಡಿಸಿಜಿಐ) ಅನುಮತಿ ಪಡೆದುಕೊಂಡಿರುವ ಹೈದರಾಬಾದ್ ಮೂಲದ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್ ತಯಾರಿಸಿರುವ ಕೊವ್ಯಾಕ್ಸಿನ್ ಲಸಿಕೆ ಸದ್ಯ ಕ್ಲಿನಿಕಲ್ ಟ್ರಯಲ್ ಹಂತದಲ್ಲಿದೆ.
ಸ್ವದೇಶಿ ಲಸಿಕೆ ಕೊವ್ಯಾಕ್ಸಿನ್ ಪ್ರಯೋಗಕ್ಕೆ ಸಿಕ್ತು ಅನುಮತಿ!
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿಗೆ ಇಂಡಿಯನ್ ಕೌನ್ಸಿಲ್ ಅಫ್ ಮೆಡಿಕಲ್ ರಿಸರ್ಚ್ ( ಐಸಿಎಂಆರ್) ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್ಐಜಿ) ಸಹಕಾರ ನೀಡಿವೆ.
ಬೆಳಗಾವಿ ಆಸ್ಪತ್ರೆಗೆ ಕೊವ್ಯಾಕ್ಸಿನ್ ಪ್ರಯೋಗ ಅನುಮತಿ ಸಿಗಲು ಏನು ಕಾರಣ?
ಮೊದಲ ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳು ಮುಕ್ತಾಯ ಹಂತದಲ್ಲಿವೆ. ದೇಶದ ವಿವಿಧೆಡೆ ಈ ಲಸಿಕೆ ಪ್ರಯೋಗ ನಡೆಯುತ್ತಿದ್ದು, ತಪ್ಪು ಲಸಿಕೆ ಮಾರುಕಟ್ಟೆಗೆ ತಂದು ಜನರನ್ನು ಕೊಲ್ಲಲು ಸಾಧ್ಯವಿಲ್ಲ. ತಡವಾಗಿಯಾದರೂ ಸುರಕ್ಷಿತ ಹಾಗೂ ಸಶಕ್ತವಾಗಿ ಲಸಿಕೆಯನ್ನೇ ಸಂಸ್ಥೆ ಹೊರ ತರಲಿದೆ. ಹೀಗಾಗಿ, ಆತುರವಾಗಿ ಆಗಸ್ಟ್ 15ರಂದು ಲಸಿಕೆ ಮಾರುಕಟ್ಟೆಗೆ ಬಿಡುವುದಿಲ್ಲ ಎಂದು ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಸಂಸ್ಥೆಯ ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕ ಇ. ಕೃಷ್ಣ ಹೇಳಿದ್ದಾರೆ.
ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಶುಭ ಸುದ್ದಿ?
ಆಗಸ್ಟ್ 15ಕ್ಕೆ ಲಸಿಕೆ ಹೊರ ತರಬೇಕಾದರೆ ಒಂದು ಹಂತದ ಕ್ಲಿನಿಕಲ್ ಟ್ರಯಲ್ ತಪ್ಪಿಸಬೇಕಾಗುತ್ತದೆ. ಇದು ಅತ್ಯಂತ ಅಪಾಯಕಾರಿಯಾಗಬಲ್ಲುದು. ಉತ್ತಮ ಲಸಿಕೆ ಹೊರತರಲು ಸಂಸ್ಥೆ ಮೇಲೆ ಒತ್ತಡ ಹಾಗೂ ನಂಬಿಕೆ ಇದೆ. ಇದಕ್ಕೆ ತಕ್ಕ ಉತ್ಪನ್ನ ನೀಡುವುದು ಮುಖ್ಯ.
ಈ ಬಗ್ಗೆ ಡಿಜಿ -ಐಸಿಎಂಆರ್ ಗೆ ತಿಳಿಸಲಾಗಿದ್ದು, ಯಾವುದೇ ಹಂತದ ಪ್ರಯೋಗದಲ್ಲಿ ಲೋಪವಾಗದಂತೆ ಪರೀಕ್ಷೆ ನಡೆಸಿ ಎಲ್ಲಾ ರೀತಿಯಲ್ಲಿ ಸುರಕ್ಷಿತ ಎನಿಸಿ, ತಜ್ಞರ ಒಪ್ಪಿಗೆ ನಂತರವಷ್ಟೇ ಲಸಿಕೆ ಹೊರ ತರಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಬಹುತೇಕ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಒಂದು ಲ್ಯಾಬಿನಿಂದ ಎಲ್ಲಾ ಹಂತದ ಪರೀಕ್ಷೆಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ.
ದೇಶದ 12 ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಟ್ರಯಲ್
ದೇಶದ 12 ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಟ್ರಯಲ್ ಕರ್ನಾಟಕದ ಬೆಳಗಾವಿಯ ಜೀವನ್ ರೇಖಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ 12 ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಟ್ರಯಲ್ ಬಹುತೇಕ ಆರಂಭಗೊಂಡಿದೆ. ಏಮ್ಸ್ ದೆಹಲಿ ಹಾಗೂ ಹೈದರಾಬಾದ್, ನಿಜಾಮ್ಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲೂ ರೋಗಿಗಳ ಮೇಲೆ ಈ ಲಸಿಕೆಯ ಮೊದಲ ಪ್ರಯೋಗ ನಡೆಯಲಿದೆ. ಇದಲ್ಲದೆ, ಎಸ್ ಆರ್ ಎಂ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ಕಾಂಚೀಪುರಂ, ಸರ್ಕಾರಿ ಸ್ವಾಮ್ಯದ ಕಿಂಗ್ ಜಾರ್ಜ್ ಆಸ್ಪತ್ರೆ, ವಿಶಾಖಪಟ್ಟಣಂ, ಏಮ್ಸ್ ಪಾಟ್ನಾ, ಗೋವಾದ ಸಿಆರ್ ಒಎಂ ಹಾಗೂ ರೇಡ್ಕರ್ ಆಸ್ಪತ್ರೆ ಸಹಯೋಗದಲ್ಲಿ ಪ್ರಯೋಗ ನಡೆಯಲಿದೆ.
ಹಲವು ಲ್ಯಾಬ್ ಗಳಿಗೆ ಹೊಸ ಅನುಭವ
ಕರ್ನಾಟಕದ ಬೆಳಗಾವಿಯ ಜೀವನ್ ಸಖಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅಲ್ಲದೆ ಗಿಲುರ್ಕರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ(ನಾಗಪುರ್), ಪ್ರಖರ್ ಆಸ್ಪತ್ರೆ(ಕಾನ್ಪುರ್), ರಾಣಾ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ (ಗೋರಖ್ ಪುರ್) ಸಣ್ಣ ಮಟ್ಟದ ಖಾಸಗಿ ಆಸ್ಪತ್ರೆಗಳಿಗೂ ಅನುಮತಿ ನೀಡಲಾಗಿದೆ. ಈ ಆಸ್ಪತ್ರೆಗಳಲ್ಲಿ ಸಂಶೋಧನಾ ಕೇಂದ್ರಗಳಿಲ್ಲ, ಮೆಡಿಕಲ್ ಕಾಲೇಜ್ ಜೊತೆ ಸಂಪರ್ಕ ಹೊಂದಿಲ್ಲ ಎಂಬುದು ವಿಶೇಷ. ಪ್ರಖರ್ ಆಸ್ಪತ್ರೆ ಈ ಮುಂಚೆ ಮಲೇರಿಯಾಗೆ ಆಯುರ್ವೇದ ಔಷಧಿ ಪ್ರಯೋಗದಲ್ಲಿ ಪಾಲ್ಗೊಂಡಿತ್ತು. ರಾಣಾ ಆಸ್ಪತ್ರೆ ಐವಿಎಫ್ ನಲ್ಲಿ ಪರಿಣತಿ ಪಡೆದಿದೆ, ಇಲ್ಲಿ ತನಕ ಯಾವುದೇ ಲಸಿಕೆ ಪ್ರಯೋಗದಲ್ಲಿ ಪಾಲ್ಗೊಂಡಿಲ್ಲ, ಇದು ಮೊದಲ ಅನುಭವ.
ವಿಜ್ಞಾನಿ ಇ ಕೃಷ್ಣಾ ಸ್ಥಾಪಿಸಿದ ಭಾರತ್ ಬಯೋಟೆಕ್
ಭಾರತದ ವಿಜ್ಞಾನಿ ಇ ಕೃಷ್ಣಾ ಸ್ಥಾಪಿಸಿದ ಭಾರತ್ ಬಯೋಟೆಕ್, ಹೈದರಾಬಾದಿನಲ್ಲಿ ಕೇಂದ್ರ ಕಚೆರಿ ಹೊಂದಿದೆ. ಈ ಹಿಂದೆ ಹಂದಿಜ್ವರ, ಎಚ್ 1 ಎನ್ 1 ವಿರುದ್ಧ HNVAC ಎಂಬ ವ್ಯಾಕ್ಸಿನ್ ಹೊರ ತಂದಿತ್ತು. ಈಗ ಕೃಷ್ಣಾ ಅವರ ನೇತೃತ್ವದಲ್ಲಿ ಕೋವ್ಯಾಕ್ಸಿನ್ ಲಸಿಕೆ ತಯಾರಾಗುತ್ತಿದ್ದು, ಸರ್ಕಾರಿ ಸ್ವಾಮ್ಯದ ಇಂಡಿಯನ್ ಕೌನ್ಸಿಲ್ ಅಫ್ ಮೆಡಿಕಲ್ ರಿಸರ್ಚ್ ( ಐಸಿಎಂಆರ್) ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್ಐಜಿ) ಸಹಕಾರ ನೀಡಿವೆ. ಮೊದಲ ಹಂತದಲ್ಲಿ 18 ರಿಂದ 55 ವರ್ಷದೊಳಗಿನ 50 ಮಂದಿ ಮೇಲೆ ಲಸಿಕೆ ಪ್ರಯೋಗವಾಗಲಿದೆ. ಈ ರೋಗಿಗಳಿಗೆ ಕಿಡ್ನಿ, ಹೃದಯ, ಶ್ವಾಸಕೋಶ, ಅನಿಯಮಿತ ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆ ಇರಬಾರದು ಎಂಬ ನಿಯಯವಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.