ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿ ಕರೆ ಮಾಡಿ ಸ್ನೇಹಿತನ ಬಳಿ ಆಡಿದ ಕೊನೆಯ ಮಾತು
ಹೈದರಾಬಾದ್, ಅಕ್ಟೋಬರ್ 16: ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿ ಸ್ನೇಹಿತನಿಗೆ ಕೊನೆಯದಾಗಿ ಕರೆ ಮಾಡಿದ್ದು, ಮರುದಿನ ಶವವಾಗಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಕಳೆದ 103 ವರ್ಷಗಳಿಂದ ಸುರಿದಿರದ ಮಳೆ ತೆಲಂಗಾಣದಲ್ಲಿ ಈ ಬಾರಿ ಸುರಿದಿದೆ.50ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ವ್ಯಕ್ತಿಯೊಬ್ಬ ಪ್ರವಾಹದಲ್ಲಿ ಸಿಲುಕಿದ್ದ, ಕೊನೆಯದಾಗಿ ಸ್ನೇಹಿತನಿಗೆ ಕರೆ ಮಾಡಿ 'ನಾನು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದೇನೆ, ಯಾರನ್ನಾದರೂ ಸಹಾಯಕ್ಕೆ ಕಳುಹಿಸು' ಎಂದು ಹೇಳಿದ್ದ.
ಪ್ರವಾಹದಂಥಾ ಮಳೆಗೆ ಸಿಲುಕಿ ತೆಲಂಗಾಣದಲ್ಲಿ 30 ಮಂದಿ ಸಾವು
ಒಂದು ಮರವಿದೆ ಅದರ ಬಲದೊಂದಿಗೆ ಕಾರು ನಿಂತಿದೆ, ಅದು ತಪ್ಪಿಸದರೆ ನೀರಿನಲ್ಲಿ ತೇಲಿ ಹೋಗುತ್ತೇನೆ. ಕಾರಿನೊಳಗೆ ನೀರು ತುಂಬುತ್ತಿದೆ, ಹೆಚ್ಚು ಹೊತ್ತು ಕಾರಿನಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದ.
ವ್ಯಕ್ತಿಯನ್ನು ವೆಂಕಟೇಶ್ ಎಂದು ಗುರುತಿಸಲಾಗಿದೆ. ಆತನ ಸ್ನೇಹಿತ ಯಾವುದಾದರೂ ಕಾಂಪೌಂಡ್ ಗೋಡೆಯನ್ನು ಹತ್ತು ಅಥವಾ ಮರವನ್ನೇ ಹತ್ತಿ ಕುಳಿತುಕೋ ಎಂದು ಸಲಹೆ ನೀಡಿದ್ದರು.
ಹೌದು ನನಗೆ ಕಾಂಪೌಂಡ್ ಕಾಣಿಸುತ್ತಿದೆ ಆದರೆ ಕಾರಿನಿಂದ ಕೆಳಗಿಳಿದರೆ ನೀರಿನಲ್ಲಿ ಕೊಚ್ಚಿ ಹೋಗುವುದಂತೂ ಸತ್ಯ ನಾನು ಅಸಹಾಯಕನಾಗಿದ್ದೇನೆ, ಕಾರು ಕೂಡ ಮರವನ್ನು ಬಿಟ್ಟು ಚಲಿಸಲು ಆರಂಭಿಸಿದೆ ಎಂದು ತಿಳಿಸಿದ್ದರು.
ಧೈರ್ಯವಾಗಿರುವ ಏನೂ ಆಗುವುದಿಲ್ಲ
ಸ್ನೇಹಿತನಿಗೆ ಧೈರ್ಯವಾಗಿರು ನಿನಗೆ ಏನೂ ಆಗುವುದಿಲ್ಲ ಎಂದು ಹೇಳಿದ್ದರು. ಒಂದು ನಿಮಿಷ 44 ಸೆಕೆಂಡುಗಳಲ್ಲಿ ಕರೆ ಕಟ್ ಆಗಿತ್ತು. ಮರುದಿನ ಶವವಾಗಿ ಪತ್ತೆಯಾಗಿದ್ದ. ಹೈದರಾಬಾದಿನಲ್ಲಿ 31ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ತೆಲಂಗಾಣದಲ್ಲಿ 50 ಮಂದಿ ಮೃತಪಟ್ಟಿದ್ದಾರೆ.
ವರುಣನ ರೌದ್ರಾವತಾರ
ರೌದ್ರಾವತಾರ ಎತ್ತಿರುವ ವರುಣ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದ ನಂತರ ಮಹಾರಾಷ್ಟ್ರದಲ್ಲೂ ಮರಣ ಮೃದಂಗ ಬಾರಿಸಿದ್ದಾನೆ. ತೆಲಂಗಾಣ ಮತ್ತು ಮಹಾರಾಷ್ಟ್ರಗಳಲ್ಲಿ ಎರಡು ದಿನಗಳ ಅವಧಿಯಲ್ಲಿ ಮಳೆ ಸಂಬಂಧಿ ಅನಾಹುತಗಳಲ್ಲಿ 77 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ತೆಲಂಗಾಣದಲ್ಲಿ 50 ಹಾಗೂ ಮಹಾರಾಷ್ಟ್ರದಲ್ಲಿ 27 ಜನ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ 7 ಜನ ಪ್ರಾಣ ಕಳೆದುಕೊಂಡಿದ್ದಾರೆ.
ಮಹಾರಾಷ್ಟ್ರ, ಪುಣೆಯಲ್ಲೂ ಮಳೆ
ಪಶ್ಚಿಮ ಮಹಾರಾಷ್ಟ್ರದ ಸೊಲ್ಲಾಪುರ, ಸಾಂಗ್ಲಿ ಮತ್ತು ಪುಣೆ ಜಿಲ್ಲೆಗಳಲ್ಲಿ ಸಾಕಷ್ಟು ಸಾವು-ನೋವು ಸಂಭವಿಸಿದೆ. ಸೊಲ್ಲಾ ಪುರವೊಂದರಲ್ಲೇ 14 ಮಂದಿ ಪ್ರಾಣಬಿಟ್ಟಿದ್ದಾರೆ. ಉಜಾನಿ ಅಣೆಕಟ್ಟೆಯ ನೀರನ್ನು ನೈರಾ ಮತ್ತು ಭೀಮಾ ನದಿಗಳಿಗೆ ಬಿಟ್ಟ ಪರಿಣಾಮ ನದಿ ಪಾತ್ರದಲ್ಲಿ ಭಾರೀ ಪ್ರವಾಹ ಸೃಷ್ಟಿಯಾಗಿದೆ. ಡ್ಯಾಂನಿಂದ 2.3 ಲಕ್ಷ ಕ್ಯುಸೆಕ್ ನೀರು ಬಿಡಲಾಗಿದ್ದು, ಭೀಮಾ ತೀರದ ಜನತೆಗೆ ಜಾಗ್ರತೆ ವಹಿಸಲು ಸೂಚಿಸಲಾಗಿದೆ.
ಅಣೆಕಟ್ಟುಗಳು ಭರ್ತಿಯಾಗಿವೆ
ಉತ್ತರ ಕರ್ನಾಟಕದಲ್ಲಿ ಕೃಷ್ಣಾ, ಭೀಮಾ, ಮಲಪ್ರಭಾ, ಕಾಗಿಣಾ, ಡೋಣಿ, ತುಂಗಾ, ಭದ್ರಾ, ಹೇಮಾವತಿ ಸಹಿತ ಪ್ರಮುಖ ನದಿಗಳು ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮತ್ತೆ ಉಕ್ಕಿ ಹರಿಯುತ್ತಿವೆ. ನೂರಾರು ಮನೆಗಳು ಧರೆಗುರುಳಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಸೇತುವೆಗಳು ಮುಳುಗಿದ್ದರಿಂದ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಬಳಿ ಕೊಡದಮನೆಯ ಹೊಳೆಗೆ ಕಾರು ಉರುಳಿ ಬಿದ್ದು ನಾಲ್ವರ ಸಹಿತ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.