ಹೈದರಾಬಾದ್ನಲ್ಲಿ ಮತ್ತೊಂದು ಮರ್ಯಾದಾ ಹತ್ಯೆ: ತಿಂಗಳಲ್ಲಿ ಎರಡನೇ ಘಟನೆ
ಹೈದರಾಬಾದ್, ಮೇ 21: ಮುಸ್ಲಿಂ ಯುವತಿಯನ್ನು ವಿವಾಹವಾಗಿದ್ದ ದಲಿತ ಯುವಕನನ್ನು ಕೊಚ್ಚಿ ಕೊಂದಿದ್ದ ಘಟನೆ ಮಾಸುವ ಮುನ್ನವೇ ಮುತ್ತಿನ ನಗರಿ ಹೈದರಾಬಾದಿನಲ್ಲಿ ಮತ್ತೊಂದು ಮರ್ಯಾದೆ ಹತ್ಯೆ ನಡೆದಿದೆ. ಅಂತರ್ಜಾತಿ ವಿವಾಹವಾಗಿದ್ದ 24 ವರ್ಷದ ಯುವಕನನ್ನು ಪತ್ನಿಯ ಸಂಬಂಧಿಕರು ಬೇಗಂ ಬಜಾರ್ನ ಜನನಿಬಿಡ ಪ್ರದೇಶದಲ್ಲಿ ಚಾಕುವಿನಿಂದ ಇರಿದು ಕೊಂದಿದ್ದಾನೆ ಎನ್ನಲಾಗಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಶುಕ್ರವಾರ ಶಾಹಿನಾಯತ್ಗುಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 24 ವರ್ಷದ ನೀರಜ್ ಕುಮಾರ್ ಪನ್ವರ್ ಎಂಬಾತನನ್ನು ಚಾಕುವಿನಿಂದ ಇರಿದು ಕೊಲ್ಲಲಾಗಿದೆ. ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದ ಕಾರಣಕ್ಕೆ ಪತ್ನಿಯ ಸಂಬಂಧಿಕರಿಂದಲೇ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪನ್ವರ್ ಕುಟುಂಬ ಕಳೆದ ಹತ್ತಾರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಕಡಲೆಕಾಯಿ ವ್ಯಾಪಾರ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ತೆಲಂಗಾಣ ಮರ್ಯಾದಾ ಹತ್ಯೆ: ದಲಿತ ನಾಗರಾಜು ಪತ್ನಿಗೆ ಬಿಜೆಪಿ ಟಿಕೆಟ್?
ಪತ್ನಿ ಕುಟುಂಬದಿಂದ ನಿರಂತರ ಬೆದರಿಕೆ
ಒಂದೂವರೆ ವರ್ಷದ ಹಿಂದೆ ನೀರಜ್ 20 ವರ್ಷದ ಸಂಜನಾ ಎಂಬ ಯುವತಿಯನ್ನು ವಿವಾಹವಾಗಿದ್ದ. ಈ ವಿವಾಹವಾದಾಗಿನಿಂದಲೂ ಸಂಜನಾ ಕುಟುಂಬಸ್ಥರಿಂದ ನಿರಂತರ ಬೆದರಿಕೆಯಿತ್ತು. ಪ್ರೇಮವಿವಾಹವಾಗಿದ್ದ ಈ ದಂಪತಿಗೆ ಒಂದೂವರೆ ತಿಂಗಳ ಮಗುವಿದೆ. ಇನ್ನು ವಿವಾಹದ ನಂತರ ಪರೋಕ್ಷವಾಗಿ ಸಂಜನಾ ಕುಟುಂಬಸ್ಥರಿಂದ ಬೆದರಿಕೆ ಬರುತ್ತಿದ್ದರಿಂದ ನಮಗೆ ಚಿಂತೆಯುಂಟು ಮಾಡಿತ್ತು. ಇದಕ್ಕಾಗಿಯೇ ನಾವು ಅಫ್ಜಲ್ಗಂಜ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರನ್ನು ದಾಖಲಿಸಿದ್ದೆವು ಎಂದು ನೀರಜ್ ತಂದೆ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಹೈದರಾಬಾದ್ ಮರ್ಯಾದಾ ಹತ್ಯೆಯ ಬಗ್ಗೆ ಮೌನ ಮುರಿದ ಅಸಾದುದ್ದೀನ್ ಓವೈಸಿ
ಸಂಜೆ ಸಮಯದಲ್ಲಿ ದಾಳಿ ಮಾಡಿ ಹತ್ಯೆ
ಪ್ರೇಮವಿವಾಹದ ನಂತರ ನೀರಜ್ ಮೇಲೆ ದ್ವೇಷ ಕಟ್ಟಿಕೊಂಡಿದ್ದ ಸಂಜನಾ ಕುಟುಂಬಸ್ಥರು ಶುಕ್ರವಾರ ಕೊನೆಗೂ ತಮ್ಮ ಆಕ್ರೋಶವನ್ನು ತೀರಿಸಿಕೊಂಡಿದ್ದಾರೆ. ಸಂಜೆ ನೀರಜ್ ಮತ್ತು ಅವರ ತಾತ ಅಂಗಡಿಯನ್ನು ಮುಚ್ಚಿ ಸಂಬಂಧಿಕರ ಅಂಗಡಿಗೆ ಹಿಂತಿರುಗುವ ವೇಳೆ ಐವರು ದುಷ್ಕರ್ಮಿಗಳು ಚಾಕುವಿನಿಂದ ದಾಳಿ ಮಾಡಿ ಕೇವಲ ಐದು ನಿಮಿಷಗಳ ಅಂತರದಲ್ಲಿ ಕೊಂದಿದ್ದಾರೆ ಎಂದು ಅವರ ತಂದೆ ರಾಜೇಂದ್ರ ಪನ್ವರ್ ತಿಳಿಸಿದ್ದಾರೆ.
|
ಪತ್ನಿಯ ಅಣ್ಣನಿಂದಲೇ ಕೊಲೆ
ಸಂಜನಾ ಅನ್ಯ ಜಾತಿಯ ಯುವಕನನ್ನು ವಿವಾಹವಾಗಿದ್ದನ್ನು ವಿರೋಧಿಸಿದ್ದ ಆಕೆಯ ಅಣ್ಣ ನೀರಜ್ನನ್ನು ಕೊಲ್ಲುವುದಕ್ಕಾಗಿ ಕಳೆದ ಆರು ತಿಂಗಳಿನಿಂದ ಹೊಂಚು ಹಾಕಿದ್ದ. ಒಂದು ವಾರದಿಂದ ನೀರಜ್ ಚಟುವಟಿಕೆಗಳನ್ನು ಗಮನಿಸುತ್ತಿದ್ದ ಸಂಜನಾ ಅಣ್ಣ ತನ್ನ ಶುಕ್ರವಾರ ಜನಸಂದಣಿ ಕಡಿಮೆಯಿದ್ದ ಸಂದರ್ಭವನ್ನು ಕಾಯ್ದುಕೊಂಡು ತನ್ನ ಸಹಚರರನ್ನು ಕರೆಯಿಸಿಕೊಂಡಿದ್ದಾನೆ. ತನ್ನ ಅಂಗಡಿ ಮುಚ್ಚಿ ನೀರಜ್ ರಸ್ತೆ ದಾಟುತ್ತಿದ್ದ ವೇಳೆ ಹಿಂದಿನಿಂದ ಬಂದ ಆತನ ಪತ್ನಿಯ ಸಹೋದರರು ಮೊದಲು ಗ್ರ್ಯಾನೆಟ್ ಕಲ್ಲಿನಿಂದ ತಲೆಗೆ ಹೊಡೆದು, ನಂತರ ಎಳೆನೀರು ಕೊಚ್ಚಲು ಬಳಸುವ ಕತ್ತಿಯಿಂದ ಮನಸೋ ಇಚ್ಛೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ನೋಡಿ ಕೊಲೆಗಾರರ ಬಂಧನ
ಈ ಸುದ್ದಿ ಕ್ಷಣಮಾತ್ರದಲ್ಲಿ ನಗರದೆಲ್ಲೆಡೆ ಹಬ್ಬಿ ಪೊಲೀಸರು ಸ್ಥಳಕ್ಕೆ ಆಗಮಿಸಿ ನೀರಜ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಹೋಗುವ ವೇಳೆಗೆ ನೀರಜ್ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ. ನೀರಜ್ನನ್ನು ಹತ್ಯೆ ಮಾಡಿದ ಐವರನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಖಚಿತ ಪಡಿಸಿಕೊಂಡಿದ್ದಾರೆ. ಈ ಪಕ್ರರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಬಂಧಿಸಿದ್ದು, ಮರ್ಯಾದೆ ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೀರಜ್ನ ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಹತ್ಯೆ ಖಂಡಿಸಿ ಬೇಗಂ ಬಜಾರ್ ಬಂದ್
ಅಂತರ್ಜಾತಿ ವಿವಾಹವಾದ ನಂತರ ಪತ್ನಿಯ ಕುಟುಂಬಸ್ಥರಿಂದ ನಿರಂತರ ಬೆದರಿಕೆ ಬರುತ್ತಿದೆ ಎಂದು ನೀರಜ್ ಒಂದು ವರ್ಷದ ಹಿಂದೆಯೇ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆದರೂ ಪೊಲೀಸರು ರಕ್ಷಣೆ ನೀಡುವಲ್ಲಿ ಮತ್ತು ಆತನ ಪತ್ನಿ ಕುಟುಂಬಸ್ಥರನ್ನು ಕರೆಸಿ ಎಚ್ಚರಿಕೆ ನೀಡುವುದಾಗಲಿ ಮಾಡಿಲ್ಲ ಎಂದು ನೀರಜ್ ಸಂಬಂಧಿಕರು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ನೀರಜ್ ಸಾವಿನಿಂದ ಆಕ್ರೋಶಗೊಂಡ ಬೇಗಂಬಜಾರ್ ವ್ಯಾಪಾರಿಗಳು ಶುಕ್ರವಾರ ಮಧ್ಯರಾತ್ರಿಯೇ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಜೊತೆಗೆ ನೀರಜ್ ಸಾವನ್ನು ಖಂಡಿಸಿ ಶನಿವಾರ ಬೇಗಂಬಜಾರ್ ಬಂದ್ಗೆ ಕರೆ ನೀಡಿದ್ದಾರೆ.
ಇದೇ ತಿಂಗಳ ಮೇ 4ರಂದು ಕುಟುಂಬದ ಅನುಮತಿಯಿಲ್ಲದೆ ಮುಸ್ಲೀಂ ಯುವತಿಯೊಬ್ಬಳು ಹಿಂದೂ ಯುವಕನನ್ನು ವಿವಾಹವಾಗಿದ್ದ ಕಾರಣಕ್ಕೆ ತೆಲಂಗಾಣದ ಸರೂರ್ ನಗದಲ್ಲಿ ಯುವತಿಯ ಕಣ್ಣಮುಂದೆ ನಾಗರಾಜ್ ಎಂಬ ದಲಿತ ಯುವಕನ್ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ವಿವಾಹವಾದ ನಂತರ ಗುಟ್ಟಾಗಿ ಸಂಸಾರ ಮಾಡುತ್ತಿದ್ದರೂ ಯುವತಿಯ ಸಹೋದರ ಮತ್ತು ಆತನ ಸ್ನೇಹಿತರು ಬೈಕ್ನಲ್ಲಿ ನಾಗರಾಜನನ್ನು ಹಿಂಬಾಲಿಸಿ ಬಂದು ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು, ಇದೀಗ ಆ ಘಟನೆ ತಿಂಗಳು ತುಂಬುವ ಮುನ್ನವೇ ಮತ್ತೊಂದು ಘಟನೆ ಸಂಭವಿಸಿದೆ.