ಕರ್ನಾಟಕದಲ್ಲಿ ಮಾಡಿದ ನಾಟಕ ತೆಲಂಗಾಣದಲ್ಲಿ ನಡೆಯೊಲ್ಲ: ಬಿಜೆಪಿಗೆ ಕೆಟಿಆರ್ ಎಚ್ಚರಿಕೆ
ಹೈದರಾಬಾದ್, ಆಗಸ್ಟ್ 20: ಕರ್ನಾಟಕದಲ್ಲಿ ಮಾಡಿದಂತೆ ತೆಲಂಗಾಣದಲ್ಲಿಯೂ ಬಿಜೆಪಿ ನಾಟಕಗಳನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ರಾಜ್ಯದ ಜನರು ಒಡೆದು ಆಳುವ ರಾಜಕೀಯವನ್ನು ಬೆಂಬಲಿಸುವುದಿಲ್ಲ ಎಂದು ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ಎಸ್) ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಸೋಮವಾರ ಹೇಳಿದ್ದಾರೆ.
ಕೆಟಿಆರ್ ಎಂದೇ ಹೆಸರಾಗಿರುವ ರಾಮರಾವ್, ತೆಲಂಗಾಣದಲ್ಲಿ ಅಧಿಕಾರಕ್ಕೆ ಬರುತ್ತೇವೆಂದು ಬಿಜೆಪಿ ನಾಯಕರು ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಕತೆ ಮುಗೀತು! ವಿರೋಧ ಪಕ್ಷದ ಸ್ಥಾನವೂ ಇಲ್ಲ!
'ಎಲ್ಲ ಧರ್ಮಗಳ ಜನರು ಸಹಬಾಳ್ವೆಯಿಂದ ಶಾಂತಿಯುತವಾಗಿ ಇರುವುದನ್ನು ಬಿಜೆಪಿ ನಾಯಕರು ಬಯಸುವುದಿಲ್ಲ. ಅವರು ಸಮುದಾಯಗಳನ್ನು ಒಡೆದು ಅವರನ್ನು ಆಳುವುದಕ್ಕೆ ಬಯಸುತ್ತಿದ್ದಾರೆ. ಇಂತಹ ತಂತ್ರಗಳು ತೆಲಂಗಾಣದಲ್ಲಿ ನಡೆಯುವುದಿಲ್ಲ' ಎಂದು ಎಚ್ಚರಿಕೆ ನೀಡಿದರು.
ತೆಲಂಗಾಣದ ಇತಿಹಾಸ ಮರುಸೃಷ್ಟಿ
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಮಗನಾಗಿರುವ ಕೆಟಿಆರ್, ಹೈದರಾಬಾದ್ನಲ್ಲಿ ಆಗಸ್ಟ್ 18ರಂದು ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರು ಟಿಆರ್ಎಸ್ ವಿರುದ್ಧ ಮಾಡಿದ ಆರೋಪಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಭಾನುವಾರ ಮಾತನಾಡಿದ್ದ ನಡ್ಡಾ, 'ಬಿಜೆಪಿಯು ತೆಲಂಗಾಣದ ಇತಿಹಾಸವನ್ನು ಮರು ರಚಿಸುತ್ತದೆ' ಎಂದು ಹೇಳಿದ್ದರು. 2024ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಿಡಿತ ಸಾಧಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದರು.
ತೆಲಂಗಾಣದಲ್ಲಿ ಜಗತ್ತಿನ ಅತಿ ದೊಡ್ಡ ಪಂಪ್ ಹೌಸ್ ಉದ್ಘಾಟನೆ
ನಡ್ಡಾ: 'ಅಬದ್ದಾಲ ಅಡ್ಡಾ'
ನಡ್ಡಾ ಅವನ್ನು 'ಅಬದ್ದಾಲ ಅಡ್ಡಾ' (ಸುಳ್ಳುಗಳ ಕಂತೆ) ಎಂದು ಲೇವಡಿ ಮಾಡಿದ ಕೆಟಿಆರ್, ರಾಜ್ಯದ ಪಕ್ಷದ ಮುಖಂಡರು ಸಿದ್ಧಪಡಿಸಿದ ಭಾಷಣವನ್ನಷ್ಟೇ ಜೆಪಿ ನಡ್ಡಾ ಓದಿದ್ದಾರೆ ಎಂದು ಟೀಕಿಸಿದರು.
'ಕಾಳೇಶ್ವರಂ ಯೋಜನೆಯ ಹಗರಣದ ಬಗ್ಗೆ ನಡ್ಡಾ ಮಾತನಾಡಿರುವುದು ಹಾಸ್ಯಾಸ್ಪದ. ಅವರು ದೆಹಲಿಗೆ ವಾಪಸ್ ಹೋಗಿ, ದಾಖಲೆಯ ಮೂರೇ ವರ್ಷದಲ್ಲಿ ಪೂರ್ಣಗೊಂಡ ಯೋಜನೆಯ ಕುರಿತು ಕೇಂದ್ರದ ಅನುದಾನಿತ ಸಂಸ್ಥೆಗಳು ಏಕೆ ಪ್ರಶಂಸೆ ವ್ಯಕ್ತಪಡಿಸುತ್ತಿವೆ ಎಂಬುದನ್ನು ತಿಳಿದುಕೊಳ್ಳಲಿ. ನೀತಿ ಆಯೋಗದ ಅಧಿಕಾರಿಗಳು ಈ ಯೋಜನೆಯನ್ನು ಏಕೆ ಹೊಗಳಿದ್ದಾರೆ ಎಂಬುದನ್ನು ಅರಿಯಲಿ. ಟಿಆರ್ಎಸ್ ಸರ್ಕಾರದ ಬಗ್ಗೆ ಈ ರೀತಿ ಹೀನ ಆರೋಪಗಳನ್ನು ಮಾಡುವುದಕ್ಕೆ ಅವರಿಗೆ ನಾಚಿಕೆಯಾಗುವುದಿಲ್ಲವೇ?' ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಕಥೆ ಏನಾಯಿತು?
ಕಾಳೇಶ್ವರಂ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬುದನ್ನು ಸಾಬೀತುಪಡಿಸುವವರೆಗೂ ಗಡ್ಡ ತೆಗೆಯುವುದಿಲ್ಲ ಎಂಬ ಕಾಂಗ್ರೆಸ್ ಮುಖಂಡರೊಬ್ಬರ ಶಪಥದ ಕುರಿತು ಪ್ರತಿಕ್ರಿಯೆ ನೀಡಿದ ರಾಮರಾವ್, 'ಈಗ ಅವರ ಕಥೆ ಏನಾಯಿತು? ಅವರ ಪಕ್ಷವು ಚುನಾವಣೆಯಲ್ಲಿ ಸೋತು ಸುಣ್ಣವಾಯಿತು ಮತ್ತು ಅವರು ಗಡ್ಡ ತೆಗೆಯುವುದನ್ನು ಮುಂದುವರಿಸಿದ್ದಾರೆ' ಎಂದು ವ್ಯಂಗ್ಯವಾಡಿದರು.
ವಿಡಿಯೋ: ಮಹಿಳಾ ಅರಣ್ಯ ಅಧಿಕಾರಿಯ ಥಳಿಸಿದ ಶಾಸಕನ ಸಹೋದರ
ನೂರು ಸೀಟು ಹೇಗೆ ಬರುತ್ತಿತ್ತು?
'ಕೆಸಿಆರ್ ಸರ್ಕಾರದ ದುರಾಡಳಿತದ ಬಗ್ಗೆ ಜನರು ಅಸಮಾಧಾನ ಹೊಂದಿದ್ದಾರೆ ಎಂದು ನಡ್ಡಾ ಆರೋಪಿಸಿದ್ದಾರೆ. ಹಾಗೆ ಆಗಿದ್ದರೆ ಟಿಆರ್ಎಸ್ ವಿಧಾನಸಭೆ ಚುನಾವಣೆಯಲ್ಲಿ 119 ಸೀಟುಗಳ ಪೈಕಿ ಸುಮಾರು 100 ಸೀಟುಗಳಲ್ಲಿ ಗೆಲ್ಲಲು ಹೇಗೆ ಸಾಧ್ಯವಾಗುತ್ತಿತ್ತು?' ಎಂದು ಪ್ರಶ್ನಿಸಿದರು.
ಟಿಆರ್ಎಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರು ಮೊದಲು ಅದನ್ನು ಸಾಬೀತುಪಡಿಸಲಿ. ಇಲ್ಲದೆ ಹೋದರೆ ಜನರು ಅವರಿಗೆ ಕಠಿಣ ಪಾಠ ಕಲಿಸಲಿದ್ದಾರೆ' ಎಂದು ಎಚ್ಚರಿಕೆ ನೀಡಿದರು.