ಬಿಜೆಪಿ ರಾಷ್ಟ್ರೀಯ ಪಕ್ಷವಲ್ಲ ಎಂದಿದ್ದ ತೆಲಂಗಾಣ ಸಚಿವ ಕೆಟಿಆರ್ಗೆ ಸಿ.ಟಿ ರವಿ ತಿರುಗೇಟು
ತೆಲಂಗಾಣ, ಏಪ್ರಿಲ್ 27 : ಬಿಜೆಪಿ ರಾಷ್ಟ್ರೀಯ ಪಕ್ಷವಲ್ಲ ಎಂದು ಹೇಳಿಕೆ ಕೊಟ್ಟಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪುತ್ರ, ಕೆಟಿ ರಾಮರಾವ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಿ.ಟಿ ರವಿ ತೆಲಂಗಾಣ ವಿಧಾನಸಭೆ ಚುನಾವಣೆ ಬಳಿಕ ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ನಿಶ್ಚಿತ ಎಂದಿದ್ದಾರೆ. ಅಲ್ಲದೆ ದೇಶದ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಪ್ರಬಲ ಆಸ್ತಿತ್ವವನ್ನು ಹೊಂದಿದೆ, ತೆಲಂಗಾಣದಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಟಿಆರ್ಎಸ್ ಪಕ್ಷವನ್ನ ಸೋಲಿಸಿ ಬಿಜೆಪಿ ಸರ್ಕಾರವನ್ನು ರಚಿಸುತ್ತೇವೆ ಎಂದು ಹೇಳಿದ್ದಾರೆ.
ಇಂದು ಭಾರತದ ಯಾವುದೇ ಪಕ್ಷವೂ ರಾಷ್ಟ್ರೀಯ ಪಕ್ಷ ಎಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿ ಕೂಡ ರಾಷ್ಟ್ರೀಯ ಪಕ್ಷವಲ್ಲ, ಬಿಜೆಪಿ ದಕ್ಷಿಣ ಭಾರತದ ಒಂದು ರಾಜ್ಯದಲ್ಲಿ ಮಾತ್ರ ಸರ್ಕಾರವನ್ನ ಹೊಂದಿದೆ. ಉಳಿದಂತೆ ಬಿಜೆಪಿ ಉತ್ತರ ಭಾರತದ ಪಕ್ಷವಾಗಿದ್ದು, ಕಾಂಗ್ರೆಸ್ ಕೂಡ ಕೆಲವೇ ಸೀಮಿತ ರಾಜ್ಯಗಳಲ್ಲಿ ಮಾತ್ರ ಸರ್ಕಾರ ಹೊಂದಿದೆ. ಹೀಗಾಗಿ ಇಂದು ದೇಶದಲ್ಲಿ ಯಾವುದೇ ರಾಷ್ಟ್ರೀಯ ಪಕ್ಷವಿಲ್ಲ ಎಂದು ತೆಲಂಗಾಣ ಸಚಿವ ಕೆಟಿ ರಾಮರಾವ್ ಹೇಳಿಕೆ ನೀಡಿದ್ದರು.
ಸದ್ಯ ಈ ಹೇಳಿಕೆಯನ್ನ ತಳ್ಳಿ ಹಾಕಿರುವ ಸಿ.ಟಿ ರವಿ, ''ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿಲ್ಲದಿದ್ದರೂ, ದಕ್ಷಿಣ ಭಾರತದಾದ್ಯಂತ ತಳಮಟ್ಟದ ಕಾರ್ಯಕರ್ತರನ್ನ ಹೊಂದುವಲ್ಲಿ ಬಿಜೆಪಿ ದೊಡ್ಡ ಆಸ್ತಿತ್ವವನ್ನೇ ಹೊಂದಿದೆ.ಅಲ್ಲದೆ ನಾವು ಇನ್ನೂ ತೆಲಂಗಾಣವನ್ನು ಗೆದ್ದಿಲ್ಲ. ಆದರೆ, ಶೀಘ್ರದಲ್ಲೇ ನಾವು ಅಲ್ಲಿಯೂ ಕೂಡ ಸರ್ಕಾರವನ್ನ ರಚಿಸುತ್ತೇವೆ ಎಂಬ ದೃಢ ನಂಬಿಕೆ ಇದೆ. ಈಗಿರುವ ಆಡಳಿತವೂ ತೆಲಂಗಾಣವನ್ನ ಅಭಿವೃದ್ದಿ ಮಾಡುವಲ್ಲಿ ವಿಫಲವಾಗಿದೆ. ಟಿಆರ್ಎಸ್ ಪಕ್ಷ ಕೇವಲ ಸುಳ್ಳು ಭರವಸೆಗಳನ್ನ ನೀಡುವುದರಲ್ಲಿ ತೊಡಗಿಕೊಂಡಿದೆ. ಅಷ್ಟೇ ಕೇವಲ ತಮ್ಮ ಕುಟುಂಬವನ್ನು ಅಭಿವೃದ್ದಿ ಮಾಡುವುದರಲ್ಲಿ ಹೆಚ್ಚು ಗಮನ ವಹಿಸಿದ್ದು, ತೆಲಂಗಾಣದ ನಾಗರಿಕರ ಮೇಲೆ ಯಾವುದೇ ರಕ್ಷಣೆ ಅಭಿವೃದ್ದಿಯ ಕಾಳಜಿ ವಹಿಸುವುದಿಲ್ಲ,'' ಎಂದು ಕೆಟಿಆರ್ ವಿರುದ್ದ ಸಿ.ಟಿ ರವಿ ಕಿಡಿಕಾರಿದ್ದಾರೆ.