ತೆಲಂಗಾಣದ ರಾಜಕೀಯ ಬಿರುಗಾಳಿ ಸುದ್ದಿಗೆ ತುಪ್ಪ ಸುರಿದ ಸಚಿವ: ಸಿಎಂ ಕೆಸಿಆರ್ ಪದತ್ಯಾಗ?
ಗ್ರೇಟರ್ ಹೈದರಾಬಾದ್ ಚುನಾವಣೆಯ ನಂತರ ತೆಲಂಗಾಣ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ ಎನ್ನುವ ಸುದ್ದಿಗೆ ಅಲ್ಲಿನ ಸಚಿವರೊಬ್ಬರು ನೀಡಿರುವ ಹೇಳಿಕೆ ಇನ್ನಷ್ಟು ತುಪ್ಪ ಸುರಿದಿದೆ.
ಇದು ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ ಎಸ್) ಪಕ್ಷಕ್ಕೆ ಸೇರಿದ ಸುದ್ದಿಯಾಗಿದ್ದು, ಸತತ ಆರು ವರ್ಷಗಳಿಂದ ಮುಖ್ಯಮಂತ್ರಿ ಹುದ್ದೆ ನಿಭಾಯಿಸುತ್ತಿರುವ ಕೆ.ಚಂದ್ರಶೇಖರ ರಾವ್ (ಕೆಸಿಆರ್), ಆ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಂಖ್ಯೆಗೆ ಕರೆ ಮಾಡಿ 20 ಸಾವಿರ ಲೀಟರ್ ಉಚಿತ ಕುಡಿಯುವ ನೀರು ಗಳಿಸಿ
ಇನ್ನೊಂದೆರಡು ತಿಂಗಳಲ್ಲಿ ಕೆಸಿಆರ್ ಅವರು ಸಿಎಂ ಸ್ಥಾನವನ್ನು 'ತ್ಯಾಗ'ಮಾಡಲಿದ್ದು, ಅವರ ಪುತ್ರ ಸಚಿವ ಕೆ.ಟಿ.ರಾಮರಾವ್ ಅವರು ತೆಲಂಗಾಣದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ತೆಲಂಗಾಣದಲ್ಲಿ 2023ರಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಪಕ್ಷವನ್ನು ಮತ್ತಷ್ಟು ಸುಧೃಡಗೊಳಿಸಲು ಮಗನಿಗೆ ಪಟ್ಟ ಕಟ್ಟಲು ಕೆಸಿಆರ್ ನಿರ್ಧರಿಸಿದ್ದಾರೆ. ಹೈದರಾಬಾದ್ ಪಾಲಿಕೆ ಚುನಾವಣಾ ಫಲಿತಾಂಶ ಈ ನಿರ್ಧಾರಕ್ಕೆ ಬರಲು ಕಾರಣ ಎಂದು ಹೇಳಲಾಗುತ್ತಿದೆ. ರಾಷ್ಟ್ರ ರಾಜಕಾರಣಕ್ಕೆ ಕೆಸಿಆರ್, ಮುಂದೆ ಓದಿ..
ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ
ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತೆಲಂಗಾಣದ ಆಡಳಿತಾರೂಢ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಿಜೆಪಿ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಪೈಪೋಟಿ ನೀಡಿತ್ತು. ಬಿಜೆಪಿಯನ್ನು ತಡೆಯುವುದು ಹೇಗೆ ಎಂದು ಇಡೀ ದೇಶಕ್ಕೆ ತೋರಿಸಿಕೊಟ್ಟಿದ್ದೇವೆ ಎಂದು ಕೆಸಿಆರ್ ಪಕ್ಷದವರು ಹೇಳಿದ್ದರೂ, ಮುಂದಿನ ದಿನಗಳಲ್ಲಿ ಬಿಜೆಪಿಯ ಬೆಳವಣಿಗೆ ತಡೆಯಲು ತಮ್ಮ ಮಗ ಕೆ.ಟಿ.ರಾಮರಾವ್ ಗೆ ಪಕ್ಷ ಸಂಘಟನೆ ಮತ್ತು ಸಿಎಂ ಹುದ್ದೆಯ ಜವಾಬ್ದಾರಿಯನ್ನು ನೀಡಲು ಕೆಸಿಆರ್ ನಿರ್ಧರಿಸಿದ್ದಾರೆ ಎನ್ನುವ ಸುದ್ದಿಯಿದೆ.
ತಲಸಾನಿ ಶ್ರೀನಿವಾಸ ಯಾದವ್
ಇದಕ್ಕೆ ಪೂರಕ ಎನ್ನುವಂತೆ ರಾಜ್ಯದ ಪಶುಸಂಗೋಪನಾ ಖಾತೆಯ ಸಚಿವ ತಲಸಾನಿ ಶ್ರೀನಿವಾಸ ಯಾದವ್, "ಕೆಟಿಆರ್ ಅವರನ್ನು ಮುಖ್ಯಮಂತ್ರಿ ಮಾಡುವ ವಿಚಾರದಲ್ಲಿ ಸಿಎಂ ಕೆಸಿಆರ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರು ಸಿಎಂ ಆದರೆ ತಪ್ಪೇನು? ಕಳೆದ ಆರು ವರ್ಷಗಳಲ್ಲಿ ಕೆಸಿಆರ್ ತೆಗೆದುಕೊಂಡ ಎಲ್ಲಾ ನಿರ್ಧಾರವೂ ಸರಿಯಾಗಿಯೇ ಇತ್ತು" ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಸಚಿವರು, ಅಧಿಕಾರಿಗಳ ಜೊತೆ ಕೆಟಿಆರ್ 8ಗಂಟೆಗಳ ಕಾಲ ಮೀಟಿಂಗ್
ಕೆಲವು ತಿಂಗಳುಗಳ ಹಿಂದೆ ಎಲ್ಲಾ ಸಚಿವರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಕೆಟಿಆರ್ ಸತತ ಎಂಟು ಗಂಟೆಗಳ ಕಾಲ ಮೀಟಿಂಗ್ ನಡೆಸಿದ್ದರು. ಆ ವೇಳೆಯೇ, ಇವರು ಮುಂದಿನ ಅವಧಿಗೆ ಸಿಎಂ ಆಗಲಿದ್ದಾರೆ ಎನ್ನುವ ಬಲವಾದ ಸುದ್ದಿ ಹರಿದಾಡುತ್ತಿತ್ತು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ, ಕೆಟಿಆರ್ ಅವರನ್ನು ಸಿಎಂ ಮಾಡಿ, ರಾಷ್ಟ್ರ ರಾಜಕಾರಣದತ್ತ ಮುಖ ಮಾಡಲು ಕೆಸಿಆರ್ ಕಾರ್ಯತಂತ್ರ ರೂಪಿಸಿಕೊಂಡು ಬರುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು.
ಕೆಸಿಆರ್ ಸಿಎಂ ಸ್ಥಾನದಿಂದ ಕೆಳಗಿಳಿದು ಕೆಟಿಆರ್ ಸಿಎಂ ಪಟ್ಟಕ್ಕೇರುವ ಸಾಧ್ಯತೆ
ಟಿಆರ್ ಎಸ್ ಪಕ್ಷದ ಶಾಸಕರಾದ ಶಕೀಲ್ ಅಹ್ಮದ್ ಮಾತನಾಡುತ್ತಾ, "ಮುಂದಿನ ಚುನಾವಣೆಗೆ ಈಗಿಂದಲೇ ಕಾರ್ಯತಂತ್ರ ರೂಪಿಸಬೇಕಿದೆ, ಹಾಗೂ ಮುಂದಿನ ಚುನಾವಣೆಯನ್ನು ನಾವು ಕೆಟಿಆರ್ ಸಾರಥ್ಯದಲ್ಲಿ ಎದುರಿಸುವುದೇ ಸೂಕ್ತ. ಕೆಸಿಆರ್ ಅವಧಿಯಲ್ಲಿ ರಾಜ್ಯ ತುಂಬಾ ಅಭಿವೃದ್ದಿಯನ್ನು ಕಂಡಿದೆ. ಮುಂದೆ ಕೆಟಿಆರ್ ಸಿಎಂ ಆದರೆ, ರಾಜ್ಯದ ಅಭಿವೃದ್ದಿಗೆ ಇನ್ನಷ್ಟು ಸಹಾಯಕಾರಿಯಾಗಲಿದೆ" ಎಂದು ಹೇಳಿದ್ದಾರೆ. ಮುಂದಿನ ತಿಂಗಳಲ್ಲಿ ಅಂದರೆ ಫೆಬ್ರವರಿಯಲ್ಲಿ ಕೆಸಿಆರ್ ಸಿಎಂ ಸ್ಥಾನದಿಂದ ಕೆಳಗಿಳಿದು ಕೆಟಿಆರ್ ಸಿಎಂ ಪಟ್ಟಕ್ಕೇರುವ ಸಾಧ್ಯತೆಯಿಲ್ಲದಿಲ್ಲ.