'ಅಸಾದುದ್ದೀನ್ ಓವೈಸಿಯನ್ನು ದೇಶಾದ್ಯಂತ ಬ್ಯಾನ್ ಮಾಡಿ'
ಹೈದರಾಬಾದ್, ಮಾರ್ಚ್ 3: ಎಐಎಂಐಎಂ ಪಕ್ಷದ ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿಯನ್ನು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಬೇಕು ಎಂದು ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷ ಕನ್ನಾ ಲಕ್ಷ್ಮೀ ನಾರಾಯಣ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಗುಂಟೂರಿನಲ್ಲಿ ಮಾತನಾಡಿರುವ ಅವರು, ಓವೈಸಿಯನ್ನು ಸಿಎಎ ವಿರೋಧಿ ಸಮಾವೇಶ, ಪ್ರತಿಭಟನೆಗಳಲ್ಲಿ ದೇಶದ ಎಲ್ಲ ಕಡೆಗೂ ಪಾಲ್ಗೊಳ್ಳದಂತೆ ಕೇಂದ್ರ ಸರ್ಕಾರ ನೀಷೇಧ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ.
'ಪಾಕಿಸ್ತಾನ್ ಜಿಂದಾಬಾದ್' ಎಂದವಳಿಗೆ ವೇದಿಕೆಯಲ್ಲೇ ಓವೈಸಿ ಪ್ರತಿಕ್ರಿಯೆ ಏನು?
ಓವೈಸಿ ಅವರು ಇಡೀ ದೇಶದಲ್ಲಿ ಸಿಎಎ ವಿರೋಧಿ ಸಮಾವೇಶಗಳಲ್ಲಿ ಪಾಲ್ಗೊಂಡು ಸಿಎಎ ಬಗ್ಗೆ ತಪ್ಪು ಕಲ್ಪನೆಯನ್ನು ಜನರಲ್ಲಿ ಹರಡುತ್ತಿದ್ದಾರೆ. ಸಂಸತ್ನಲ್ಲಿ ಅಂಗೀಕಾರವಾದ ಮಸೂದೆಯ ಬಗ್ಗೆ ಈ ರೀತಿ ಓವೈಸಿ ಮಾಡುತ್ತಿರುವುದು ಸಂವಿಧಾನಕ್ಕೆ ಮಾಡುವ ಅಪಚಾರವಾಗಿದೆ. ಕೇಂದ್ರ ಸರ್ಕಾರ ಓವೈಸಿ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಅವರು ಇನ್ನೂ ಸಾಕಷ್ಟು ಅನಾಹುತಗಳನ್ನು ಸೃಷ್ಠಿಸುತ್ತಾರೆ ಎಂದು ಕನ್ನಾ ಲಕ್ಷ್ಮೀ ನಾರಾಯಣ ಹೇಳಿದ್ದಾರೆ.
ಓವೈಸಿ ಕೇವಲ ತೆಲಂಗಾಣದಲ್ಲಿ ಆಂಧ್ರಪ್ರದೇಶದಲ್ಲಿ ಸಿಎಎ ಎನ್ಆರ್ಸಿ ಹಾಗೂ ಎನ್ಪಿಆರ್ ವಿರೋಧಿ ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ದೇಶಾದ್ಯಂತ ಅವರು ಕಾರ್ಯಚಟುವಟಿಕೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಿದ್ದರೇ ನಾವೇ ಅವರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಕನ್ನಾ ಹೇಳಿದ್ದಾರೆ.