ಹೈದರಾಬಾದ್:ಪ್ರವಾಹಕ್ಕೆ ಸಿಲುಕಿ ಕೊರೊನಾ ಸೋಂಕಿತರ ಪರದಾಟ
ಹೈದರಾಬಾದ್,ಅಕ್ಟೋಬರ್ 15: ಆಂಧ್ರಪ್ರದೇಶ, ತೆಲಂಗಾಣದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ, ಇದರಿಂದಾಗಿ ಕೊರೊನಾ ಸೋಂಕಿತರು ಪರದಾಡುವಂತಾಗಿದೆ.
ಒಂದೆಡೆ ವೈರಸ್ ಜನರ ಜೀವವನ್ನು ಹಿಂಡುತ್ತಿದ್ದರೆ ಮತ್ತೊಂದೆಡೆ ಪ್ರವಾಹ ಜನರ ಜೀವನವನ್ನು ಅಸ್ತವ್ಯಸ್ಥ ಮಾಡುತ್ತಿದೆ. ಪ್ರವಾಹದಿಂದಾಗಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.
ಹೈದರಾಬಾದ್ ನಲ್ಲಿ ಇಂತಹ 22 ಘಟನೆಗಳು ವರದಿಯಾಗಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಪ್ರವಾಹದಿಂದಾಗಿ ಚಿಕಿತ್ಸೆ ಪಡೆಯಲಾಗದೇ ಜೀವ ಭಯದಿಂದ ಪರದಾಡುತ್ತಿದ್ದಾರೆ.
ಮನೆಗಳು ಪ್ರವಾಹದಲ್ಲಿ ಮುಳುಗಿದ್ದು, ಕ್ವಾರಂಟೈನ್ ಗೆ ಒಳಗಾಗಿರುವ ಸೋಂಕಿತರಿಗೆ ನೆರವು ನೀಡಲು ವೈದ್ಯಕೀಯ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ. ಸೋಂಕಿನ ಭಯದಿಂದಾಗಿ ನೆರೆ ಮನೆಯವರೂ ಕೂಡ ನೆರವಿಗೆ ಧಾವಿಸುತ್ತಿಲ್ಲ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ತೆಲಂಗಾಣದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಹೈದರಾಬಾದ್, ಕರ್ನಾಟಕ, ಮಹಾರಾಷ್ಟ್ರದಲ್ಲಿ ಮುಂದಿನ 6 ತಾಸಿನಲ್ಲಿ ಭಾರಿ ಮಳೆ ಸಾಧ್ಯತೆ
ರಾಜ್ಯದ ಹಲವಾರು ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳಲ್ಲಿ ಪ್ರವಾಹದಂಹತ ಪರಿಸ್ಥಿತಿ ಉಂಟಾಗಿದೆ ಮತ್ತು ಕೆಲವು ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ.
ವರುಣನ ಆರ್ಭಟಕ್ಕೆ ಬಂಡಲಗುಡದ ಮೊಹಮ್ಮದಿಯಾ ಬೆಟ್ಟದಲ್ಲಿ ಕಾಂಪೌಂಡ್ ಗೋಡೆಯೊಂದು ಕುಸಿದು 9 ಮಂದಿ ಸಾವನ್ನಪ್ಪಿದ್ದಾರೆ. ಮತ್ತೊಂದು ಘಟನೆಯಲ್ಲಿ ಭಾರಿ ಮಳೆಯಿಂದ ಇಬ್ರಾಹಿಂಪಟ್ಟಣಂ ಪ್ರದೇಶದಲ್ಲಿ ಹಳೆಯ ಮನೆಯ ಸೀಲಿಂಗ್ ಕುಸಿದು 40 ವರ್ಷದ ಮಹಿಳೆ ಮತ್ತು ಅವರ 15 ವರ್ಷದ ಪುತ್ರಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.