ಹಿಂದೂ-ಮುಸ್ಲಿಮರನ್ನು ವಿಭಜಿಸುತ್ತಿರುವುದು ಜಾನುವಾರುಗಳು: ಮೇನಕಾ ಗಾಂಧಿ
ಹೈದರಾಬಾದ್, ಆಗಸ್ಟ್ 25: ಪ್ರಾಣಿಗಳ ಮಾಂಸದಿಂದ ಮಿಥೇನ್ ಬಿಡುಗಡೆಯಾಗುವುದರಿಂದ ಜನರು ಮಾಮೂಲಿ ಮಾಂಸವನ್ನು ಸೇವಿಸುವ ಬದಲು ಪ್ರಯೋಗಾಲಯದಲ್ಲಿ ಬೆಳೆಸಿದ ಮಾಂಸವನ್ನು ಸೇವಿಸಬೇಕು ಎಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.
ಮಿಥೇನ್ ಜಾಗತಿಕ ತಾಪಮಾನಕ್ಕೆ ಕಾರಣವಾಗುವ ಪ್ರಮುಖ ಅನಿಲ. ಜಾಗತಿಕ ತಾಪಮಾನವೇ ಕೇರಳದಲ್ಲಿ ಸಂಭವಿಸಿದ ಪ್ರವಾಹ, ತಮಿಳುನಾಡಿನ ಸುನಾಮಿ ಮತ್ತು ಮಂಜುಗಡ್ಡೆಯ ಕರುಗುವಿಕೆಯಂತಹ ಸನ್ನಿವೇಶಗಳಿಗೆ ಕಾರಣ. ನಾವು ಕಾಡನ್ನು ಕಳೆದುಕೊಳ್ಳುತ್ತಿದ್ದೇವೆ. ಜಾನರುವಾರುಗಳು ಇದ್ದಲ್ಲಿ ಕೇರಳದಂತೆ ಇನ್ನಷ್ಟು ಬಿಕ್ಕಟ್ಟುಗಳು ಉಂಟಾಗುತ್ತವೆ ಎಂದು ಅವರು ಹೇಳಿದರು.
ಕೇರಳ ಪ್ರವಾಹ: ಹವಾಮಾನ ವೈಪರೀತ್ಯದ ಗಂಡಾಂತರದ ಮುನ್ಸೂಚನೆಯೇ?
ಮಾಂಸ ಉತ್ಪಾದನೆಗೆ ನಾವು ಪ್ರಾಣಿಗಳ ಮಾಂಸದ ಮೇಲಿನ ಅವಲಂಬನೆ ಕಡಿಮೆ ಮಾಡಿದರೆ ಮಿಥೇನ್ ಪ್ರಮಾಣವೂ ತಗ್ಗುತ್ತದೆ.
ಜಾನುವಾರುಗಳು ಹಿಂದೂಗಳು ಮತ್ತು ಮುಸ್ಲಿಮರನ್ನು ವಿಭಜಿಸುತ್ತಿವೆ. ಜನರು ಮಾಂಸವನ್ನು ತಿನ್ನುತ್ತಿಲ್ಲ. ಮಾಂಸವೇ ಜನರನ್ನು ತಿನ್ನುತ್ತಿದೆ ಎಂದು ಮೇನಕಾ ಹೇಳಿದರು.
ಪ್ರಾಣಿಗಳಿಂದಲೇ ಶೇ 70ರಷ್ಟು ಮಿಥೇನ್ ಉತ್ಪತ್ತಿಯಾಗುತ್ತದೆ. ಕೇವಲ ಶೇ 30 ಮಿಥೇನ್ ಕಲ್ಲಿದ್ದಲು ಮತ್ತು ಅಕ್ಕಿ ಬೆಳೆಯುವುದರಿಂದ ಉತ್ಪತ್ತಿಯಾಗುತ್ತದೆ. ನಾವು ಮಾಂಸ ಸೇವನೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. 2008ರಲ್ಲಿ ಅತ್ಯಧಿಕ ಮಾಂಸ ಬಳಕೆಯಾಗಿತ್ತು. ಈಗ ಅದರ ಪ್ರಮಾಣ ದುಪ್ಪಟ್ಟಾಗಿದೆ.
ಹವಾಮಾನ ವೈಪರೀತ್ಯ, ಮೀನುಗಾರರ ಬದುಕಿಗೇ ಲಂಗರು!
ಭಾರತ ಮತ್ತು ಚೀನಾಗಳಲ್ಲಿ ಮಾಂಸ ಸೇವಿಸುವವರ ಜನಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಮಾಂಸ ಸೇವನೆಯು ನಮಗೇನು ಮಾಡುತ್ತಿದೆ? ಸಸ್ಯಾಹಾರಿ ಪ್ರಾಣಿಯು ಹುಲ್ಲನ್ನು ತಿಂದಾಗ ಅವು ಮಿಥೇನ್ ಉತ್ಪತ್ತಿ ಮಾಡುತ್ತವೆ. ಇದು ಅರಣ್ಯಕ್ಕೆ ಹಾನಿಮಾಡುತ್ತದೆ ಮತ್ತು ಹವಾಮಾನ ಬದಲಾವಣೆ ಮೇಲೆ ಪರಿಣಾಮ ಬೀರುತ್ತದೆ.
ಭಾರತ, ಚೀನಾ ಮತ್ತು ಬ್ರೆಜಿಲ್ಗಳು ಜಾಗತಿಕ ವೇದಿಕೆಯಲ್ಲಿ ಮಿಥೇನ್ ಕುರಿತು ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಪಶ್ಚಿಮದ ದೇಶಗಳು ಇದಕ್ಕೆ ಅವಕಾಶ ನೀಡುತ್ತಿವೆ ಎಂದರು.
ನಾವು ಪ್ರಯತ್ನಿಸಿದರೂ ಜನರನ್ನು ಸಸ್ಯಾಹಾರಿಗಳನ್ನಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. ಕೆಲವು ದಿನ ಸಸ್ಯಾಹಾರಿಗಳಾಗಿರುತ್ತಾರೆ. ಬಳಿಕ ತಮ್ಮ ಹಳೆಯ ಅಭ್ಯಾಸಕ್ಕೆ ಮರಳುತ್ತಾರೆ ಎಂದು ಮೇನಕಾ ಹೇಳಿದರು.