ಈ ಮಹಾನ್ ಗಾಯಕಿಗೂ ಹುಟ್ಟುಹಬ್ಬದ ಶುಭಾಶಯ ಹೇಳಿ!
'ಒಮ್ಮೆ ನಿನ್ನನ್ನು ಕಣ್ತುಂಬ ಕಾಣುವಾಸೆ ಎಲ್ಲಿರುವೆ', 'ಪಂಚಮ ವೇದ ಪ್ರೇಮದ ನಾದ', 'ಬಾನಲ್ಲೂ ನೀನೆ ಭುವಿಯಲ್ಲು ನೀನೆ' ಇಂಥ ಮಧುರ ಹಾಡುಗಳು ಒಮ್ಮೆಂದೊಮ್ಮೆಲೇ ಕಿವಿಯಲ್ಲಿ ಅನುರಣಿಸಲು ಶುರುವಾದವು. ಅದಕ್ಕೆ ಕಾರಣ ಫೇಸ್ ಬುಕ್ ನಲ್ಲಿನ ಒಂದು ಕಮೆಂಟ್.
ಶುಕ್ರವಾರ (ಏಪ್ರಿಲ್ 23) ಮಧ್ಯರಾತ್ರಿ ಹಾಗೇ ಫೇಸ್ಬುಕ್ ಎಡತಾಕುತ್ತಿದ್ದಾಗ, ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರ ಕಮೆಂಟ್ ಒಂದು ತಕ್ಷಣವೇ ಮನಸ್ಸನ್ನು ಹಿಡಿದಿಟ್ಟಿತು.[ಗುಲಾಬ್ ಜಾಮೂನ್ ಜಮಾಯಿಸಿ ರಾಜ್ ಜನ್ಮದಿನ ಆಚರಣೆ!]
ಆ ಕಮೆಂಟ್ ನಲ್ಲಿ ಅವರು, ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿಯವರ ಹುಟ್ಟುಹಬ್ಬದಂದು (ಏ. 23) ಅವರಿಗೆ ಈ ಮಹಾನ್ ಗಾಯಕಿಗೂ ಹುಟ್ಟುಹಬ್ಬದ ಶುಭಾಶಯ ಹೇಳಿ! ಎಂದು ಬರೆದಿದ್ದರು.
ಸಾವಿರಾರು ಹಾಡುಗಳ ಮೂಲಕ ಚಿತ್ರ ಸಂಗೀತ ಪ್ರೇಮಿಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಜಾನಕಮ್ಮನವರ ಹುಟ್ಟುಹಬ್ಬ...!! ಅರೆರೇ ಗೊತ್ತೇ ಆಗಿಲ್ಲ. ಕನ್ನಡಿಗರಾದ ನಮಗೆ ಏಪ್ರಿಲ್ 23 ಬಂತೆಂದರೆ, ಆ ದಿನ ನಾಳೆ ಡಾ. ರಾಜ್ ಕುಮಾರ್ ಬರ್ತಡೇ, ಸಚಿನ್ ತೆಂಡೂಲ್ಕರ್ ಬರ್ತಡೇ ಅಂತ ಅಂದ್ಕೋತೇವೆ.
ಆದರೆ, ನಾವು ಹಾಗೆ ನಾಳೆಯ ಬಗ್ಗೆ ಯೋಚಿಸುವ ಅದೇ ದಿನದಂದು ಜಾನಕಿ ಅಮ್ಮನ ಬರ್ತಡೆ ಇದೆ ಅನ್ನೋದನ್ನೇ ಮರೆತು ಬಿಡುತ್ತೇವೆ. ಕೆಲವರಿಗಷ್ಟೇ ಇದು ಗೊತ್ತಿರಬಹುದು. ಆದರೆ, ಬಹುತೇಕರಿಗೆ ಈ ವಿಚಾರ ಗೊತ್ತಿರಲಾರದು.[ಡಾ.ರಾಜ್ 'ಅಪರೂಪದ ಪ್ರತಿಮೆಗಳ ಹಿಂದಿನ ಅದ್ಭುತ ಶಿಲ್ಪಿ' ಈತ]
ಆದರೂ 'Belated birthday Wishes' ಹೆಸರಿನಲ್ಲಿ ಜಾನಕಮ್ಮ ಅವರ ಜೀವನವನ್ನು ಮೆಲುಕು ಹಾಕುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ.
ತಂದೆಯೇ ಸ್ಫೂರ್ತಿ
ಜಾನಕಿ ಅವರು ಹುಟ್ಟಿದ್ದು 1938ನೇ ಇಸವಿ, ಏಪ್ರಿಲ್ 23. ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೇಪಲ್ಲೆ ತಾಲೂಕಿನ ಪಲ್ಲಪಟ್ಲ ಗ್ರಾಮದಲ್ಲಿನ ಸರ್ಕಾರಿ ಶಾಲಾ ಶಿಕ್ಷಕರ ಪುತ್ರಿಯಾಗಿ ಜನಿಸಿದ ಇವರ ಜನ್ಮನಾಮವೇ ಜಾನಕಿ. ಅವರ ತಂದೆ ಸಕಲ ಕಲಾ ವಲ್ಲಭ. ಶಾಲಾ ಮಾಸ್ತರ್ ಗಿರಿಯ ಜತೆಗೆ, ಆಯುರ್ವೇದ ಪಂಡಿತರೂ ಹೌದು. ಸಂಗೀತದ ಜ್ಞಾನವೂ ಇತ್ತು. ಹಾಗಾಗಿ, ಮನೆಯಲ್ಲಿ ಬಾಲ್ಯದಲ್ಲೇ ತಮ್ಮ ಇಂಪಾದ ಕಂಠದಿಂದ ದೇವರ ಸ್ತ್ರೋತ್ರಗಳನ್ನು ಹಾಡಿದ ಜಾನಕಿ ಪ್ರತಿಭೆ ಆ ಗ್ರಾಮದ ಸುತ್ತ ಮುತ್ತಲೆಲ್ಲಾ ಮನೆಮಾತಾಗಿತ್ತು.
ಲತಾ ಮಂಗೇಶ್ವರ್ ಸ್ಫೂರ್ತಿ
ಗಾಯಕಿಯಾಗಿ ಹಂತಹಂತವಾಗಿ ಬೆಳೆದ ಅವರು ಅಂದಿನ ಭಾರತದೆಲ್ಲೆಡೆ ಖ್ಯಾತಿ ಗಳಿಸಿದ್ದ ಲತಾ ಮಂಗೇಶ್ಕರ್ ಅವರ ಅಭಿಮಾನಿಯಾದರು. ಅವರನ್ನು ಸ್ಫೂರ್ತಿಯಾಗಿಟ್ಟುಕೊಂಡೇ ವೇದಿಕೆಗಳಲ್ಲಿ ಹಾಡುತ್ತಿದ್ದ ಜಾನಕಿ, ಆನಂತರ, ಪ್ರಖ್ಯಾತ ಸಿನಿಮಾ ತಯಾರಿಕಾ ಸಂಸ್ಥೆಯಾದ ಎ.ವಿ.ಎಂ. ನಲ್ಲಿ ಗಾಯಕಿಯಾಗಿ ಸೇರ್ಪಡೆಗೊಂಡರು. ಅಲ್ಲಿಂದ ಅವರಿಗೆ ಹಾಡುವ ಅವಕಾಶಗಳ ಮಹಾಪೂರವೇ ಹರಿದುಬರತೊಡಗಿತು.
ಮುಂದುವರಿದ ಗಾಯನ ಸೇವೆ
ಜಾನಕಿಯವರ ಮಧುರ ಕಂಠಕ್ಕೆ ಮನಸೋತ ಅವರ ಸೋದರ ಮಾವನ ಮಗ ರಾಮಪ್ರಸಾದ್ ಜತೆಗೆ 1959ರಲ್ಲಿ ಜಾನಕಿಯವರ ಮದುವೆಯೂ ಆಯಿತು. ಪತಿಯೇ ಗಾಯನಕ್ಕೆ ಮನ ಸೋತಿದ್ದರಿಂದಾಗಿ ಜಾನಕಿಯವರ ಗಾಯನಕ್ಕೆ ಪತಿಯಿಂದಾಗಲೀ, ಅವರ ಮನೆಯವರಿಂದಾಗಲೀ ಯಾವುದೇ ಅಡ್ಡಿಯಾಗಲಿಲ್ಲ. ಅವರ ಅನನ್ಯ ಪ್ರೋತ್ಸಾಹದಿಂದಲೇ ಜಾನಕಿ ಅಮ್ಮ ಕೂಡಾ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು.
ಕನ್ನಡದಲ್ಲಿ ಹಾಡಿದ್ದು 1957ರಲ್ಲಿ
ಜಾನಕಿಯವರು ಮೊಟ್ಟಮೊದಲ ಬಾರಿಗೆ ಚಲನಚಿತ್ರದಲ್ಲಿ ಹಾಡಿದ್ದು 'ವಿಧಿಯನ್ ವಿಳೈಯಾಟ್ಟು' ಎಂಬ ತಮಿಳು ಚಿತ್ರದಲ್ಲಿ. ಈ ಚಿತ್ರ 1957ರಲ್ಲಿ ತೆರೆಕಂಡಿತ್ತು. ಅದೇ ವರ್ಷ ಅವರು ಕನ್ನಡಕ್ಕೆ ಪರಿಚಯಗೊಂಡರು. 'ಶ್ರೀ ಕೃಷ್ಣ ಗಾರುಡಿ' ಚಿತ್ರದ 'ಭಲೇ ಭಲೇ ಗಾರುಡಿ ಬರುತಿದೆ ನೋಡಿ...' ಎಂಬ ಹಾಡು ಅವರು ಹಾಡಿದ ಮೊದಲ ಕನ್ನಡ ಹಾಡು. ಅದರ ಬೆನ್ನಲ್ಲೇ ಅವರು, 'ರಾಯರ ಸೊಸೆ' ಚಿತ್ರದ 'ತಾಳಲೆಂತು ಶೋಕಾವೇಗ' ಎಂಬ ಹಾಡನ್ನು ಹಾಡಿದ್ದರು. ಆದರೆ, 'ರಾಯರ ಸೊಸೆ' ಚಿತ್ರ 'ಶ್ರೀ ಕೃಷ್ಣ ಗಾರುಡಿ' ಚಿತ್ರಕ್ಕಿಂತ ಬೇಗನೇ ಬಿಡುಗಡೆ (1957) ಆಗಿದ್ದರಿಂದ ಜಾನಕಿಯವರು ಕನ್ನಡದಲ್ಲಿ ಹಾಡಿದ್ದ ಮೊದಲ ಚಿತ್ರವೆಂಬ ಹೆಗ್ಗಳಿಕೆ 'ರಾಯರ ಸೊಸೆ' ಚಿತ್ರದ ಪಾಲಾಗಿದೆ.
ಸದ್ಯಕ್ಕೀಗ ಹೈದರಾಬಾದ್ ನಲ್ಲಿ ವಾಸ
ಬರೀ ಗಾಯನವಷ್ಟೇ ಅಲ್ಲದೆ, ಒಂದು ತೆಲುಗು ಚಿತ್ರಕ್ಕೆ ಸಂಗೀತ ನೀಡುವ ಮೂಲಕ (ಉಷಾಕಿರಣ್ ಮೂವೀಸ್ ಅವರ 'ಮೌನ ಪೋರಾಟಂ') ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ ಜಾನಕಿ. ಸಿನಿಮಾ ರಂಗದಲ್ಲಿ 50ಕ್ಕೂ ಹೆಚ್ಚು ವರ್ಷಗಳ ಕಾಲ ಹಾಡಿದ ಈ ಗಾನ ಕೋಗಿಲೆ ಕಳೆದ ವರ್ಷ ಗಾಯನಕ್ಕೆ ವಿದಾಯ ಹೇಳಿತು. ಇದೀಗ, ತಮ್ಮ ಏಕೈಕ ಪುತ್ರ ವಿ. ಮುರಳಿ ಕೃಷ್ಣ, ಸೊಸೆ ಉಮಾ ಹಾಗೂ ಮೊಮ್ಮೊಕ್ಕಳಾದ ಅಮೃತ ವರ್ಷಿಣಿ, ಅಪ್ಸರಾ ಜತೆ (ಪತಿ ರಾಮಪ್ರಸಾದ್ ಈಗಿಲ್ಲ. ಅವರು 1996ರಲ್ಲೇ ನಿಧನರಾಗಿದ್ದಾರೆ) ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ ಜಾನಕಿ ಅಮ್ಮ.