ಶ್ರೀರೆಡ್ಡಿ ಗಲಾಟೆ: ಪವನ್ ಕಲ್ಯಾಣ್ ವಿರುದ್ಧ ದೂರು ದಾಖಲು
ಹೈದರಾಬಾದ್, ಏಪ್ರಿಲ್ 26: ನಟಿ ಶ್ರೀರೆಡ್ಡಿ ಅವರು ಕಾಸ್ಟಿಂಗ್ ಕೌಚ್ ಆರೋಪವಿರುವ ವಿಡಿಯೋವನ್ನು ಹಂಚಿಕೊಂಡಿರವ ನಟ ಪವನ್ ಕಲ್ಯಾಣ್ ಹಾಗೂ ಅವರ ಬೆಂಬಲಿಗರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಎಬಿಎನ್ ಆಂಧ್ರಜ್ಯೋತಿ ನ್ಯೂಸ್ ಚಾನೆಲ್ ದೂರು ನೀಡಿದೆ.
ನಟನೆಗೆ ಅವಕಾಶ ನೀಡಬೇಕಾದರೆ ಮಂಚಕ್ಕೇರುವಂಥ ಪರಿಸ್ಥಿತಿ ತೆಲುಗು ಚಿತ್ರರಂಗದಲ್ಲಿದೆ. ಇದಕ್ಕೆ ಹಿರಿಯ ಕಲಾವಿದರ ಬೆಂಬಲ ಸಿಕ್ಕಿದೆ ಎಂದು ನಟಿ ಶ್ರೀರೆಡ್ಡಿ ಆರೋಪಿಸಿದ್ದರು.
ಜೆಡಿಎಸ್ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ ಪವರ್ ಸ್ಟಾರ್ ಪವನ್ ಕಲ್ಯಾಣ್!
ನಟಿ ಮಾಡಿದ ಆರೋಪದ ವಿಡಿಯೋವನ್ನು ಮಾರ್ಫ್ ಮಾಡಿ ಬದಲಿ ವಿಡಿಯೋವನ್ನು ಪವನ್ ಕಲ್ಯಾಣ್ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿದ್ದಾರೆ ಎಂದು ಹೈದಾರಾಬಾದಿನ ಸಿಟಿ ಕ್ರೈಂ ಬ್ರ್ಯಾಂಚ್ ಡಿಸಿಪಿ, ಡೆಟೆಕ್ಟಿವ್ ವಿಭಾಗದ ಅವಿನಾಶ್ ಮೊಹಂತಿ ಅವರಿಗೆ ಎಬಿಎನ್ ಸುದ್ದಿ ಸಂಸ್ಥೆ ಎಚ್ ಆರ್ ಮ್ಯಾನೇಜರ್ ಬಿ ಮಹೇಂದರ್ ಅವರು ದೂರು ಸಲ್ಲಿಸಿದ್ದಾರೆ.
ದೂರು ಸ್ವೀಕರಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಮೊಹಂತಿ ಹೇಳಿದ್ದಾರೆ.
ಟಿವಿ ಚಾನೆಲ್ ಗಳಲ್ಲಿ ಕುಳಿತು ಪವನ್ ಕಲ್ಯಾಣ್ ವಿರುದ್ಧ ದನಿ ಎತ್ತಿದ್ದ ಶ್ರೀರೆಡ್ಡಿ, ಮಿಡ್ಲ್ ಫಿಂಗರ್ ತೋರಿಸಿದ್ದಲ್ಲದೆ, ಪವನ್ ಅವರ ತಾಯಿಯನ್ನು ನಿಂದಿಸಿದ್ದರು. ತನ್ನ ವಿರುದ್ಧ ನಟಿಯನ್ನು ಟಿವಿ ಮಾಧ್ಯಮಗಳು ಎತ್ತಿಕಟ್ಟುತ್ತಿವೆ ಎಂದು ಜನ ಸೇನಾ ಮುಖ್ಯಸ್ಥ ಪವನ್ ಗುಡುಗಿದ್ದರು.
ನಂತರ ಪವನ್ ಅಭಿಮಾನಿ ಎಂದು ಹೇಳಿಕೊಂಡ ಕೆಲ ವ್ಯಕ್ತಿಗಳು ದಾಂಧಲೆ ನಡೆಸಿ, ಪೊಲೀಸರ ಅತಿಥಿಗಳಾಗಿದ್ದರು.