ಪ್ರಧಾನಿ ಮೋದಿಯನ್ನು ಕರೆದುಕೊಂಡು ಬಂದು ಗೆಲ್ಲಿಸಿ: ಓವೈಸಿ ಸವಾಲು
ಹೈದರಾಬಾದ್, ನವೆಂಬರ್ 26: ಡಿಸೆಂಬರ್ 1ರಂದು ನಡೆಯುವ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಪ್ರಚಾರಕ್ಕೆ ಆಗಮಿಸುವಂತೆ ಪ್ರಧಾನಿ ಮೋದಿ ಅವರಿಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದಾರೆ. ಮೋದಿ ಪ್ರಚಾರಕ್ಕೆ ಬರಲಿ, ಅವರ ಪಕ್ಷ ಬಿಜೆಪಿ ಎಷ್ಟು ಸೀಟುಗಳಲ್ಲಿ ಗೆಲ್ಲುತ್ತದೆಯೋ ನೋಡಬೇಕು ಎಂದು ಓವೈಸಿ ಹೇಳಿದ್ದಾರೆ.
'ನೀವು ಹಳೆಯ ನಗರಕ್ಕೆ (ಹೈದರಾಬಾದ್) ನರೇಂದ್ರ ಮೋದಿ ಅವರನ್ನು ಕರೆತನ್ನಿ ಮತ್ತು ಇಲ್ಲಿ ಪ್ರಚಾರ ನಡೆಸಿ. ಏನಾಗುತ್ತೆ ಎಂಬುದನ್ನು ನಾವು ನೋಡುತ್ತೇವೆ. ಅವರ ಸಭೆಗಳನ್ನು ಆಯೋಜಿಸಿ, ಇಲ್ಲಿ ನೀವು ಎಷ್ಟು ಸೀಟುಗಳಲ್ಲಿ ಗೆಲ್ಲುತ್ತೀರಿ ಎಂಬುದನ್ನು ನೋಡುತ್ತೇವೆ' ಎಂದು ಹೈದರಾಬಾದ್ನಲ್ಲಿ ಚುನಾವಣಾ ಪ್ರಚಾರದಲ್ಲಿ ಗುರುವಾರ ಹೇಳಿಕೆ ನೀಡಿದ್ದಾರೆ.
ತಾಕತ್ತಿದ್ದರೆ ಮೊದಲು ಚೀನಾ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ: ಬಿಜೆಪಿಗೆ ಓವೈಸಿ ಸವಾಲು
ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ತೆಲಂಗಾಣದಲ್ಲಿ ತನ್ನ ನೆಲೆ ಕಂಡುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಚುನಾವಣಾ ಪ್ರಚಾರಕ್ಕೆ ಬಿಜೆಪಿ ಪ್ರಮುಖ ನಾಯಕರು ಆಗಮಿಸಲಿದ್ದಾರೆ ಎಂಬ ಸುದ್ದಿಯ ನಡುವೆ ಓವೈಸಿ ಈ ಸವಾಲು ಹಾಕಿದ್ದಾರೆ. ಮುಂದೆ ಓದಿ.
ಹೈದರಾಬಾದ್ ನಾಶಕ್ಕೆ ಪ್ರಯತ್ನ
'ಇವು ಪಾಲಿಕೆ ಚುನಾವಣೆಗಳು. ಅವರು ಇಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಹೈದರಾಬಾದ್ ಅಭಿವೃದ್ಧಿ ಹೊಂದಿದ ನಗರವಾಗಿ ಬೆಳೆದಿದೆ. ಅನೇಕ ಎಂಎನ್ಸಿಗಳು ಇಲ್ಲಿ ತಲೆಎತ್ತಿವೆ. ಆದರೆ ಬಿಜೆಪಿ ಹೈದರಾಬಾದ್ ಬ್ರ್ಯಾಂಡ್ ಹೆಸರನ್ನು ತೆಗೆದುಹಾಕುವ ಮೂಲಕ ಅದನ್ನು ನಾಶಪಡಿಸಲು ಬಯಸಿದೆ' ಎಂದು ಓವೈಸಿ ಆರೋಪಿಸಿದ್ದಾರೆ.
ಅಮಿತ್ ಶಾ, ಮೋದಿ ಪ್ರಚಾರ?
ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್, ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪ್ರಚಾರ ನಡೆಸಲು ಹೈದರಾಬಾದ್ಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.
GHMC:ಕ್ರಿಮಿನಲ್ ಕೇಸ್ ಅಭ್ಯರ್ಥಿಗಳು ಬಿಜೆಪಿಯಲ್ಲೇ ಅಧಿಕ
ಸರ್ಜಿಕಲ್ ಸ್ಟ್ರೈಕ್ ಮಾಡಿ ನೋಡೋಣ
'ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಹೆಸರು ಹೇಳಲು ಭಯಪಡುತ್ತಾರೆ. ಮೊದಲು ಎಲ್ಎಸಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿ, ನಾನು ಖಂಡಿತಾ ನಿಮ್ಮನ್ನು ಶ್ಲಾಘಿಸುತ್ತೇನೆ. ನಮ್ಮ ಕೆಚ್ಚೆದೆಯ ಸೈನಿಕರು ಅಲ್ಲಿ ಪ್ರಾಣ ತೆತ್ತಿದ್ದಾರೆ. ಇಂದು ಆ ಭಾಗವನ್ನು ಚೀನಾದ ಪಡೆಗಳು ಆಕ್ರಮಿಸಿಕೊಂಡಿವೆ. ಅಲ್ಲಿ ಹೋಗಿ ಸರ್ಜಿಕಲ್ ಸ್ಟ್ರೈಕ್ ಮಾಡಿ. ನೀವು ಹೇಳುತ್ತೀರಿ ಹಳೆಯ ನಗರದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುತ್ತೇವೆ ಎಂದು. ನಮಗಾಗಿ ನೀವೇನು ಮಾಡಿದ್ದೀರಿ?' ಎಂದು ಅಸಾದುದ್ದೀನ್ ಓವೈಸಿ ಟೀಕಿಸಿದ್ದರು.
ಓವೈಸಿ ಪರ ಮತ, ಭಾರತದ ವಿರುದ್ಧದ ಮತ
'ಓವೈಸಿ ಯಾವಾಗಲೂ ಪ್ರತ್ಯೇಕವಾದ ಮತ್ತು ಉಗ್ರವಾದದ ಭಾಷೆಯನ್ನು ಮಾತನಾಡುತ್ತಾರೆ. ಅಕ್ಬರುದ್ದೀನ್ ಮತ್ತು ಅಸಾದುದ್ದೀನ್ ಓವೈಸಿ ಅಭಿವೃದ್ಧಿಯ ಬಗ್ಗೆ ಮಾತನಾಡುವುದೇ ಹಾಸ್ಯಾಸ್ಪದ. ಅವರು ಹಳೆಯ ಹೈದರಾಬಾದ್ನಲ್ಲಿ ಅಭಿವೃದ್ಧಿಗೆ ಅವಕಾಶ ನೀಡಲಿಲ್ಲ. ಆದರೆ ಅವರು ರೊಹಿಂಗ್ಯಾ ಮುಸ್ಲಿಮರಿಗೆ ಮಾತ್ರ ಅವಕಾಶ ನೀಡಿದರು. ಓವೈಸಿ ಜಿನ್ನಾರ ಅವತಾರದಂತೆ. ಓವೈಸಿಗೆ ಹಾಕುವ ಪ್ರತಿ ಒಂದು ಮತವೂ ಭಾರತದ ವಿರುದ್ಧ ಮತ್ತು ಭಾರತದ ಪ್ರತಿ ನಿಲುವಿನ ವಿರುದ್ಧದ ಮತ' ಎಂದು ಇತ್ತೀಚೆಗೆ ಅಲ್ಲಿಗೆ ಭೇಟಿ ನೀಡಿದ್ದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದರು.