'ಪವನ್ ಕಲ್ಯಾಣ್ ಆಂಧ್ರ ಸಿಎಂ ಆಗುವುದನ್ನು ನೋಡುವಾಸೆ'
ಹೈದರಾಬಾದ್, ಮಾರ್ಚ್ 15: 'ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ರನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ನೋಡುವಾಸೆ' ಎಂದು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ, ಬಿಎಸ್ ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ ಹಾಗೂ ಜನಸೇನಾ ಪಕ್ಷದ ನಡುವೆ ಚುನಾವಣಾ ಪೂರ್ವ ಮೈತ್ರಿಯನ್ನು ಇಂದು ಘೋಷಿಸಲಾಗಿದೆ. ಜಂಟಿಯಾಗಿ ಪ್ರಚಾರ ಕಾರ್ಯ ಆರಂಭಗೊಳ್ಳಲಿದೆ ಎಂದು ಮಾಯಾವತಿ ಘೋಷಿಸಿದರು. ಸಮಾರಂಭದಲ್ಲಿ ಮಾತನಾಡಿದ ಪವನ್ ಕಲ್ಯಾಣ್' ಬೆಹನ್ ಜೀ ಮಾಯಾವತಿ ಜೀ ಅವರನ್ನು ಪ್ರಧಾನಮಂತ್ರಿಯಾಗಿ ಕಾಣಬೇಕಿದೆ. ಇದು ನಮ್ಮೆಲ್ಲರ ಆಶಯ ಎಂದರು.
ಜನಸೇನಾ ಪ್ರಣಾಳಿಕೆ: ವಾರ್ಷಿಕ 10 ಲಕ್ಷ ಉದ್ಯೋಗ ಪವನ್ ಭರವಸೆ
2014ರಿಂದ ಸಕ್ರಿಯ ರಾಜಕೀಯದಲ್ಲಿರುವ ಜನ ಸೇನಾ ಪಕ್ಷವು ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಪವನ್ ಕಲ್ಯಾಣ್ ಅವರು ಈಗಾಗಲೇ 4 ಲೋಕಸಭಾ ಹಾಗೂ 32 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಲೋಕಸಭೆ ಚುನಾವಣೆ 2019ಗಾಗಿ ತನ್ನ ಪ್ರಣಾಳಿಕೆಯನ್ನು ಪ್ರಕಟಿಸಿದೆ. ವಾರ್ಷಿಕವಾಗಿ 10 ಲಕ್ಷ ಉದ್ಯೋಗ ಸೃಷ್ಟಿ, ಎಲ್ಲರಿಗೂ ಉಚಿತ ಆರೋಗ್ಯ ಸೇವೆ ನೀಡುವುದು ಪ್ರಣಾಳಿಕೆಯ ಮುಖ್ಯಾಂಶವಾಗಿದೆ. ಆಂಧ್ರಪ್ರದೇಶದೆಲ್ಲೆಡೆ ಪವನ್ ಅವರು ಚುನಾವಣಾ ಪ್ರಚಾರ ಆರಂಭಿಸಿದ್ದು, ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುವುದಾಗಿ ಹೇಳಿದ್ದಾರೆ. ಮಹಿಳೆಯರಿಗೆ ಶಾಸಕಾಂಗದಲ್ಲಿ ಶೇ 33ರಷ್ಟು ಮೀಸಲಾತಿ, ಮುಸ್ಲಿಂ ಸಮುದಾಯದವರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡುವುದಾಗಿ ಘೋಷಿಸಿದರು.