ತೆಲಂಗಾಣ ಮುಖ್ಯಮಂತ್ರಿ ಕನಸು ಭಗ್ನ: ಎಲ್ಲ ಉಲ್ಟಾ ಆಗೋಯ್ತು!
ಹೈದರಾಬಾದ್, ಏಪ್ರಿಲ್ 04: ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮಾರ್ಚ್ 30 ರಂದು ಒಂದು ಹೇಳಿಕೆ ನೀಡಿದ್ದರು. ಏಪ್ರಿಲ್ 7ರ ಒಳಗೆ ತೆಲಂಗಾಣವನ್ನು ಕೊರೊನಾ ಮುಕ್ತ ಮಾಡುತ್ತೇವೆ ಎಂದು ತಮ್ಮ ಮುಂದಿನ ಗುರಿಯನ್ನು ತಿಳಿಸಿದ್ದರು. ಆದರೆ, ಈಗ ಅದೆಲ್ಲ ಉಲ್ಪಾ ಆಗಿದೆ.
ದೆಹಲಿಯ ನಿಜಾಮುದ್ದೀನ್ ಮಸೀದಿಯ ಪ್ರಕರಣದಿಂದ ತೆಲಂಗಾಣ ಸರ್ಕಾರದ ಲೆಕ್ಕಾಚಾರ ಬದಲಾಗಿದೆ. ಕೊರೊನಾ ಪಾಸಿಟಿವ್ ಕೇಸ್ಗಳು ನಿಧಾನವಾಗಿ ಕಡಿಮೆ ಆಗುತ್ತಿದ್ದ ಇಲ್ಲಿ, ಈಗ ಪಾಸಿಟಿವ್ ಕೇಸ್ಗಳು ಡಬಲ್ ಆಗಿದೆ. ಕೊರೊನಾ ಪ್ರಕರಣ ಇಳಿಕೆ ಆಗುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿದ್ದ ಅಲ್ಲಿನ ಸರ್ಕಾರ ಮತ್ತೆ ತಲೆ ಕೆಡಿಸಿಕೊಂಡಿದೆ.
ಇನ್ನೊಂದೆ ವಾರದಲ್ಲಿ ತೆಲಂಗಾಣ ಕೊರೊನಾ ಮುಕ್ತವಾಗಲಿದೆ ಎಂದ ಸಿಎಂ
ಮಾರ್ಚ್ 30ರ ವೇಳೆಗೆ ತೆಲಂಗಾಣ 58 ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ಹೊಂದಿತ್ತು. 11 ರೋಗಿಗಳು ಅಂದು ಡಿಸ್ಚಾರ್ಜ್ ಆಗಿದ್ದರು. ಕೊರೊನಾ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಇನ್ನೊಂದು ವಾರದಲ್ಲಿ ಕೊರೊನಾವನ್ನು ಹೊಡೆದೊಡಿಸುವ ಭರವಸೆಯನ್ನು ಕೆ ಚಂದ್ರಶೇಖರ್ ರಾವ್ ವ್ಯಕ್ತಪಡಿಸಿದ್ದರು. ಆದರೆ, ಈಗ ಅಲ್ಲಿನ ವಾತಾವರಣ ಪೂರ ಬದಲಾಗಿಬಿಟ್ಟಿದೆ.
58 ರಿಂದ 158ಕ್ಕೆ ಏರಿಕೆ
ತೆಲಂಗಾಣದಲ್ಲಿ 70 ಪಾಸಿಟಿವ್ ಕೇಸ್ಗಳು ಇದ್ದವು. ವಾರದ ಹಿಂದೆ ಅದು 58ಕ್ಕೆ ಇಳಿದಿತ್ತು. ಇದೇ ರೀತಿ ನಿಧಾನವಾಗಿ ಪಾಸಿಟಿವ್ ಪ್ರಕರಣಗಳನ್ನು ಕಡಿಮೆ ಮಾಡಿಕೊಂಡು ಬರುವ ಪ್ಲಾನ್ ಇತ್ತು. ಆದರೆ, ಈಗ ಎಲ್ಲವೂ ಉಲ್ಪಾ ಆಗಿದೆ. 58 ರಿಂದ 158ಕ್ಕೆ ಪಾಸಿಟಿವ್ ಕೇಸ್ಗಳು ಏರಿಕೆ ಆಗಿವೆ. ಏಪ್ರಿಲ್ 7ರ ಒಳಗೆ ಕೊರೊನಾ ಮುಕ್ತ ತೆಲಂಗಾಣ ಮಾಡುವ ಕೆ ಚಂದ್ರಶೇಖರ್ ರಾವ್ ಕನಸು ಭಗ್ನವಾಗಿದೆ.
ಕ್ವಾರಂಟೈನ್ ಮುಗಿಸುವವರ ಪಟ್ಟಿ ಹೀಗಿತ್ತು
ಮಾರ್ಚ್ 30 ರಂದು, 1,899 ಜನರಿಗೆ, ಮಾರ್ಚ್ 31 ರಂದು 1,440 ಜನರಿಗೆ, ಏಪ್ರಿಲ್ 1 ರಂದು 1,461 ಜನರಿಗೆ, ಏಪ್ರಿಲ್ 2 ರಂದು 1,887 ಜನರಿಗೆ, ಏಪ್ರಿಲ್ 3 ರಂದು 1,476 ಜನರಿಗೆ, ಏಪ್ರಿಲ್ 3 ರಂದು 1,456 ಜನರಿಗೆ, ಏಪ್ರಿಲ್ 4 ರಂದು 1,453 ಜನರಿಗೆ, ಏಪ್ರಿಲ್ 5 ರಂದು 1,914 ಜನರಿಗೆ, 454 ಏಪ್ರಿಲ್ 6 ಮತ್ತು ಏಪ್ರಿಲ್ 7 ರಂದು 397 ಜನರಿಗೆ ಕ್ವಾರಂಟೈನ್ ಮುಗಿಯಲಿದೆ ಎಂದು ವಾರದ ಹಿಂದೆ ಕೆ ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
ತೆಲಂಗಾಣದ ಮೇಲೆ ದೆಹಲಿ ಘಟನೆ ಪರಿಣಾಮ
ದೆಹಲಿಯಲ್ಲಿ ಆದ ನಿಜಾಮುದ್ದೀನ್ ಮಸೀದಿ ಪ್ರಕರಣ ದೊಡ್ಡ ಮಟ್ಟದಲ್ಲಿ ತೆಲಂಗಾಣದ ಮೇಲೆ ಪರಿಣಾಮ ಬೀರಿದೆ. ನಿಜಾಮುದ್ದೀನ್ ಪ್ರದೇಶದಲ್ಲಿರುವ ಮಸೀದಿಗೆ ತೆರಳಿದ್ದ ತೆಲಂಗಾಣದ 6 ಮಂದಿ ಕೊರೊನಾ ವೈರಸ್ನಿಂದ ಮೃತಪಟ್ಟಿದ್ದಾರೆ. ತಬ್ಲೀಗ್ ಜಮಾತ್ ಸಭೆಯಿಂದ ಅನೇಕ ಮಂದಿ ತೆಲಂಗಾಣಕ್ಕೆ ಮರಳಿದ್ದಾರೆ. ಅವರ ಮೇಲೆ ನಿಗಾ ಇಡಲಾಗಿದೆ.
ಕರ್ನಾಟಕಕ್ಕಿಂತ ಹೆಚ್ಚು ಪಾಸಿಟಿವ್ ಕೇಸ್
ಹಾಗೆ ನೋಡಿದರೆ, ವಾರಗಳ ಹಿಂದೆ ತೆಲಂಗಾಣದಲ್ಲಿ ಕರ್ನಾಟಕ, ಕೇರಳ, ಆಂಧ್ರ ಪ್ರದೇಶಗಳಿಗಿಂತ ಕಡಿಮೆ ಪಾಸಿಟಿವ್ ಕೇಸ್ಗಳು ಇತ್ತು. ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ತೆಲಂಗಾಣ ಬಹು ಬೇಗ ಸಹಜ ಸ್ಥಿತಿಗೆ ಬರಬಹುದು ಎನ್ನುವ ಊಹೆ ಇತ್ತು. ಆದರೆ, ಆಗ ಅಲ್ಲಿನ ಪರಿಸ್ಥಿತಿ ಹಾಳಾಗಿದೆ. ಕರ್ನಾಟಕಕ್ಕಿಂತ ಹೆಚ್ಚಿನ ಪಾಸಿಟಿವ್ ಕೇಸ್ ಗಳು ಅಲ್ಲಿ ದೃಢವಾಗಿವೆ.