ದೇವರಿಗೂ ಸಿಎಎ: ತಿರುಪತಿ ತಿಮ್ಮಪ್ಪ, ಶಬರಿಮಲೆ ಅಯ್ಯಪ್ಪಗೂ ಪೌರತ್ವ!
ಹೈದ್ರಾಬಾದ್, ಜನವರಿ.26: ಭಾರತದಲ್ಲಿ ಜನರಿಗಷ್ಟೇ ಅಲ್ಲ ದೇವರಿಗೂ ಪೌರತ್ವ ತಿದ್ದುಪಡಿ ಕಾಯ್ದೆ ಅನ್ವಯವಾಗುತ್ತದೆ. ದೇಶದ ದೊಡ್ಡ ದೊಡ್ಡ ದೇವಸ್ಥಾನಗಳ ದೇವರಿಗೂ ಭಾರತದ ಪೌರತ್ವವನ್ನು ನೀಡಬೇಕೆಂತೆ. ಇಂಥದೊಂದು ಬೇಡಿಕೆ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ತೆಲಂಗಾಣದ ಚಿಲ್ಕೂರು ದೇವಸ್ಥಾನದ ಬಾಲಾಜಿ ವೆಂಕಟೇಶ್ವರ ಸ್ವಾಮಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಭಾರತದ ಪೌರತ್ವವನ್ನು ನೀಡಬೇಕು ಎಂದು ದೇವಸ್ಥಾನದ ಪೂಜಾರಿ ಸಿ ಎಸ್ ರಂಗರಾಜನ್ ಮನವಿ ಮಾಡಿಕೊಂಡಿದ್ದಾರೆ.
ಮೌನ ಮುರಿದ ಸಿಎಂ, ಸಿಎಎ ವಿರುದ್ಧ ನಿರ್ಣಯ ಅಂಗೀಕಾರ ಪಕ್ಕಾ
ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಈಗಾಗಲೇ ರಾಜ್ಯ ಸರ್ಕಾರಗಳು ವಿಧಾನಸಭೆಗಳಲ್ಲಿ ನಿರ್ಣಯ ಮಂಡಿಸುತ್ತಿವೆ. ಇದರ ನಡುವೆ ದೇವಸ್ಥಾನದ ಪೂಜಾರಿ ನೀಡಿರುವ ಹೇಳಿಕೆ ಸಾಕಷ್ಟು ಸುದ್ದಿಯಾಗಿದೆ.
ತಿರುಪತಿ ತಿಮ್ಮಪ್ಪ, ಶಬರಿಮಲೆ ಅಯ್ಯಪ್ಪ ಸ್ವಾಮಿಗೂ ಪೌರತ್ವ!
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ 5(4) ವಿಧಿಯ ಪ್ರಕಾರ ದೇವರಿಗೂ ಪೌರತ್ವವನ್ನು ನೀಡಬೇಕು. ತಿರುಮಲದ ತಿರುಪತಿ ತಿಮ್ಮಪ್ಪ ಹಾಗೂ ಶಬರಿಮಲೆ ಅಯ್ಯಪ್ಪ ಸ್ವಾಮಿ ಹಾಗೂ ಕೇರಳದ ಪ್ರಸಿದ್ಧ ಪದ್ಮನಾಭಸ್ವಾಮಿ ಸೇರಿದಂತೆ ಎಲ್ಲ ದೇವರಿಗೂ ಭಾರತದ ಪೌರತ್ವ ಅನ್ವಯವಾಗಬೇಕು. ದೇವರಿಗೂ ಪೌರತ್ವವನ್ನು ನೀಡಬೇಕು ಎಂದು ಪೂಜಾರಿ ಸಿ.ಎಸ್.ರಂಗರಾಜನ್ ಪ್ರತಿಪಾದಿಸಿದ್ದಾರೆ.
ಭಾರತವು ಜಾತ್ಯಾತೀತ ರಾಷ್ಟ್ರವಾಗಿದ್ದರೂ ಸಹ ಹಿಂದೂ ದೇವಸ್ಥಾನಗಳು ಹಾಗೂ ದತ್ತಿ ಸಂಸ್ಥೆಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ನ್ಯಾಯಾಂಗದ ನಿರ್ಧಾರ ಹಾಗೂ ಸಂವಿಧಾನದ ನಿಬಂಧನೆ ನಡುವೆಯೂ ದೇವಸ್ಥಾನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.