ಅಭ್ಯರ್ಥಿಗಳ ಪಟ್ಟಿ: ತೆಲಂಗಾಣ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ
ಹೈದರಾಬಾದ್, ನವೆಂಬರ್ 15: ಡಿಸೆಂಬರ್ ನಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ 10 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.
ಕಳೆದ ಭಾನುವಾರವಷ್ಟೇ 65 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು.
ಟಿಕೆಟ್ ಹಂಚಿಕೆಯ ನಂತರ ತೆಲಂಗಾಣ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ತೆಲಂಗಾಣ ಪ್ರದೇಶ ಕಾಂಗ್ರೆಸ್ ಕಮಿಟಿ(ಟಿಪಿಸಿಸಿ) ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ತೆಲಂಗಾಣ ಚುನಾವಣೆ: ಕೈ ಪಟ್ಟಿಯಲ್ಲಿ 10 ಮಂದಿ ಸಿಎಂ ಆಕಾಂಕ್ಷಿಗಳು
ತೆಲಂಗಾಣದಲ್ಲಿ ಟಿಡಿಪಿ ಮತ್ತು ಎಡಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿಯ ನಿರ್ಧಾರ ಕೈಗೊಂಡಿರುವ ಕಾಂಗ್ರೆಸ್ ಟಿಕೆಟ್ ಹಂಚಿಕೆಯ ವಿಷಯದಲ್ಲೂ ಈ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದೆ. ಒಟ್ಟು 119 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣದಲ್ಲಿ ಸುಮಾರು 90 ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಲಿದ್ದು, ಇನ್ನುಳಿದ ಸ್ಥಾನಗಳಿಗೆ ಮಿತ್ರಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲಿವೆ.
ಇದು ಸ್ಥಳೀಯ ಕಾಂಗ್ರೆಸ್ಸಿಗರಿಗೆ ಇಷ್ಟವಿಲ್ಲ. ಅದೂ ಅಲ್ಲದೆ ಟಿಕೆಟ್ ಹಂಚಿಕೆಯ ಸಮಯದಲ್ಲೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂಬ ಮಾತೂ ಕೇಳಿಬರುತ್ತಿದೆ.
ಮಹಾಮೈತ್ರಿ ಫಲಿಸುತ್ತಾ?
ತೆಲಂಗಾಣದಲ್ಲಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಪಕ್ಷವನ್ನು ಸೋಲಿಸುವ ಉದ್ದೇಶ ಹೊಂದಿರುವ ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷ(ಟಿಡಿಪಿ)ಗಳು ಒಂದಾಗಿವೆ. ಅಷ್ಟೇ ಅಲ್ಲ ತೆಲಂಗಾಣ ಜನ ಸಮಿತಿ(ಟಿಜೆಎಸ್), ಸಿಪಿಐ ಪಕ್ಷಗಳೂ ಕಾಂಗ್ರೆಸ್ ಜೊತೆ ಕೈಜೋಡಿಸಿವೆ. ತೆಲಂಗಾಣದ 119 ಸ್ಥಾನಗಳಲ್ಲಿ ಟಿಆರ್ ಎಸ್ ಬಹುಮತ ಪಡೆಯುವ ಸಾಧ್ಯತೆಗಳು ಹೆಚ್ಚಿದ್ದು, ಅಕಸ್ಮಾತ್ ಬಹುಮತ ಪಡೆಯುವಲ್ಲಿ ಟಿಆರ್ ಎಸ್ ವಿಫಲವಾದರೆ, ಬಿಜೆಪಿ ಅದಕ್ಕೆ ಬೆಂಬಲ ನೀಡಿದರೆ ಅಚ್ಚರಿಯಿಲ್ಲ. ಬಿಜೆಪಿ ಚುನಾವಣೆಗೂ ಮುನ್ನ ಸ್ವತಂತ್ರವಾಗಿಯೇ ಸ್ಪರ್ಧಿಸಿದರೂ, ಚುನಾವಣೆಯ ನಂತರ ಅಗತ್ಯ ಬಂದರೆ ಟಿಆರ್ ಎಸ್ ಗೆ ಬೆಂಬಲ ನೀಡಬಹುದು.
ಯಾವ ಪಕ್ಷಕ್ಕೆ ಎಷ್ಟು ಸೀಟು?
ಮಹಾಮೈತ್ರಿಕೂಟದಲ್ಲಿ ಕಾಂಗ್ರೆಸ್, ಟಿಡಿಪಿ, ಸಿಪಿಐ ಮತ್ತು ಟಿಜೆ ಎಸ್ ಪಕ್ಷಗಳಿದ್ದು, 119 ರಲ್ಲಿ 90 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ. ಇನ್ನುಳಿದ ಸ್ಥಾನಗಳಲ್ಲಿ ಟಿಡಿಪಿ 14, ಟಿಜೆಎಸ್ 8 ಮತ್ತು ಸಿಪಿಐ ಮೂರರಿಂದ ಐದು ಕ್ಷೇತ್ರಗಳಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ತೆಲಂಗಾಣ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಕಾರ್ಯಕರ್ತರ ಆಕ್ರೋಶ
ಕಾಂಗ್ರೆಸ್ ತನ್ನ ಮೂರು ಮಿತ್ರಪಕ್ಷಗಳಿಗಳ ಅಭ್ಯರ್ಥಿಗಳಿಗೂ ಚುನಾವಣೆಗೆ ನಿಲ್ಲಲು ಅವಕಾಶ ನೀಡಬೇಕಿರುವುದರಿಂದ ಹಲವರು ಟಿಕೆಟ್ ನಿಂದ ವಂಚಿತರಾಗಿದ್ದಾರೆ. ಇದರಿಂದಾಗಿ ಮೂಲ ಕಾಂಗ್ರೆಸ್ಸಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಾಕಷ್ಟು ಅಸಮಾಧಾನ ಹುಟ್ಟಿಕೊಂಡಿದೆ. ಚುನಾವಣೆಗೂ ಮುನ್ನ ಹಲವು ಬೆಳವಣಿಗೆಗಳು, ಸಂಧಾನಗಳು ನಡೆದರೂ ಅಚ್ಚರಿಯಿಲ್ಲ.
ಚುನಾವಣೆ ಎಂದು?
119 ಕ್ಷೇತ್ರಗಳ ತೆಲಂಗಾಣ ವಿಧಾನಸಭೆಗೆ ಡಿಸೆಂಬರ್ 7 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಫಲಿತಾಂಶ ಡಿಸೆಂಬರ್ 11 ರಂದು ಹೊರಬೀಳಲಿದೆ. ತೆಲಂಗಾಣದ ಮುಖ್ಯಮಂತ್ರಿಯಾಗಿದ್ದ ಕೆ ಚಂದ್ರಶೇಖರ ರಾವ್ ಅವರು ವಿಧಾನಸಭೆಯನ್ನು ವಿಸರ್ಜಿಸಿದ್ದರಿಂದ ಅವಧಿಗೂ ಮುನ್ನವೇ ಚುನಾವಣೆ ನಡೆಯುತ್ತಿದೆ.