ಹೈದರಾಬಾದ್: ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ರೈಲ್ವೇ ಹಳಿ ಮೇಲೆ ಶವವಾಗಿ ಪತ್ತೆ
ಹೈದರಾಬಾದ್, ಸೆಪ್ಟೆಂಬರ್ 16: "ಹೈದರಾಬಾದ್ನಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿ ರೈಲ್ವೇ ಹಳಿ ಮೇಲೆ ಶವವಾಗಿ ಪತ್ತೆಯಾಗಿದೆ," ಎಂದು ತೆಲಂಗಾಣ ಪೊಲೀಸ್ ಹೇಳಿದ್ದಾರೆ.
ತೆಲಂಗಾಣ ಸಚಿವ ಮಲ್ಲಾರೆಡ್ಡಿ ಎನ್ಕೌಂಟರ್ ಮಾಡುವುದಾಗಿ ಹೇಳಿಕೆ ನೀಡಿದ್ದ ಎರಡು ದಿನಗಳ ನಂತರ ಅತ್ಯಾಚಾರ ಆರೋಪಿಯ ಶವ ರೈಲ್ವೇ ಹಳಿ ಮೇಲೆ ಪತ್ತೆಯಾಗಿದೆ. ಆತ ರೈಲಿನ ಎದುರು ಜಿಗಿದು ಓಡಿಹೋಗಲು ಯತ್ನಿಸುತ್ತಿದ್ದ ವೇಳೆ ಸಾವನ್ನಪ್ಪಿದ್ದಾನೆ. ಈ ಕುರಿತು ತೆಲಂಗಾಣ ಪೊಲೀಸ್ ಮುಖ್ಯಸ್ಥರು ದೃಢಪಡಿಸಿದ್ದು, ವ್ಯಕ್ತಿಯ ದೇಹದ ಚಿತ್ರಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಎನ್ಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ್ ಸಜ್ಜನರ್ ವರ್ಗಾವಣೆ
ಮಂಗಳವಾರದಂದು ತೆಲಂಗಾಣ ಸಚಿವ ಮಲ್ಲಾರೆಡ್ಡಿ ಆರೋಪಿಯನ್ನು ಎನ್ಕೌಂಟರ್ನಲ್ಲಿ ಕೊಲ್ಲಲಾಗುವುದು ಎಂದು ಹೇಳಿದ್ದನ್ನು ನೆನಪಿಸಿಕೊಳ್ಳಬಹುದು. "ನಾವು ಅತ್ಯಾಚಾರಿ ಮತ್ತು ಕೊಲೆಗಾರನನ್ನು ಹಿಡಿಯುತ್ತೇವೆ. ಆತನನ್ನು ಹಿಡಿದ ನಂತರ ಎನ್ಕೌಂಟರ್ ನಡೆಯಲಿದೆ," ಎಂದು ಸಚಿವ ರೆಡ್ಡಿ ಹೈದರಾಬಾದ್ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.
ಬಾಲಕಿಯ ಕುಟುಂಬಸ್ಥರನ್ನು ಭೇಟಿ ಮಾಡದ ಬಗ್ಗೆ ವಿಪಕ್ಷ ನಾಯಕರು ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದ ಸಚಿವ ಮಲ್ಲಾರೆಡ್ಡಿ, "ಸಂತ್ರಸ್ಥೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಅವರಿಗೆ ಸೂಕ್ತ ಪರಿಹಾರ ನೀಡುವುದಾಗಿ ಹೇಳಿದ್ದರು. ಸದ್ಯ ಆರೋಪಿ ಎಲ್ಲಿದ್ದಾನೆಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಆತನನ್ನು ಶೀಘ್ರವೇ ಬಂಧಿಸಿ ಎನ್ಕೌಂಟರ್ ಮಾಡಲಾಗುವುದು," ಎಂದು ಹೇಳಿದ್ದರು.
ಆರಂಭದಲ್ಲಿ ಯಾದಾದ್ರಿ ಭುವನಗಿರಿ ಜಿಲ್ಲೆಯ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ತೆಲಂಗಾಣ ಪೊಲೀಸ್ ಮೂಲಗಳು ಹೇಳಿಕೊಂಡಿದ್ದವು. ಆದರೆ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದರು. ಆತನನ್ನು ಬಂಧಿಸಲು ಆಯುಕ್ತರ ಕಾರ್ಯಪಡೆಯ 15 ವಿಶೇಷ ಪೊಲೀಸ್ ತಂಡಗಳು ಶೋಧ ನಡೆಸುತ್ತಿವೆ. ಫಲಕ್ನುಮಾದಿಂದ ಸಿಸಿಟಿವಿ ಫೂಟೇಜ್ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಇದರಲ್ಲಿ ಆರೋಪಿಯು ಕ್ಯಾಪ್ ಮತ್ತು ಫೇಸ್ ಮಾಸ್ಕ್ ಧರಿಸಿರುವ ದೃಶ್ಯ ಸೆರೆಯಾಗಿದೆ ಎಂದು ತಿಳಿದುಬಂದಿತ್ತು.
ಅತ್ಯಾಚಾರ ಮತ್ತು ಕೊಲೆಯಾದ ಮಗುವಿನ ನೆರೆಯ 30 ವರ್ಷದ ವ್ಯಕ್ತಿಯ ಪತ್ತೆಗೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿ, ಪೊಲೀಸರು ಶಂಕಿತ ಆರೋಪಿ ಪಲ್ಲಕೊಂಡ ರಾಜು ಫೋಟೋವನ್ನು ಬಿಡುಗಡೆ ಮಾಡಿದ್ದರು. ಕಳೆದ ಭಾನುವಾರ ಆರೋಪಿ ಪಲ್ಲಕೊಂಡ ರಾಜು ಮನೆಯೊಳಗೆ ಆರು ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಳು ಮತ್ತು ಇದೇ ವೇಳೆ ಆತ ನಾಪತ್ತೆಯಾಗಿದ್ದನು.
ಹೈದರಾಬಾದಿನ ಸಿಂಗರೇಣಿ ಕಾಲೋನಿಯಲ್ಲಿರುವ ತನ್ನ ಮನೆಯಿಂದ ಸೆಪ್ಟೆಂಬರ್ 9ರಂದು ಬಾಲಕಿ ನಾಪತ್ತೆಯಾಗಿದ್ದಳು. ಮರುದಿನ ಆಕೆಯ ಶವವು ಪಕ್ಕದ ರಾಜು ಮನೆಯಲ್ಲಿ ಬೆಡ್ಶೀಟ್ನಲ್ಲಿ ಪತ್ತೆಯಾಗಿತ್ತು. ಶವಪರೀಕ್ಷೆಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕತ್ತು ಹಿಸುಕಿ ಸಾಯಿಸಿರುವುದು ದೃಢಪಟ್ಟಿದೆ.
ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿದ್ದವು, ಆದರೆ ಈ ಮಾಹಿತಿ ಸುಳ್ಳು ಎಂದು ತಿಳಿದುಬಂದಾಗ, ಆ ಪ್ರದೇಶದಲ್ಲಿ ಭಾರೀ ಪ್ರತಿಭಟನೆಗಳು ಮತ್ತು ಉದ್ವಿಗ್ನತೆ ಉಂಟಾಗಿತ್ತು. ಕಾಲೊನಿ ನಿವಾಸಿಗಳು ಬಾಲಕಿ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಅಪರಾಧಿ ಪೊಲೀಸರು ಗುಂಡು ಹಾರಿಸಿದ ಹಿಂದಿನ ಘಟನೆಗಳನ್ನು ಉಲ್ಲೇಖಿಸಿ ಕೆಲವರು ಎನ್ಕೌಂಟರ್ಗೆ ಬೇಡಿಕೆ ಇಟ್ಟಿದ್ದರು.
ಈ ಸಂದರ್ಭದಲ್ಲಿ ತೆಲಂಗಾಣ ಸಚಿವ ಕೆ.ಟಿ. ರಾಮರಾವ್, ಆರೋಪಿಯನ್ನು ಬಂಧಿಸಲಾಗಿದೆ ಎಂದು ಟ್ವೀಟ್ ಮೂಲಕ ಘೋಷಿಸಿದ್ದರು. ನಂತರ ಇದು ಸುಳ್ಳು ಎಂದು ಗೊತ್ತಾದ ಮೇಲೆ ಹಿಂದಿನ ಟ್ವೀಟ್ ಅನ್ನು ಹಿಂಪಡೆದು, ಆರೋಪಿಯನ್ನು ಹಿಡಿಯಲು ಸಾರ್ವಜನಿಕರ ಸಹಕಾರವನ್ನು ಕೋರಿದರು.
"ನನ್ನ ಟ್ವೀಟ್ ಅನ್ನು ಸರಿಪಡಿಸಲು ಇಚ್ಛಿಸುತ್ತೇನೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ನನಗೆ ತಪ್ಪು ಮಾಹಿತಿ ನೀಡಲಾಯಿತು. ತಪ್ಪಾದ ಹೇಳಿಕೆಗೆ ವಿಷಾದಿಸುತ್ತೇನೆ. ಅಪರಾಧಿ ತಲೆಮರೆಸಿಕೊಂಡಿದ್ದಾನೆ ಮತ್ತು ಹೈದರಾಬಾದ್ ಪೊಲೀಸರು ಆತನನ್ನು ಪತ್ತೆ ಹಚ್ಚಿದ್ದಾರೆ ತ್ವರಿತವಾಗಿ ನ್ಯಾಯ ದೊರಕಿಸಿ ಕೊಡಲಾಗುವುದು," ಎಂದು ಸಚಿವ ಕೆ.ಟಿ. ರಾಮರಾವ್ ತಮ್ಮ ಹಿಂದಿನ ಟ್ವೀಟ್ನ ಸ್ಕ್ರೀನ್ಶಾಟ್ನೊಂದಿಗೆ ಪೋಸ್ಟ್ ಮಾಡಿದ್ದಾರೆ.
Recommended Video
ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆಗೆ ಹಲವು ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಚಲನಚಿತ್ರ ತಾರೆಯರು ಆಕ್ರೋಶ ಮತ್ತು ಆಘಾತವನ್ನು ವ್ಯಕ್ತಪಡಿಸಿದ್ದರು ಮತ್ತು ಬಾಲಕಿ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯಕ್ಕಾಗಿ ಮನವಿ ಮಾಡಿದ್ದರು.