ಚುನಾವಣೆಗೂ ಮುನ್ನವೇ ರಾಮಮಂದಿರ ನಿರ್ಮಾಣ ಆರಂಭ: ಅಮಿತ್ ಶಾ
ಹೈದರಾಬಾದ್, ಜುಲೈ 14: ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವು 2019ರ ಚುನಾವಣೆಗೆ ಮುನ್ನವೇ ಆರಂಭವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಹೈದರಾಬಾದ್ನಲ್ಲಿ ಪಕ್ಷದ ಮುಖಂಡರ ಜತೆ ಸಭೆ ನಡೆಸಿದ ಅವರು, ಚುನಾವಣೆಗೂ ಮುನ್ನವೇ ಅಲ್ಲಿ ಮಂದಿರ ನಿರ್ಮಾಣದ ಕಾರ್ಯಕ್ಕೆ ಚಾಲನೆ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ಅಯೋಧ್ಯೆಯಲ್ಲಿ ಮಸೀದಿ ಇದ್ದಿದ್ದೇ ಸುಳ್ಳು: ವಾಸೀಮ್ ರಿಜ್ವಿ
ಸಭೆಯಲ್ಲಿ ನಡೆದ ಚರ್ಚೆಯ ಕುರಿತು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಪೆರಲಾ ಸೆಖರ್ಜಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
'ಬೆಳವಣಿಗೆಗಳನ್ನು ಗಮನಿಸಿದಾಗ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಮುನ್ನವೇ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಲಿದೆ ಎಂದು ನಾನು ನಂಬಿದ್ದೇನೆ' ಎಂದು ಶಾ ಅವರು ಹೇಳಿದ್ದಾಗಿ ಪೆರಲಾ ತಿಳಿಸಿದರು.
ಹೈದರಾಬಾದ್ನಲ್ಲಿ ಶುಕ್ರವಾರವಿಡೀ ಸಭೆ ನಡೆಸಿದ ಅವರು, ಅವಧಿಗೂ ಮುನ್ನವೇ ಚುನಾವಣೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸೂಕ್ತ ಕಾರ್ಯತಂತ್ರಗಳನ್ನು ರೂಪಿಸುವಂತೆ ಪಕ್ಷದ ಮುಖಂಡರಿಗೆ ಶಾ ಸೂಚನೆ ನೀಡಿದರು.