ಗೋಡ್ಸೆ ಅನುಯಾಯಿಗಳು ನನ್ನನ್ನು ಕೊಲ್ಲಬಹುದು: ಓವೈಸಿ
ಹೈದರಾಬಾದ್, ಆಗಸ್ಟ್ 14: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡುವ 370ನೇ ವಿಧಿ ರದ್ದತಿಯ ವಿರುದ್ಧ ಇರುವ ತಮ್ಮನ್ನು ಮಹಾತ್ಮಾ ಗಾಂಧಿ ಅವರನ್ನು ಹತ್ಯೆ ಮಾಡಿದ ಗೋಡ್ಸೆ ಅನುಯಾಯಿಗಳು ಕೊಲ್ಲುವ ಸಾಧ್ಯತೆ ಇದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬುಧವಾರ ಕಳವಳ ವ್ಯಕ್ತಪಡಿಸಿದರು.
370ನೇ ವಿಧಿ ರದ್ದುಮಾಡಿರುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿರುವ ಅವರು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ವಯನಾಡಿನಲ್ಲಿ ಗೆದ್ದಿದ್ದೇ ಮುಸ್ಲಿಮರಿಂದ: ಓವೈಸಿ
''ಅವರಿಗೆ ಕಾಶ್ಮೀರದ ಮೇಲೆ ಪ್ರೀತಿಯಿದೆ, ಆದರೆ ಕಾಶ್ಮೀರಿಗಳ ಮೇಲೆ ಅಲ್ಲ. ಅವರಿಗೆ ಅಧಿಕಾರದ ಬಗ್ಗೆ ಮಾತ್ರವೇ ಯೋಚನೆ ಹೊರತು ನ್ಯಾಯ ಮತ್ತು ಸೇವೆಯ ಮೇಲೆ ಅಲ್ಲ. ಅಲ್ಲಿ 19ನೇ ವಿಧಿ ಅನ್ವಯವಾಗುವುದಿಲ್ಲವೇ? ಬಿಜೆಪಿಯನ್ನು ಬೆಂಬಲಿಸುವವರಿಗೆ ಅಲ್ಲಿ ಅಂತರ್ಜಾಲದ ಸಂಪರ್ಕ ನೀಡಲಾಗಿದೆ. ಅವರ ಓಡಾಟಕ್ಕೆ ಹೆಲಿಕಾಪ್ಟರ್ ನೀಡಲಾಗಿದೆ. ದೂರವಾಣಿಯಲ್ಲಿ ಮಾತನಾಡಲು ನೀವು 80 ಲಕ್ಷ ಜನರಿಗೆ ಅವಕಾಶ ನೀಡುವುದಿಲ್ಲವೇ? ಸಂವಿಧಾನ ಇದೆ ಎನ್ನುವುದನ್ನು ಸರ್ಕಾರ ಮರೆತಿದೆ'' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗೋಡ್ಸೆ ಹಿಂಬಾಲಕರು ನನ್ನನ್ನು ಕೊಲ್ಲುತ್ತಾರೆ
ಜಮ್ಮು ಮತ್ತು ಕಾಶ್ಮೀರದಲ್ಲಿ ವದಂತಿಗಳನ್ನು ಹರಡುವ ಮೂಲಕ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದ್ದಾರೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ''ಒಂದು ದಿನ ನನ್ನನ್ನು ಗುಂಡಿಕ್ಕಿ ಕೊಲ್ಲಲಾಗುತ್ತದೆ ಎಂದು ನನಗೆ ಅನಿಸಿದೆ. ಗೋಡ್ಸೆಯ ಹಿಂಬಾಲಕರು ಅದನ್ನು ಮಾಡಲಿದ್ದಾರೆ ಎಂದು ನಂಬಿದ್ದೇನೆ. ಅವರು ಮಹಾತ್ಮಾ ಗಾಂಧಿ ಅವರನ್ನು ಕೊಂದಂತೆಯೇ ನನ್ನನ್ನೂ ಕೊಲ್ಲುತ್ತಾರೆ. ಪಾಕಿಸ್ತಾನದೊಂದಿಗೆ ನನಗೆ ಮಾಡುವುದೇನೂ ಇಲ್ಲ'' ಎಂದರು.
ಭೌಗೋಳಿಕತೆಯನ್ನು ಬದಲಿಸುವುದೇ ಉದ್ದೇಶ
ಕೇಂದ್ರ ಸರ್ಕಾರವು 370ನೇ ವಿಧಿ ರದ್ದುಗೊಳಿಸಿರುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಈ ವಿಚಾರದಲ್ಲಿ ಯಾರನ್ನು ಬಂಧಿಸಲಾಗಿದೆಯೋ, ಅವರನ್ನೆಲ್ಲಾ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು. ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ಯೋಜನೆಯ ಹಿಂದೆ ರಾಜ್ಯದ ಭೌಗೋಳಿಕತೆಯನ್ನು ಬದಲಿಸುವ ಉದ್ದೇಶವಿದೆ ಎಂದು ಆರೋಪಿಸಿದರು.
''ಕಾಶ್ಮೀರ ಭೌಗೋಳಿಕತೆಯನ್ನು ಬದಲಿಸುವುದು ಹಾಗೂ ಬಿಜೆಪಿಯಿಂದ ಮಾತ್ರವೇ ಮುಸ್ಲಿಮೇತರ ಮುಖ್ಯಮಂತ್ರಿಯನ್ನು ನೇಮಿಸುವುದು ಇದರ ಉದ್ದೇಶ. ಈ ಕಾರಣದಿಂದ ರಾಜ್ಯವನ್ನು ವಿಭಜಿಸಲಾಗಿದೆ'' ಎಂದರು.
ಮೋದಿ ವಿರುದ್ಧ ಪ್ರತಿಭಟಸಿದ ಕಾಶ್ಮೀರಿ ಫಸಲ್ ಗೃಹಬಂಧನ
ಬೇರೆ ರಾಜ್ಯಗಳಲ್ಲಿಯೂ ವಿಶೇಷ ಸ್ಥಾನಮಾನ ರದ್ದು!
ನಾಗಾಲ್ಯಾಂಡ್, ಮಿಜೋರಾಂ, ಮಣಿಪುರ, ಅಸ್ಸಾಂ ಮತ್ತು ಹಿಮಾಚಲ ಪ್ರದೇಶಗಳಿಗೆ ನೀಡಿರುವ ವಿಶೇಷ ಸ್ಥಾನಮಾನವನ್ನೂ ಕೂಡ ಶೀಘ್ರದಲ್ಲಿಯೇ ಕೇಂದ್ರ ಸರ್ಕಾರ ರದ್ದುಗೊಳಿಸಲಿದೆ ಎಂದು ಹೇಳಿದರು.
''ನಾನು ಒಬ್ಬ ಸಂಸದ. ಆದರೆ, ಅರುಣಾಚಲ ಪ್ರದೇಶ ಮತ್ತು ಲಕ್ಷದ್ವೀಪಕ್ಕೆ ಹೋಗಲಾಗುತ್ತದೆಯೇ? ಅದಕ್ಕೆ ನಾನು ಅನುಮತಿ ಪಡೆದುಕೊಳ್ಳಬೇಕು. ಅಸ್ಸಾಂನ ಬುಡಕಟ್ಟು ಪ್ರದೇಶದಲ್ಲಿ ನಾನು ಜಮೀನು ಖರೀದಿಸಲು ಆಗುತ್ತದೆಯೇ? ಇಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ಆಗಿರುವುದು ನಿಮಗೂ ಆಗುತ್ತದೆ ಎಂದು ಅಸ್ಸಾಂ, ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್ ಮತ್ತು ಹಿಮಾಚಲ ಪ್ರದೇಶದ ಜನರಿಗೆ ಹೇಳುತ್ತಿದ್ದೇನೆ'' ಎಂದರು.
ನಾಗಾಲ್ಯಾಂಡ್ನಲ್ಲಿ ಎರಡು ಧ್ವಜ
''ನಾಗಾ ಪ್ರತ್ಯೇಕತಾವಾದಿಗಳೊಂದಿಗೆ ಸರ್ಕಾರ ಮಾತುಕತೆ ನಡೆಸುತ್ತಿದೆ. ಅವರು ಇನ್ನೂ ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿಲ್ಲ. ನಾಗಾದ ದೊಡ್ಡ ನಾಯಕ ಸತ್ತಾಗ, ಅವರು ತ್ರಿವರ್ಣ ಧ್ವಜದೊಂದಿಗೆ ತಮ್ಮದೇ ಸ್ವಂತ ಧ್ವಜವನ್ನೂ ಹಾರಿಸುತ್ತಾರೆ. ಸರ್ಕಾರದ ಜನರು ಅಲ್ಲಿಗೆ ಹೋಗುತ್ತಾರೆ. ಆದರೆ, ಅಲ್ಲಿ ಎರಡು ಧ್ವಜಗಳಿರುವುದು ಅವರಿಗೆ ನೆನಪಿಗೆ ಬರುವುದಿಲ್ಲವೇ? ನೀವು ಯಾರನ್ನು ಮೂರ್ಖರನ್ನಾಗಿಸಲು ಹೊರಟಿದ್ದೀರಿ?'' ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.