ಹೈದ್ರಾಬಾದ್ ಹೆಸರು ಬದಲಾವಣೆ, ಯೋಗಿಗೆ ಓವೈಸಿ ಎಚ್ಚರಿಕೆ
ಹೈದರಾಬಾದ್, ನ.29: ಬಿಜೆಪಿ ರಾಷ್ಟ್ರೀಯ ಯುವ ಕಾರ್ಯದರ್ಶಿ, ಸಂಸದ ತೇಜಸ್ವಿ ಸೂರ್ಯ ನಂತರ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೈದರಾಬಾದ್ ಹೆಸರನ್ನು ಭಾಗ್ಯನಗರ ಎಂದು ಬದಲಾಯಿಸುವುದಾಗಿ ಘೋಷಿಸಿದ್ದಾರೆ. ಶನಿವಾರ ಸಂಜೆ ಭರ್ಜರಿ ರೋಡ್ ಶೋ ನಡೆಸಿದ ಯೋಗಿ ಆದಿತ್ಯನಾಥ್ ಹೇಳಿಕೆ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕಿಡಿಕಾರಿದ್ದಾರೆ.
ಯೋಗಿ ಆದಿತ್ಯನಾಥ್ ಹೆಸರು ಉಲ್ಲೇಖಿಸದೆ, ಯಾರು ಯಾರು ಹೈದ್ರಾಬಾದ್ ಹೆಸರನ್ನು ಬದಲಾಯಿಸಲು ಯತ್ನಿಸುತ್ತಾರೋ ಅವರ ಹೆಸರನ್ನು ಮೊದಲಿಗೆ ಬದಲಾಯಿಸಲಾಗುವುದು ಎಂದು ಹೇಳಿದರು.
GHMC: ಬಿಜೆಪಿ ಪ್ರಣಾಳಿಕೆಯಲ್ಲಿ ಕೊರೊನಾ ಲಸಿಕೆ, ಚಿಕಿತ್ಸೆ
ಜಿಎಚ್ಎಂಸಿ ಚುನಾವಣೆಯಲ್ಲಿ ಬಿಜೆಪಿ ಹಲವು ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳುತ್ತಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನಂತರ ಯೋಗಿ ಆದಿತ್ಯನಾಥ್ ಕೂಕಟ್ ಪಲ್ಲಿಯಲ್ಲಿ ರೋಡ್ ಶೋ ನಡೆಸಿದರು, ಭಾನುವಾರದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೈದರಾಬಾದಿಗೆ ಆಗಮಿಸಲಿದ್ದಾರೆ.
ಯೋಗಿ ಆದಿತ್ಯನಾಥ್ ರೋಡ್ ಶೋ
ಯೋಗಿ ಆದಿತ್ಯನಾಥ್ ಮಾತನಾಡಿ, ಟಿಆರ್ ಎಸ್ ಹಾಗೂ ಎಐಎಂಐಎಂ ದುರಾಡಳಿತ, ಭ್ರಷ್ಟಾಚಾರಕ್ಕೆ ಕೊನೆ ಹಾಡಲು ಇದೀಗ ಸಮಯ ಬಂದಿದೆ. ಡಿಸೆಂಬರ್ 1ರಂದು ನಿಮ್ಮ ಮತಗಳು ಹೊಸ ದಿಕ್ಕಿನತ್ತ ಕರೆದೊಯ್ಯಲಿ, ಲೂಟಿಕೋರರಿಂದ ಹೈದರಾಬಾದ್ ಮುಕ್ತಗೊಳಿಸಿ ಭಾಗ್ಯನಗರವನ್ನಾಗಿಸಿ ಎಂದರು.
ಹೈದರಾಬಾದ್ ನಗರವನ್ನು ಭಾಗ್ಯನಗರ ಎಂದು ಮರು ನಾಮಕರಣಗೊಳಿಸಬಾರದೇಕೆ ಎಂದು ಕೇಳುತ್ತಿದ್ದಾರೆ. ಹೌದು ಇದು ಯಾಕೆ ಸಾಧ್ಯವಿಲ್ಲ, ಫೈಜಾಬಾದ್ ಬದಲಾಯಿಸಿ ಅಯೋಧ್ಯಾ ಹೆಸರು ನೀಡಲಾಗಿದೆ, ಅಲಹಾಬಾದ್ ಬದಲಾಯಿಸಿ ಪ್ರಯಾಗ್ ರಾಜ್ ಬಂದಿದೆ. ಇದೇ ರೀತಿ ಹೈದರಾಬಾದ್ ಹೆಸರು ಭಾಗ್ಯ ನಗರ ಎಂದು ಏಕೆ ಬದಲಾಗಬಾರದು ಎಂದು ಪ್ರಶ್ನಿಸಿದರು.
ಸಂತತಿ ನಶಿಸಿದರೂ ಸಾಧ್ಯವಿಲ್ಲ: ಓವೈಸಿ
ಒವೈಸಿ ಪ್ರತಿಕ್ರಿಯಿಸಿ, ಹೈದರಾಬಾದ್ ಹೆಸರನ್ನು ಬದಲಾಯಿಸಲು ಯತ್ನಿಸುವವರ ಸಂತತಿಯೇ ನಶಿಸಿ ಹೋಗುತ್ತದೆಯೇ ಹೊರತು ಹೆಸರು ಬದಲಾಯಿಸಲು ಸಾಧ್ಯವಿಲ್ಲ, ನಾವು ಹೆಸರು ಬದಲಾಯಿಸಲು ಬಿಡುವುದಿಲ್ಲ ಎಂದಿದ್ದಾರೆ.
GHMC Polls: ತೆಲಂಗಾಣ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ತೇಜಸ್ವಿ ಸೂರ್ಯ
ಹೈದರಾಬಾದ್ ನಗರದ ಹೆಸರನ್ನು ಬದಲಾಯಿಸಲು ಹೊರಟವರಿಗೆ ನಿಮ್ಮ ಮತದ ಮೂಲಕ ಉತ್ತರ ನೀಡಿ, ನನಗೆ ಯಾಕೋ ಇದು ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಬದಲಿಗೆ ನಾವು ಪ್ರಧಾನಿ ಆಯ್ಕೆಯಾಗಿ ನಡೆಸುವ ಚುನಾವಣೆಯಂತೆ ತೋರುತ್ತಿದೆ ಎಂದು ಬಿಜೆಪಿಗೆ ಟಾಂಗ್ ನೀಡಿದರು.
ಟ್ರಂಪ್ ಬೇಕಾದರೂ ಕರೆಸಿ ಪ್ರಚಾರ ನಡೆಸಿ
ಬಿಜೆಪಿಯವರು ಕೇಂದ್ರ ನಾಯಕರನ್ನು ಕರೆಸುತ್ತಿದ್ದಾರೆ. ಈ ಬಗ್ಗೆ ಕುತೂಹಲಭರಿತನಾಗಿ ಇಲ್ಲಿನ ಬಾಲಕನೊಬ್ಬ ನನ್ನನ್ನು ಕೇಳಿದ ಅವರು(ಬಿಜೆಪಿ) ಡೊನಾಲ್ಡ್ ಟ್ರಂಪ್ ರನ್ನು ಕರೆಸಬಹುದಾಗಿತ್ತು ಎಂದು, ಆತನ ಮಾತು ನಿಜ, ಬಾಕಿ ಉಳಿದಿರುವುದು ಟ್ರಂಪ್ ಮಾತ್ರ, ಆದರೆ ಆತ ಕೂಡಾ ಇಲ್ಲಿ ಏನು ಬದಲಾಯಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
2019ರಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ತೆರಳಿ ಡೊನಾಲ್ಡ್ ಟ್ರಂಪ್ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಇದರಿಂದ ಏನಾಯಿತು, ಫಲಿತಾಂಶ ನಿಮ್ಮ ಕಣ್ಮುಂದಿದೆ ಎಂದು ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದರು.
ಭಾರಿ ಕುತೂಹಲ ಕೆರಳಿಸಿರುವ ಚುನಾವಣೆ
ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಪ್ರಭಾರಿಯನ್ನಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರನ್ನು ನೇಮಿಸಲಾಗಿದೆ. ತೆಲಂಗಾಣ ವಿಧಾನಸಭೆಯ ಉಪ ಚುನಾವಣೆಯಲ್ಲಿ ಅಚ್ಚರಿಯ ಗೆಲುವು ಸಾಧಿಸಿರುವ ಬಿಜೆಪಿ, ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ತನ್ನ ಶಕ್ತಿ ಪ್ರದರ್ಶನ ಮಾಡುವ ಮೂಲಕ ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸುವ ಗುರಿ ಹೊಂದಿದೆ.
2016ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಪಕ್ಷ 150ರಲ್ಲಿ 99 ಸ್ಥಾನಗಳಿಸಿ ಆಡಳಿತ ವಹಿಸಿಕೊಂಡಿತ್ತು. ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ (GHMC) ವ್ಯಾಪ್ತಿಯಲ್ಲಿ 20 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಆಡಳಿತಾರೂಢ ಟಿಆರ್ ಎಸ್ ಅಲ್ಲದೆ, ಕಾಂಗ್ರೆಸ್, ಬಿಜೆಪಿ, ಎಐಎಂಐಎಂ ಕೂಡಾ ಪಾಲಿಕೆಯಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಲು ಸೆಣಸಾಡಲಿವೆ.
ಡಿಸೆಂಬರ್ 01ರಂದು ಮತದಾನ
150 ಸದಸ್ಯರ ಆಯ್ಕೆಗಾಗಿ ಡಿಸೆಂಬರ್ 01ರಂದು ಬೆಳಗ್ಗೆ 7 ರಿಂದ ಸಂಜೆ 6 ತನಕ ಮತದಾನದ ನಡೆಯಲಿದೆ. ಡಿಸೆಂಬರ್ 4ರಂದು ಮತ ಎಣಿಕೆ ನಡೆಯಲಿದೆ.
ಹಾಲಿ ಪಾಲಿಕೆ ಅವಧಿ ಫೆಬ್ರವರಿ 10, 2021ರಂದು ಕೊನೆಗೊಳ್ಳಲಿದೆ. ಸಾಮಾನ್ಯ ವರ್ಗದ ಮಹಿಳೆಗೆ ಈ ಬಾರಿ ಮೇಯರ್ ಸ್ಥಾನ ಮೀಸಲಾಗಿದೆ. 2016ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಪಕ್ಷ 150ರಲ್ಲಿ 99 ಸ್ಥಾನಗಳಿಸಿ ಆಡಳಿತ ವಹಿಸಿಕೊಂಡಿತ್ತು. ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ (GHMC) ವ್ಯಾಪ್ತಿಯಲ್ಲಿ 20 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, 74 ಲಕ್ಷ ಮತದಾರರಿದ್ದಾರೆ.