ಅಗ್ನಿಪಥ್ ಹಿಂಸಾಚಾರ: ಸಿಎಂ ಯೋಗಿಗೆ ಓವೈಸಿ 'ಬುಲ್ಡೋಜರ್' ಪ್ರಶ್ನೆ
ಹೈದರಾಬಾದ್, ಜೂನ್ 19: ಅಗ್ನಿಪಥ್ ಯೋಜನೆಯ ವಿರುದ್ದ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದಾರೆ.
ಪೈಗಂಬರ್ ಬಗ್ಗೆ ಬಿಜೆಪಿ ನಾಯಕಿ ನೂಪರ್ ಶರ್ಮಾ ನೀಡಿದ್ದ ಹೇಳಿಕೆಯ ನಂತರ ಉತ್ತರ ಪ್ರದೇಶದ ಕೆಲವು ನಗರಗಳಲ್ಲಿ ಹಿಂಸಾಚಾರ ನಡೆದಿತ್ತು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿತ್ತು. ಇದಕ್ಕೆ ಪ್ರತಿಯಾಗಿ ಹಿಂಸಾಚಾರಕ್ಕೆ ಕುಮ್ಮುಕ್ಕು ನೀಡಿದ್ದಾರೆ ಎನ್ನಲಾಗುತ್ತಿರುವ ವ್ಯಕ್ತಿಗಳ ಕಟ್ಟಡಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆಯನ್ನು ಯೋಗಿ ಸರಕಾರ ನಡೆಸಿತ್ತು.
'ಸೇನೆ ಸೇರೋದು ದೇಶ ಸೇವೆಗೆ, ಎಡಬಿಡಂಗಿಗಳಿಗೆ ಅರ್ಥವಾಗುವುದಿಲ್ಲ'
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಸಾದುದ್ದೀನ್ ಓವೈಸಿ, "ಅಗ್ನಿಪಥ್ ಸ್ಕೀಂ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಈ ಪ್ರತಿಭಟನೆಯಲ್ಲಿ ತೊಡಗಿರುವ ಎಷ್ಟು ವ್ಯಕ್ತಿಗಳ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಿದ್ದೀರಿ"ಎಂದು ಪ್ರಶ್ನಿಸಿದ್ದಾರೆ.
"ನಾವು ಮುಸ್ಲಿಮರು ಈ ದೇಶದ ಪ್ರಜೆಗಳಲ್ಲವೇ, ನಾವು ನಿಮ್ಮ ಮಕ್ಕಳಲ್ಲವೇ? ಶುಕ್ರವಾರ ನೀವು ನಮ್ಮನ್ನು ಉದ್ದೇಶಿಸಿ ಮಾತನಾಡುತ್ತೀರಿ ಎಂದು ನಾವು ಭಾವಿಸಿದ್ದೆವು. ಆದರೆ, ಆ ಕೆಲಸವನ್ನು ನೀವು ಮಾಡಲಿಲ್ಲ" ಎಂದು ಓವೈಸಿ, ಪ್ರಧಾನಿ ಮೋದಿಯವರನ್ನು ಉದ್ದೇಶಿಸಿ ಹೇಳಿಕೆಯನ್ನು ನೀಡಿದ್ದಾರೆ.
"ಕೇಂದ್ರ ಸರಕಾರದ ತಪ್ಪು ನಿರ್ಧಾರದಿಂದ ಯುವಕರು ಇಂದು ಅಗ್ನಿಪಥ್ ಸ್ಕೀಂ ವಿರೋಧಿಸಿ ರಸ್ತೆಗಿಳಿದಿದ್ದಾರೆ. ಅವರ ಆಸ್ತಿಯ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಿರುವ ಬಗ್ಗೆ ಸಾರ್ವಜನಿಕ ಹೇಳಿಕೆಯನ್ನು ನೀಡುತ್ತೀರಾ. ಯಾರ ಮನೆಯೂ ನೆಲಸಮವಾಗಬಾರದು ಎಂದು ನಾವು ಬಯಸುತ್ತೇವೆ"ಎಂದು ಅಸಾದುದ್ದೀನ್ ಓವೈಸಿ, ಉತ್ತರ ಪ್ರದೇಶ ಮತ್ತು ಕೇಂದ್ರ ಸರಕಾರವನ್ನು ಕುಟುಕಿದ್ದಾರೆ.
ಯೋಗಿ ಆದಿತ್ಯನಾಥ ನ್ಯಾಯಾಧೀಶರಾಗಲು ಹೊರಟಿದ್ದಾರೆ: ಒವೈಸಿ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಲಹಾಬಾದ್ ಉಚ್ಚನ್ಯಾಯಾಲಯದ ನ್ಯಾಯಾಧೀಶರಂತೆ ವರ್ತಿಸುತ್ತಿದ್ದಾರೆ. ಯಾರನ್ನಾದರೂ ಗುರುತಿಸಿ, ಅಂತವರ ಮನೆಯನ್ನು ಹೊಡೆದು ಹಾಕಿಸುತ್ತಾರೆ ಎಂದು ಗುಜರಾತಿನ ಕಛ್ ನಲ್ಲಿ ಸಭೆಯನ್ನು ಉದ್ದೇಶಿಸಿ ಅಸಾದುದ್ದೀನ್ ಓವೈಸಿ ಇತ್ತೀಚೆಗೆ ಹೇಳಿಕೆಯನ್ನು ನೀಡಿದ್ದರು.