ತೆಲಂಗಾಣ ಸಚಿವ ಕೆಟಿಆರ್ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ನಾಲ್ವರು ಪೌರಕಾರ್ಮಿಕರ ವಜಾ!
ಹೈದರಾಬಾದ್, ಜುಲೈ 29: ತೆಲಂಗಾಣ ಪೌರಾಡಳಿತ ಸಚಿವ ಕೆ. ತಾರಕ ರಾಮರಾವ್ ಜನ್ಮ ದಿನಾಚರಣೆ ಸಂಭ್ರಮದಲ್ಲಿ ಭಾಗವಹಿಸದ ಬೆಳ್ಳಂಪಲ್ಲಿ ಮುನ್ಸಿಪಲ್ ಕಮಿಷನ್ನ ನಾಲ್ವರು ಪೌರಕಾರ್ಮಿಕರನ್ನು ಅಮಾನತು ಮಾಡಲಾಗಿದೆ. ಜುಲೈ 24ರಂದು ಬೆಳ್ಳಂಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ಕಾರ್ಯಕ್ರಮವನ್ನು ಮುನ್ಸಿಪಲ್ ಕೌನ್ಸಿಲ್ ಆಯೋಜಿಸಿತ್ತು.
ಪೌರಾಯುಕ್ತರು ಜುಲೈ 25 ರಂದು ನಾಲ್ವರು ನೌಕರರಿಗೆ ನೋಟಿಸ್ ಜಾರಿ ಮಾಡಿದ್ದು, ಗೈರುಹಾಜರಾದ ಬಗ್ಗೆ 24 ಗಂಟೆಯೊಳಗೆ ವಿವರಣೆ ನೀಡುವಂತೆ ಸೂಚಿಸಿ, ತಪ್ಪಿದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.
ಹೈದರಾಬಾದ್ ನಿವಾಸಿಗಳಿಗೆ ತಿಂಗಳಿಗೆ 20,000 ಲೀಟರ್ ನೀರು ಉಚಿತ!
"ಸಚಿವರ ಜನ್ಮದಿನ ಕಾರ್ಯಕ್ರಮಕ್ಕೆ ಹಾಜರಾಗದಿದ್ದಕ್ಕಾಗಿ ನಿಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು. ಈ ಮೆಮೊವನ್ನು ಸ್ವೀಕರಿಸಿದ ನಂತರ 24 ಗಂಟೆಗಳ ಒಳಗೆ ನೀವು ಪ್ರತ್ಯುತ್ತರಿಸಬಹುದು. ಇಲ್ಲದಿದ್ದರೆ, ನಿಮ್ಮ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ನೀವು ಈ ಮೆಮೊಗೆ ಪ್ರತಿಕ್ರಿಯಿಸದಿದ್ದರೆ ನಿಮ್ಮ ಮೇಲಧಿಕಾರಿಗಳಿಗೆ ತಿಳಿಸಲಾಗುವುದು," ಎಂದು ಅದು ಹೇಳಿದೆ.
ಸಮಜಾಯಿಷಿ ನೀಡಲು ಅವಕಾಶವಿಲ್ಲದೆ ವಜಾ ಮಾಡಲಾಗಿದೆ ಎಂದು ಅಮಾನತುಗೊಂಡ ನೌಕರರು ಆರೋಪಿಸಿದ್ದಾರೆ. ಸಚಿವರ ಜನ್ಮದಿನ ಆಚರಣೆ ಅವರ ಉದ್ಯೋಗ ಪ್ರೋಟೋಕಾಲ್ನ ಭಾಗವಾಗಿರುವುದು ಏಕೆ ಎಂದು ನೌಕರರು ಪ್ರಶ್ನಿಸಿದ್ದಾರೆ.
|
ನೌಕರರ ಅಮಾನತಿಗೆ ಬಿಜೆಪಿ ಆಕ್ರೋಶ
ನಾಲ್ವರು ನೌಕರರನ್ನು ಅಮಾನತು ಮಾಡಿರುವ ಕ್ರಮವನ್ನು ಖಂಡಿಸಿರುವ ರಾಜ್ಯ ಬಿಜೆಪಿ, ಕೆಟಿಆರ್ ಅವರನ್ನು 'ರಾಜಕುಮಾರ' ಎಂದು ಕರೆದು ವ್ಯಂಗ್ಯವಾಡಿದೆ.
"ಜುಲೈ 24 ರಂದು ಪ್ರಿನ್ಸ್ ಕೆಟಿಆರ್ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಅವರು ಏಕೆ ಹಾಜರಾಗಲಿಲ್ಲ ಎಂಬುದನ್ನು ವಿವರಿಸಲು ತೆಲಂಗಾಣ ಸರ್ಕಾರವು ನೌಕರರಿಗೆ ನೋಟಿಸ್ ನೀಡಿದೆ. ತೆಲಂಗಾಣ ಜನರ ಸೇವೆಗಾಗಿ ಆಯ್ಕೆಯಾದ ಸರ್ಕಾರವನ್ನು ಹೊಂದಿಲ್ಲ, ಅದು ರಾಜಪ್ರಭುತ್ವವಾಗಿ ಮಾರ್ಪಟ್ಟಿದೆ. ಸರ್ಕಾರವೇನು ಕೆಸಿಆರ್ ಕುಟುಂಬದ ಆಸ್ತಿಯೇ?" ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.
ವಿಡಿಯೋ: ತೆಲಂಗಾಣ ಮಳೆ ಪ್ರವಾಹಕ್ಕೆ ಸಿಲುಕಿದ ಯುವಕನಿಗೆ ದೇವದೂತರಾದ ಪೊಲೀಸರು
ಆರೋಪ ಸುಳ್ಳು ಎಂದ ಟಿಆರ್ಎಸ್ ಪಕ್ಷ
ಸಚಿವ ಕೆ.ಟಿ.ರಾಮರಾವ್ ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿದ್ದನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಟಿಆರ್ಎಸ್, ಈ ಕಾರ್ಯಕ್ರಮವು ತೋಟಗಾರಿಕೆ ಅಭಿಯಾನವಾಗಿತ್ತು ಎಂದು ಹೇಳಿದೆ.
ತೋಟಗಾರಿಕೆ ಅಭಿಯಾನ ಸರ್ಕಾರಿ ಕಾರ್ಯಕ್ರಮವಾಗಿದ್ದು ಕಾರ್ಮಿಕರು ಗೈರು ಹಾಜರಾಗಿದ್ದಕ್ಕೆ ಕ್ರಮ ತೆಗೆದುಕೊಂಡಿರಬಹುದು ಎಂದು ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ವಕ್ತಾರರು ತಿಳಿಸಿದ್ದಾರೆ.
ಕೆಟಿಆರ್ ಹುಟ್ಟುಹಬ್ಬ ಆಚರಿಸಿಲ್ಲ
ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು. ತಮ್ಮ ಜನ್ಮದಿನವನ್ನು ಆಚರಿಸಬಾರದು ಎಂದು ಕೆಟಿಆರ್ ರಾಜ್ಯ ಮತ್ತು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಹಾಗಾಗಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ ಎಂದು ಟಿಆರ್ಎಸ್ ಸ್ಪಷ್ಟನೆ ನೀಡಿದೆ.
ಅಮಿತ್ ಮಾಳವೀಯ ಮತ್ತು ಬಿಜೆಪಿ ರಾಜಕೀಯ ಮಾಡಲು ಪ್ರಯತ್ನಿಸುತ್ತಿರುವ ಈ ಪ್ರಕರಣ ತೋಟಗಾರಿಕೆ ಇಲಾಖೆಯ ಕಾರ್ಯಕ್ರಮವಾಗಿದೆ. ರಾಜ್ಯದಲ್ಲಿ ಹಸಿರು ಪ್ರಮಾಣ ಹೆಚ್ಚಿಸಲು ಮುಖ್ಯಮಂತ್ರಿ ಪ್ರಾರಂಭಿಸಿದ ನೆಡುತೋಪು ಕಾರ್ಯಕ್ರಮವನ್ನು ನಡೆಸುವುದು ನಮ್ಮ ಆಚರಣೆಯಾಗಿದೆ ಎಂದು ಹೇಳಿದೆ. ಈ ನೆಡುತೋಪು ಕಾರ್ಯಕ್ರಮಕ್ಕೆ ಬರುವಂತೆ ಬೆಳ್ಳಂಪಲ್ಲಿ ಪುರಸಭೆ ತನ್ನ ನೌಕರರಿಗೆ ಕರೆ ನೀಡಿತ್ತು ಎಂದು ಟಿಆರ್ಎಸ್ ವಕ್ತಾರ ಕ್ರಿಶಾಂಕ್ ತಿಳಿಸಿದ್ದಾರೆ.
ಭಾರಿ ಪ್ರವಾಹದಿಂದ ನಲುಗಿರುವ ತೆಲಂಗಾಣ
ತೆಲಂಗಾಣ ರಾಜ್ಯದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಮೂಸಿ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ನೀರಿನ ಹರಿವಿನ ಮೇಲೆ ನಿಗಾ ಇರಿಸಲು ಮತ್ತು ಪ್ರಾಣಹಾನಿ ಮತ್ತು ಆಸ್ತಿಪಾಸ್ತಿಗೆ ಹಾನಿಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹೈದರಾಬಾದ್ ನಗರ ಪೊಲೀಸರು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪುರಾನಾಪುಲ್, ಮುಸಲಂ ಜಂಗ್ ಪುಲ್, ನಯಾಪುಲ್, ಸಲಾರ್ಜಂಗ್ ಸೇತುವೆ, ಚಾದರ್ಘಾಟ್ ಸೇತುವೆ, ಗೋಲ್ನಾಕಾ ಸೇತುವೆ ಮತ್ತು ಮೂಸರಂಬಾಗ್ ಸೇತುವೆಗಳು ಮುಳುಗಡೆಯಾಗಿದೆ. ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.
Recommended Video