ತಿರುಪತಿ ತಿಮ್ಮಪ್ಪನಿಗೆ 1 ಕೋಟಿ ದಾನ ಕೊಟ್ಟ ಐಟಿ ಕಂಪನಿ ಮಾಲೀಕ
ಬೆಂಗಳೂರು, ಜನವರಿ 07: ಬೆಂಗಳೂರು ಮೂಲದ ಭಕ್ತರೊಬ್ಬರು, ಏಳುಬೆಟ್ಟದ ಒಡೆಯ ತಿರುಪತಿ ತಿಮ್ಮಪ್ಪನ ಪಾದಕ್ಕೆ 1 ಕೋಟಿ ರು ಅರ್ಪಿಸಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನ ಮಂಡಳಿ(ಟಿಟಿಡಿ)ಯ ಶ್ರೀ ವೆಂಕಟೇಶ್ವರ ಗೋಸಂರಕ್ಷಣ ಯೋಜನೆಗೆ 1 ಕೋಟಿ ರು ನೀಡಲಾಗಿದೆ.
ಬೆಂಗಳೂರಿನ ಐಟಿ ಕಂಪನಿಯೊಂದರ ಮಾಲೀಕರಾದ ಅಮರನಾಥ್ ಚೌಧುರಿ ಹಾಗೂ ಪತ್ನಿ ಅವರು ದೇಗುಲದ ಗೋಸಂರಕ್ಷಣಾ ಟ್ರಸ್ಟಿಗೆ 1 ಕೋಟಿ ರು ಅರ್ಪಿಸಿದ್ದಾರೆ ಎಂದು ದೇಗುಲದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ಟಿಟಿಡಿ ಕಾರ್ಯಕಾರಿ ಅಧಿಕಾರಿ ಎವಿ ಧರ್ಮ ರೆಡ್ಡಿ ಅವರಿಗೆ 1 ಕೋಟಿ ರು ಮೊತ್ತದ ಡಿಮ್ಯಾಂಡ್ ಡ್ರಾಫ್ಟ್ ನೀಡಲಾಗಿದೆ. ಬೆಂಗಳೂರಿನಲ್ಲಿ 9 ವರ್ಷಗಳಿಂದ ಸಾಫ್ಟ್ ವೇರ್ ಕಂಪನಿ ನಡೆಸುತ್ತಿರುವ ಅಮರನಾಥ್ ಅವರು ತಿರುಪತಿ ಬಾಲಾಜಿಯ ಪರಮಭಕ್ತರಾಗಿದ್ದಾರೆ.
ಈ ಬೃಹತ್ ಮೊತ್ತದ ದಾನ ನೀಡಿ, ಇದನ್ನು ಗೋ ಸಂರಕ್ಷಣೆ ಕಾರ್ಯಕ್ಕೆ ಬಳಸುವಂತೆ ಕೇಳಿಕೊಂಡಿದ್ದಾರೆ. ಗೋವುಗಳ ಸಂರಕ್ಷಣೆ, ಪಾಲನೆ, ಪೋಷಣೆಗಾಗಿ ಟಿಟಿಡಿ ಪ್ರತ್ಯೇಕ ಟ್ರಸ್ಟ್ ರೂಪಿಸಿದೆ. ಈ ಟ್ರಸ್ಟ್ ನಿಂದ ಸಂರಕ್ಷಿಸಿದ ಗೋವುಗಳಿಂದಲೇ ದೇಗುಲದ ನಿತ್ಯ ಪೂಜೆಗೆ ಬೇಕಾದ ಹಾಲು ಇನ್ನಿತರ ಗೋಜನ್ಯ ಉತ್ಪನ್ನಗಳನ್ನು ಬಳಸಲಾಗುತ್ತದೆ.